ಕನ್ನಡಪ್ರಭ ವಾರ್ತೆ ತುಮಕೂರುಅಪಾಯ ತಂದೊಡ್ಡುವ ಮಾಧ್ಯಮಗಳ ಸಹವಾಸಕ್ಕಿಂತ ಇಂದಿನ ಮಕ್ಕಳು ಸಾಹಿತ್ಯ, ಸಂಗೀತ, ಕ್ರೀಡೆ, ಕಲಾತ್ಮಕ ವಿಷಯಗಳಲ್ಲಿ ತೊಡಗುವುದು ಅತ್ಯಂತ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕಿ ಕವಯಿತ್ರಿ ವಿದ್ಯಾ ಅರಮನೆಯವರು ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವುದು ಅಭಿನಂದನೀಯ ಸಂಗತಿಯಾಗಿದೆ ಎಂದು ಶಿರಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ .ಎನ್ ಕೃಷ್ಣಪ್ಪ ಹೇಳಿದರು.ನಗರದಲ್ಲಿ ದಾರಿಬುತ್ತಿ ಬಳಗದ ವತಿಯಿಂದ ನಡೆದ ವಿದ್ಯಾ ಅರಮನೆ ಅವರ ಚಿಟ್ಟೆಗೊಂಬೆ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಕೃತಿಯ ಕವಿತೆಗಳಲ್ಲಿ ಮಕ್ಕಳ ಲೋಕವೆ ಅನಾವರಣಗೊಂಡಿದೆ. ಮಕ್ಕಳ ಕುತೂಹಲ, ಪ್ರಶ್ನೆ, ಕೌತುಕ, ಬೆರಗುಗಳೆಲ್ಲ ಹಾಡಬಲ್ಲಷ್ಟು ಸುಂದರವಾಗಿವೆ. ಶಿಕ್ಷಕರಲ್ಲಿರಬಹುದಾದ ಕವಿತ್ವ ಮಕ್ಕಳ ಮನಸ್ಸನ್ನು ಖಂಡಿತಾ ತಟ್ಟುತ್ತದೆ ಎಂದರು.
ಲೇಖಕಿಯರ ಸಂಘದ ಅಧ್ಯಕ್ಷ ಮಲ್ಲಿಕಾ ಬಸವರಾಜು ಮಾತನಾಡಿ, ಕೇಡಿಲ್ಲದ ಮಕ್ಕಳ ಸಂಘದಲ್ಲಿರುವುದೆಂದರೆ ಅದು ಸ್ವರ್ಗಕ್ಕೆ ಸಮನಾದುದು. ಮಕ್ಕಳ ಸಾಂಗತ್ಯದಲ್ಲಿ ನಾವು ನಮ್ಮನ್ನು ಮತ್ತಷ್ಟು ಕಂಡುಕೊಳ್ಳಲು ತೀಡಿ ಕೊಳ್ಳಲು ಸಾಧ್ಯ ಎಂದು ಹೇಳಿದರು.
ಪತ್ರಕರ್ತ ಉಗಮ ಶ್ರೀನಿವಾಸ್ ಮಾತನಾಡಿ, ಚಿಟ್ಟೆಗೊಂಬೆಯಲ್ಲಿ ಬಹಳಷ್ಟು ಮೆಟಾಫರ್ಗಳಿವೆ. ಅನೇಕ ಶಬ್ದಗಳಲ್ಲಿ ಹೇಳುವುದನ್ನು ಒಂದು ಪ್ರತಿಮೆಯ ಮೂಲಕ ಹೇಳುವುದು ಸವಾಲಿನ ಕೆಲಸ. ವಿದ್ಯಾರವರು ಮಕ್ಕಳಿಗಾಗಿ ಬರೆದ ಕವಿತೆಯಲ್ಲಿ ಅಂತಃಕರಣದ ತುಡಿತಗಳಿವೆ ಎಂದರು.ಸ್ವದೇಶಿ ವಿಶ್ವನಾಥ್, ಕುಣಿಗಲ್ ದಿನೇಶ್ ಕುಮಾರ್ ರವರು ಶುಭ ಹಾರೈಸಿ ಮಾತನಾಡಿದರು. ಪುಸ್ತಕ ಕುರಿತಂತೆ ವನಜಾಕ್ಷಿ ಮರಳ ಕುಂಟೆ, ರ್ಶಾನ್ ಎಸ್ ಆರ್ ಮಾತನಾಡಿದರು. ಕಾರ್ಯಾಕ್ರಮದಲ್ಲಿ ಲಕ್ಷ್ಮಿ ಸಾಗರ್, ಶೈಲಜ, ಅಶೋಕ ಚಕ್ರವರ್ತಿ, ವಿದ್ಯಾ ಅರಮನೆ, ಮನೋಜ್ ಮಕರಂದ, ರಘು, ವೆಂಕಟಲಕ್ಷ್ಮಮ್ಮ , ಗಂಗಲಕ್ಷ್ಮಿ, ಲೇಖಕಿ ಗೀತಾ ನಾರಾಯಣ್,ರಂಗಮ್ಮ ಹೊದೇಕಲ್ ಉಪಸ್ಥಿತರಿದ್ದರು.