- ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಒತ್ತಾಯ । ತಾಲೂಕಿಗೆ ಭದ್ರೆ ಹರಿಸಿಯೇ ತೀರುತ್ತೇವೆ: ಶಪಥ
ಕನ್ನಡಪ್ರಭ ವಾರ್ತೆ ಜಗಳೂರು
ಜಗಳೂರು ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿಯು ₹೨೦ ಕೋಟಿ ವೆಚ್ಚದ ವಿಸ್ತರಣೆ ಆಗುತ್ತಿದೆ. ಇದು ಶಾಶ್ವತವಾಗಿ ಉಳಿಯುವಂತಹ ಕಾಮಗಾರಿ ಆಗಬೇಕು. ನಿರ್ದಿಷ್ಟವಾಗಿ ಇಷ್ಟೇ ಅಡಿಗಳ ತೆರವು ಎಂಬುದು ಸ್ಪಷ್ಟಪಡಿಸಿ, ಕಾಮಗಾರಿ ನಡೆಸಲು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರದಿಂದ ಆಸ್ತಿ ನಷ್ಟಕ್ಕೆ ಇಂತಿಷ್ಟು ಪರಿಹಾರ ಬಿಡುಗಡೆಯಾಗಲಿದೆ ಎಂದು ಶಾಸಕರು ಹೇಳಿದ್ದರು. ಅದೇ ರೀತಿ ಕಟ್ಟಡದ ಮಾಲೀಕರಿಗೆ ಪರಿಹಾರದ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ ನನ್ನ ಕನಸಿನ ಯೋಜನೆ. ನನ್ನ ಅವಧಿಯಲ್ಲಿ ಈ ಯೋಜನೆ ಜಾರಿಗಾಗಿ ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಸರಿಯಾದ ಮಾಹಿತಿ ನೀಡಿದ ಕಾರಣ ಕೇಂದ್ರ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಲಾಗಿಲ್ಲ. ಕೇಂದ್ರ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿದ್ದಾರೆ. ಹೀಗಾಗಿ, ಬಜೆಟ್ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಣ ಬಿಡುಗಡೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ತಾಲೂಕಿಗೆ ಭದ್ರೆಯನ್ನು ಹರಿಸಿಯೇ ತೀರುತ್ತೇವೆ ಎಂದು ಶಪಥ ಮಾಡಿದರು.ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ನಮ್ಮ ವಿರೋಧವಿಲ್ಲ. ಅವರು ನಡೆದುಕೊಂಡ ರೀತಿಗೆ ನಮ್ಮ ವಿರೋಧವಿದೆ. ರಸ್ತೆ ಅಗಲೀಕರಣ ವಿಚಾರದಲ್ಲಿ ಶಾಸಕ ಬಿ.ದೇವೇಂದ್ರಪ್ಪ ರಸ್ತೆ ಮಧ್ಯೆಯಿಂದ ೬೯ ಅಡಿ ಅಗಲೀಕರಣ ಮಾಡುತ್ತೇನೆ ಎಂದು ಹೇಳಿದ್ದರು. ನಾನು ಆ ಸಂದರ್ಭ ಇದೇನು ಚಿಕ್ಕಪೇಟೆಯಲ್ಲ ಎಂದು ಉದಾಹರಣೆ ಕೊಟ್ಟು ೫೦ ಅಡಿ ರಸ್ತೆ ವಿಸ್ತರಣೆ ಮಾಡಿ ಎಂದು ಸಲಹೆ ನೀಡಿದ್ದೆ. ಆದರೂ, ಶಾಸಕರು ೬೯ ಅಡಿ ವಿಸ್ತರಣೆ ಮಾಡುತ್ತೇವೆ ಎಂದಿದ್ದರು. ರಸ್ತೆ ವಿಸ್ತರಣೆ ಸ್ಪಂದಿಸದ ಅಂಗಡಿ ಮಾಲೀಕರಿಗೆ ಬೆಂಕಿ ಹಚ್ಚುತ್ತೇನೆ ಎಂದು ಧಮ್ಕಿ ಹಾಕಿದ್ದು ರಾಜ್ಯದ ಜನ ನೋಡಿದ್ದಾರೆ ಎಂದರು.
ಈಗ ವರ್ತಕರು ೩೦ ರಿಂದ ೩೫ ಅಡಿ ರಸ್ತೆ ವಿಸ್ತರಣೆ ಮಾಡಿ, ಚರಂಡಿ ನಿರ್ಮಿಸಿ, ಫುಟ್ಪಾತ್ ಮಾಡಲು ಆರಂಭಿಸಿದ್ದಾರೆ. ನನಗೆ ಬಂದ ಮಾಹಿತಿ ಪ್ರಕಾರ ವರ್ತಕರಿಂದ ಶಾಸಕರು ಮತ್ತು ಶಾಸಕರ ಹಿಂಬಾಲಕರು ''''''''ಸಮ್ಥಿಂಗ್ ಸಮ್ಥಿಂಗ್'''''''' ಮಾಡಿದ್ದಾರೆ. ವಸೂಲಿ ಮಾಡಲು ಮೂರ್ನಾಲ್ಕು ಜನರನ್ನು ನೇಮಿಸಿಕೊಂಡಿದ್ದಾರೆ ಎಂದ ಗಂಭೀರ ಆರೋಪ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮರುಳಾರಾಧ್ಯ, ಮಾಜಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ರೇವಣ್ಣ, ಕೆಂಚನಗೌಡ, ಮುರುಗೇಶ್, ಮಂಜುನಾಥಯ್ಯ, ಪ್ರಶಾಂತ್ ಪಾಟೀಲ್, ಸೊಕ್ಕೆ ನಾಗರಾಜ್, ಧರ್ಮ ನಾಯ್ಕ್, ಬಿಸ್ತುವಳ್ಳಿ ಬಾಬು, ಪೂಜಾರ್ ಸಿದ್ದಪ್ಪ, ಓಬಳೇಶ್, ಜೆ.ವಿ. ನಾಗರಾಜ್, ಕಟ್ಟಿಗೆಹಳ್ಳಿ ಮಂಜುನಾಥ್, ಲ್ಯಾಬ್ ಶಿವು ಇತರ ಮುಖಂಡರು ಇದ್ದರು.
- - --೨೧ಜೆಎಲ್ಆರ್ಚಿತ್ರ೧ಎ:
ಜಗಳೂರು ಪಟ್ಟಣದಲ್ಲಿ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಸ್.ವಿ.ರಾಜೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.