ತಾಲೂಕು ಆರೋಗ್ಯ ಅಧಿಕಾರಿ, ಸಿಬ್ಬಂದಿ ಶಾಲೆಗೆ ಭೇಟಿ ಪರಿಶೀಲನೆಕನ್ನಡಪ್ರಭ ವಾರ್ತೆ ಮುಂಡಗೋಡ
ಜವಾಹರ ನವೋದಯ ವಿದ್ಯಾಲಯ ವಸತಿ ಶಾಲೆಯ ೫೧೮ ಮಕ್ಕಳು ಗುರುವಾರ ಊಟ ಮಾಡಿದ್ದು, ಈ ಪೈಕಿ ಸುಮಾರು ೭೮ ಮಕ್ಕಳಲ್ಲಿ ಜ್ವರ, ವಾಂತಿ, ಹೊಟ್ಟೆನೋವು ಸೇರಿದಂತೆ ಮುಂತಾದ ರೀತಿ ತೊಂದರೆ ಕಾಣಿಸಿಕೊಂಡಿದ್ದು, ಮುಂಡಗೋಡ ಸರಕಾರಿ ಆಸ್ಪತ್ರೆ ಹಾಗೂ ಮಳಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಕುರಿತು ಮಾಹಿತಿ ಪಡೆದುಕೊಂಡ ತಾಲೂಕಾ ಆರೋಗ್ಯಾಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಅನಾರೋಗ್ಯ ಪೀಡಿತ ಮಕ್ಕಳು ಮಾತ್ರವಲ್ಲದೇ ಇನ್ನುಳಿದ ಮಕ್ಕಳ ಆರೋಗ್ಯ ಕೂಡ ತಪಾಸಣೆ ನಡೆಸಿದರು. ಬಳಿಕ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳೊಡನೆ ಸಮಾಲೋಚನೆ ನಡೆಸಿ ಅಡುಗೆ ಕೋಣೆಯ ಸ್ವಚ್ಛತೆಯ ಕುರಿತು ಆರೋಗ್ಯ ಶಿಕ್ಷಣ ನೀಡಿ ಆಹಾರದ ಮಾದರಿಯನ್ನು ಶೀತಲ ಸರಪಳಿಯ ಪೆಟ್ಟಿಗೆಯೊಂದಿಗೆ ಮಾದರಿಯನ್ನು ಸಂಗ್ರಹಿಸಲಾಯಿತು. ಸದರಿ ಮಾದರಿಯನ್ನು ಛೀಫ್ ಫುಡ್ ಅನಾಲಿಸ್ಟ್ ಡಿವಿಜನ್, ಫುಡ್ ಲ್ಯಾಬೋರೆಟರಿ ಬೆಳಗಾವಿ ತಿಲಕವಾಡಿಗೆ ಕಳುಹಿಸಲಾಯಿತಲ್ಲದೇ ನೀರಿನ ಮಾದರಿ ಸಂಗ್ರಹಿಸಲಾಯಿತು. ಬಳಿಕ ಅಡುಗೆಕೋಣೆ, ಕುಡಿಯುವ ನೀರಿನ ವ್ಯವಸ್ಥೆ, ಶುಚಿತ್ವ ಪರಿಶೀಲಿಸಿ, ಸಲಹೆ ಸೂಚನೆ ನೀಡಿದ್ದಾರೆ.
ಮಕ್ಕಳಲ್ಲಿ ಸಣ್ಣ ಪುಟ್ಟ ಆರೋಗ್ಯ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಚಿಕಿತ್ಸೆ ನೀಡಲಾಗಿದ್ದು, ಮಕ್ಕಳು ಚೇತರಿಸಿಕೊಂಡಿದ್ದಾರೆ. ಯಾವುದೇ ರೀತಿ ಆತಂಕಪಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ಆಹಾರದ ಮಾದರಿ ಮತ್ತು ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ ಇದಕ್ಕೆ ನಿಖರವಾದ ಕಾರಣ ತಿಳಿಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ನರೇಂದ್ರ ಪವಾರ ತಿಳಿಸಿದ್ದಾರೆ,