ನಾಗರಿಕರು ಜವಾಬ್ದಾರಿಯಿಂದ ಬದುಕು ನಿರ್ವಹಿಸಬೇಕು-ನ್ಯಾಯವಾದಿ ಪಾಟೀಲ್

KannadaprabhaNewsNetwork |  
Published : Sep 20, 2026, 03:15 AM IST
ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚನ್ನವೀರೇಶ ರೂಢಗಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಪರಾಧಿಕ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಗರಿಕರು ಅತ್ಯಂತ ಜವಾಬ್ದಾರಿಯಿಂದ ಬದುಕು ನಿರ್ವಹಿಸುವ ಅನಿವಾರ್ಯತೆಯಲ್ಲಿದ್ದಾರೆ ಎಂದು ನ್ಯಾಯವಾದಿ ವೀರನಗೌಡ ಪಾಟೀಲ ತಿಳಿಸಿದರು.

ಹಾನಗಲ್ಲ: ಅಪರಾಧಿಕ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಗರಿಕರು ಅತ್ಯಂತ ಜವಾಬ್ದಾರಿಯಿಂದ ಬದುಕು ನಿರ್ವಹಿಸುವ ಅನಿವಾರ್ಯತೆಯಲ್ಲಿದ್ದಾರೆ ಎಂದು ನ್ಯಾಯವಾದಿ ವೀರನಗೌಡ ಪಾಟೀಲ ತಿಳಿಸಿದರು.

ಹಾನಗಲ್ಲಿನ ತಾಲೂಕು ಪಂಚಾಯತ್ ಸಭಾಭವನದಲ್ಲಿ ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾವೇರಿ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ಹಾನಗಲ್ಲ, ಹಿರಿಯ ನಾಗರಿಕರ ಸ್ವಯಂಸೇವಾ ಸಂಸ್ಥೆಗಳು, ನಿವೃತ್ತ ನೌಕರರ ಸಂಘ ಹಾನಗಲ್ಲ ಇವರ ಸಹಯೋಗದಲ್ಲಿ ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹಿರಿಯ ನಾಗರಿಕರು ತಮ್ಮ ಇಳಿವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ಆದರೆ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಭಾವನಾತ್ಮಕವಾಗಿ ಮಕ್ಕಳಿಗೆ ಬಿಟ್ಟುಕೊಟ್ಟು ಒಮ್ಮೊಮ್ಮೆ ಪರಿತಪಿಸುವ ಸಂದರ್ಭಗಳಿವೆ. ಇಂತಹ ಸಂದರ್ಭಗಳು ಬಾರದಂತೆ ಇಳಿವಯಸ್ಸಿನಲ್ಲಿ ತಮ್ಮ ಹಿತಕ್ಕಾಗಿ ಆರ್ಥಿಕ ಸಬಲತೆಯನ್ನು ಇಟ್ಟುಕೊಳ್ಳಬೇಕು. ಅಲ್ಲದೆ ಮಕ್ಕಳು ತಮ್ಮನ್ನು ಕಾಪಾಡುವಂತೆ ಇರುವ ಕಾನೂನುಗಳನ್ನು ಬಳಸಿಕೊಳ್ಳಬೇಕು. ಇದಕ್ಕಾಗಿ ಇರುವ ಕಾನೂನುಗಳನ್ನು ತಿಳಿದುಕೊಂಡು ಇಳಿವಯಸ್ಸನ್ನು ಯಾವುದೇ ಆತಂಕಗಳಿಲ್ಲದೆ ಕಳೆಯುವಂತಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚನ್ನವೀರೇಶ ರೂಢಗಿ, ಹಿರಿಯ ನಾಗರಿಕರಿಗೆ ಸರ್ಕಾರದಿಂದ ಹತ್ತು ಹಲವು ಸೌಲಭ್ಯಗಳಿವೆ. ಅವನ್ನು ಪಡೆಯುವಲ್ಲಿ ಕಾಳಜಿಯಿಂದ ಮುಂದಾಗಬೇಕು. ಇಳಿವಯಸ್ಸಿನಲ್ಲಿ ನೆಮ್ಮದಿಯ ದಿನಗಳನ್ನು ಕಳೆಯಲು ಬೇಕಾಗುವ ವಾತಾವರಣ ಸೃಷ್ಟಿಸಿಕೊಳ್ಳಬೇಕು. ಉತ್ತಮ ಪರಿಸರದಲ್ಲಿ ಒಳ್ಳೆಯ ಒಡನಾಟದಲ್ಲಿ ದಿನಗಳನ್ನು ಸುಂದರಗೊಳಿಸುವ ಯತ್ನ ಹಿರಿಯ ನಾಗರಿಕರಿಂದಾಗಲಿ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎಚ್.ಎನ್. ಪಾಟೀಲ, ಹಿರಿಯ ನಾಗರಿಕರಿಗಾಗಿ ನೂರಾರು ಕಾನೂನುಗಳಿವೆ. ಆದರೆ ಅವು ನಮಗೆ ಸಿಗುವ ಸಾಧ್ಯತೆಗಳೇ ಕಡಿಮೆಯಾಗಿದೆ. ಬ್ಯಾಂಕು, ಸರ್ಕಾರಿ ಕಚೇರಿಗಳಲ್ಲಿ ನಮ್ಮ ಕೆಲಸಕ್ಕಾಗಿ ಅಲೆದಾಡುವ ಹಾಗೂ ಕೆಲಸವಾಗದೇ ಸಾಕಷ್ಟು ಬಾರಿ ಪರಿತಪಿಸುವ ಸಂದರ್ಭಗಳಿವೆ. ಪುಸ್ತಕದ ಕಾನೂನು ಜಾರಿಯಾಗಲು ಇಲಾಖೆಗಳು ನಮ್ಮ ಸಹಾಯಕ್ಕೆ ನಿಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ, ಆಶು ನದಾಫ, ನಿವೃತ್ತ ನೌಕರರ ಸಂಘದ ಖಜಾಂಚಿ ಅಶೋಕ ದಾಸರ, ಕಾರ್ಯದರ್ಶಿ ಆರ್.ಎಫ್. ತಿರುಮಲೆ, ಎಸ್.ಸಿ. ದುಮ್ಮೇರ, ಜಗದೀಶ ಗಂಟನವರ, ಲಕ್ಷ್ಮಣ ಬಾರ್ಕಿ, ಎಚ್.ಐ. ನಾಯಕ, ಲೀಲಾವತಿ ಪೂಜಾರ, ಕಲ್ಲಪ್ಪ ಚಿಕ್ಕೆರಿ, ಅಪರಾಧ ವಿಭಾಗದ ಪೊಲೀಸ್ ಮಂಜುನಾಥ ಈ ಸಂದರ್ಭದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಡಕಟ್ಟು ಸಿದ್ದಿ ಸಮುದಾಯಕ್ಕೆ ಪೌಷ್ಟಿಕಾಹಾರ ವಿತರಿಸಿ
ರೋಗ ಬರುವ ಮುಂಚೆ ಜಾಗೃತಿ ವಹಿಸಿ: ಡಾ. ಯೋಗೇಶ್ ಮಡಗಾಂವಕರ