ಪೌರ ಕಾರ್ಮಿಕರ ವೃತ್ತಿ ಘನತೆ ಎತ್ತಿ ಹಿಡಿಯಬೇಕು

KannadaprabhaNewsNetwork |  
Published : Sep 24, 2025, 01:00 AM IST
ಾಾೀಾೀಾೀ | Kannada Prabha

ಸಾರಾಂಶ

ಅಧಿಕಾರಿ, ನೌಕರ, ಪೌರಕಾರ್ಮಿಕ ಈ ರೀತಿಯ ಭೇದಭಾವ ಹೋಗಿ, ಪೌರ ಕಾರ್ಮಿಕರನ್ನು ಗೌರವದಿಂದ ಕಾಣುವ, ಅವರ ವೃತ್ತಿ ಘನತೆಯನ್ನು ಎತ್ತಿಹಿಡಿಯುವ ಕೆಲಸ ಆಗಬೇಕು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಅಧಿಕಾರಿ, ನೌಕರ, ಪೌರಕಾರ್ಮಿಕ ಈ ರೀತಿಯ ಭೇದಭಾವ ಹೋಗಿ, ಪೌರ ಕಾರ್ಮಿಕರನ್ನು ಗೌರವದಿಂದ ಕಾಣುವ, ಅವರ ವೃತ್ತಿ ಘನತೆಯನ್ನು ಎತ್ತಿಹಿಡಿಯುವ ಕೆಲಸ ಆಗಬೇಕು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ ಪಟ್ಟಿದ್ದಾರೆ.ನಗರದ ಪಾಲಿಕೆ ಆವರಣದಲ್ಲಿ ತುಮಕೂರು ನಗರಪಾಲಿಕೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ, ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಗರದ ಮಲೀನ ತೊಳೆಯುವ ಪೌರಕಾರ್ಮಿಕರನ್ನು ನಮ್ಮಂತೆಯೇ ಮನುಷ್ಯರು ಎಂಬ ಸತ್ಯವನ್ನು ನನ್ನನ್ನು ಸೇರಿದಂತೆ ಎಲ್ಲರೂ ಅರಿತು ನಡೆದಾಗ ಮಾತ್ರ ಇಂತಹ ದಿನಾಚರಣೆಗಳಿಗೆ ಅರ್ಥ ಬರಲು ಸಾಧ್ಯ ಎಂದರು.ರಾಷ್ಟ್ರಪಿತ ಮಹಾತ್ಮಾಗಾಂಧಿ ಮೊದಲಿಗೆ ಸ್ವಚ್ಛತೆಗೆ ಅದ್ಯತೆ ನೀಡಿದ್ದರು. ದಲಿತ ಕೇರಿಗಳಿಗೆ ಹೋಗಿ ಸ್ವತಃ ಸ್ವಚ್ಛತೆ ನಡೆಸುವ ಮೂಲಕ ಸ್ವಚ್ಚ ಮಾಡುವ ವೃತ್ತಿಯ ಘನತೆ ಗೌರವವನ್ನು ಎತ್ತಿ ಹಿಡಿದಿದ್ದರು. ಅದೇ ರೀತಿ ನರೇಂದ್ರ ಮೋದಿ ಅವರು ಅಕ್ಟೋಬರ್ 2 ನ್ನು ಸ್ವಚ್ಛತಾ ದಿನವನ್ನಾಗಿ ಘೋಷಿಸಿ, ಪೌರಕಾರ್ಮಿಕರ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರ ಆನಾರೋಗ್ಯದಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದ್ದು, ಕುರಿ ಪಾಳ್ಯ, ಎನ್.ಆರ್.ಕಾಲೋನಿಯ ಪೌರಕಾರ್ಮಿಕರ ಕಾಲೋನಿಗಳಿಗೆ ಭೇಟಿ ನೀಡಿದರೆ ಸತ್ಯಾಂಶ ತಿಳಿಯುತ್ತದೆ ಎಂದರು.ಪೌರಕಾರ್ಮಿಕರು ತಮ್ಮ ಕೆಲಸದಲ್ಲಿ ತೊಡಗುವಾಗ ಸುರಕ್ಷತಾ ಮುಂಜಾಗ್ರತಾ ಸಲಕರಣೆಗಳಾದ ಬೂಟು, ಗ್ಲೌಸ್, ಮಾಸ್ಕ್ ಬಳಸುವುದನ್ನು ಮರೆಯಬಾರದು. ಚರಂಡಿ, ಮ್ಯಾನ್ ಹೋಲ್‌ಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಅತಿ ಎಚ್ಚರಿಕೆಯನ್ನು ವಹಿಸಬೇಕೆಂದರು. ಹೆಬ್ಬಾಕ ಸರ್ವೆ ನಂಬರ್ 70 ರಲ್ಲಿರುವ 15 ಎಕರೆ ಜಾಗದಲ್ಲಿ ಪೌರಕಾರ್ಮಿಕರಿಗೆ ವಸತಿ ನಿರ್ಮಿಸಲು ಈಗಾಗಲೇ ಜಾಗವನ್ನು ಗುರುತಿಸಿ, ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಅನುಮತಿ ದೊರೆತ ಕೂಡಲೇ ಅಗತ್ಯ ಕ್ರಮವನ್ನು ಪಾಲಿಕೆ ತೆಗೆದುಕೊಳ್ಳಲಿದೆ. ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪಾಲಿಕೆ ಮಹತ್ವದ ಹೆಜ್ಜೆ ಇಟ್ಟಿದೆ. ಜೀವ ವಿಮೆ, ಆರೋಗ್ಯ ವಿಮೆ ಎಲ್ಲಾ ನೌಕರರಿಗೆ ಶೀಘ್ರದಲ್ಲಿಯೇ ದೊರೆಯುವ ವಿಶ್ವಾಸವಿದೆ.ನಿಮ್ಮ ಸ್ವಾಭಿಮಾನದ ಬದುಕಿಗಾಗಿ ಅಧಿಕಾರಿಗಳು,ಸರಕಾರ ಮತ್ತು ಜನಪ್ರತಿನಿಧಿಗಳು ಕೆಲಸ ಮಾಡುವ ಭರವಸೆಯನ್ನು ಶಾಸಕ ಜಿ.ಬಿ.ಜೋತಿಗಣೇಶ್ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಆಯುಕ್ತರಾದ ಅಶ್ವಿಜ ಮಾತನಾಡಿ ,ಪಾಲಿಕೆಯ ಆಯುಕ್ತರಾಗಿ ಎರಡು ವರ್ಷ ಕಳೆಯುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಪೌರಕಾರ್ಮಿಕರು ಎಲ್ಲಾ ರೀತಿಯಿಂದ ಸಹಕಾರ ನೀಡಿದ್ದೀರಿ. ಇದರ ಫಲವಾಗಿ ತುಮಕೂರು ನಗರ ಗಿನ್ನಿಸ್ ವರ್ಲ್ಡ್ ರೇಕಾರ್ಡ ನಲ್ಲಿ ದಾಖಲಾಯಿತು. ಪೌರಕಾರ್ಮಿಕರಿಲ್ಲದ ನಗರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕಳೆದ ಸಾಲಿನ ದಸರಾ ವೇಳೆ ನೀವು ಕೈಗೊಂಡ ಸ್ವಚ್ಚತೆಯನ್ನು ಸ್ವತಹಃ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ದಸರಾ ಉತ್ಸವವನ್ನು ನಾವೆಲ್ಲರೂ ಮತ್ತಷ್ಟು ಯಶಸ್ವಿಗೊಳಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ದಿನದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತ ತಂಡಗಳಿಗೆ, ಪ್ರತಿ ವಾರ್ಡಿಗೆ ಒಬ್ಬರಂತೆ ಉತ್ತಮ ಕೆಲಸ ಮಾಡಿದ ಪೌರಕಾರ್ಮಿಕರು, ಕಸದಗಾಡಿಯ ಡ್ರೈವರ್, ಹೆಲ್ಪರ್, ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪೌರಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು. ಪಾಲಿಕೆಯ ಅಧಿಕಾರಿಗಳು, ನೌಕರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ವೇದಿಕೆಯಲ್ಲಿ ಪಾಲಿಕೆಯ ಇಇಗಳಾದ ವಿನಯಕುಮಾರ್, ಸುರೇಶಕುಮಾರ್, ಪ್ರವೀಣಕುಮಾರ್, ಆರೋಗ್ಯಾಧಿಕಾರಿ ಡಾ.ಯೋಗೀಶ್, ನಗರ ಯೋಜನಾಧಿಕಾರಿ ಸಂಗಪ್ಪ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್,ಅಧಿಕಾರಿ ಸಂದೀಪ್ ಸೇರಿದಂತೆ ಪೌರಕಾರ್ಮಿಕರು ಪಾಲ್ಗೊಂಡಿದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ