ಬ್ಯಾಡಗಿ: ಕೇವಲ ವಕೀಲ ವೃತ್ತಿಯಲ್ಲಿದ್ದವರಿಗಷ್ಟೇ ಕಾನೂನಿನ ಅರಿವು ಇರಬೇಕೆಂದೇನಿಲ್ಲ. ಭವಿಷ್ಯದ ದಿನಗಳಲ್ಲಿ ನಮ್ಮ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚುವಂತಹ ಸಂದರ್ಭಗಳು ಎದುರಾಗಲಿದ್ದು ಹೀಗಾಗಿ ಮಕ್ಕಳು ತಮ್ಮ ಶಿಕ್ಷಣದ ಜೊತೆಗೆ ಕಾನೂನಿನ ಕನಿಷ್ಠ ಅರಿವು ಪಡೆದುಕೊಳ್ಳಬೇಕಾಗುತ್ತದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಅಮೋಲ್ ಜೆ. ಹಿರಿಕುಡೇ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಶ್ರೀ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ ಬ್ಯಾಡಗಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನಿನ ತಿಳುವಳಿಕೆಗಳ ಕೊರತೆ ಹಾಗೂ ಅದಕ್ಕೆ ಅಗೌರವ ತೋರುವ ಮೂಲಕ ಕಾನೂನಿನ ಭಯವಿಲ್ಲದೇ ನಡೆದುಕೊಳ್ಳುತ್ತಿರುವ ವ್ಯಕ್ತಿಗಳಿಂದ ದೇಶದಲ್ಲಿ ಅನಗತ್ಯ ಸಂಘರ್ಷಗಳಿಗೆ ಕಾರಣವಾದರೇ, ಇನ್ನೊಂದೆಡೆ ಅಜ್ಞಾನಿಗಳಿಂದ ಕೂಡಿದಂತಹ ಸಮಾಜವೊಂದು ಸೃಷ್ಟಿಯಾಗುತ್ತಿದೆ ಎಂಬ ಭಯವು ಸಹ ಕಾಡುತ್ತಿದೆ. ಹೀಗಾಗಿ ಕಾನೂನು ತಿಳುವಳಿಕೆಗಳಿಗೆ ಇತ್ತೀಚೆಗೆ ಅತ್ಯಂತ ಮಹತ್ವ ಸಿಗುತ್ತಿದೆ ಎಂದರು.ಈ ವೇಳೆ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ದಿವಾಣಿ ನ್ಯಾಯಾಧೀಶರಾದ ಸುರೇಶ್ ವಗ್ಗನವರ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಆರ್.ಸಿ.ಶಿಡೇನೂರ ಅಧ್ಯಕ್ಷತೆ ವಹಿಸಿದ್ದರು. ಅಪರ ಸರ್ಕಾರಿ ವಕೀಲರಾದ ಪ್ರಭು ಶೀಗಿಹಳ್ಳಿ, ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಚಾರ್ಯೇ ಪೂರ್ಣಿಮಾ ಚಿನಿವಾಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ ಶಿಕ್ಷಕ ಜೀವರಾಜ ಛತ್ರದ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಆರ್.ಲಮಾಣಿ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಬಿ.ಯಲಗಚ್ಚ, ಕಾರ್ಯದರ್ಶಿ ಹೆಚ್.ಜಿ.ಮುಳಗುಂದ, ಸಹ ಕಾರ್ಯದರ್ಶಿ ಮಂಜುನಾಥ ಕುಮ್ಮೂರ, ಎಸ್.ಎನ್.ಬಾರ್ಕಿ, ಭಾರತಿ ಕುಲಕರ್ಣಿ, ಎಸ್.ಎಚ್.ಗುಂಡಪ್ಪನವರ, ಎಸ್.ಎಸ್.ಕೊಣ್ಣೂರ, ಸಿ.ಸಿ.ದಾನಣ್ಣನವರ, ಶ್ರೀಮತಿ ಮಂಜುಳಾ ಜಿಗಳಿ, ಎಸ್ .ಕೆ. ನಾಯಕ್, ಎಸ್ .ಕೆ. ಯತ್ನಳ್ಳಿ ಸೇರಿದಂತೆ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.