ರಾಮನಗರ: ಬಿಡದಿ ಟೌನ್ಶಿಪ್ ಯೋಜನೆ ಜಟಾಪಟಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಒಂದೆಡೆ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 486ನೇ ದಿನಕ್ಕೆ ಕಾಲಿಟ್ಟಿದ್ದರೆ, ಮತ್ತೊಂದೆಡೆ ಯೋಜನೆ ಪರವಾಗಿರುವ ರೈತರೂ ಕೂಡಾ ಪ್ರತಿಭಟನೆ ನಡೆಸುತ್ತಿದ್ದಾರೆ. ಪರ-ವಿರೋಧ ರೈತರು ಬೈರಮಂಗಲ ಗ್ರಾಮದಲ್ಲಿ ಶನಿವಾರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರಿಂದ ಘರ್ಷಣೆ ಉಂಟಾಗಿ ವಾಗ್ವಾದ ನಡೆಯಿತು.
ಟೌನ್ ಶಿಪ್ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಲು ರಾಜ್ಯದ ಸುಮಾರು 15 ಜಿಲ್ಲೆಗಳಿಂದ ಸಂಯುಕ್ತ ನಾಯಕತ್ವದ ರೈತಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಭೈರಮಂಗಲಕ್ಕೆ ಆಗಮಿಸಿದ್ದರು. ಹತ್ತಕ್ಕೂ ಹೆಚ್ಚು ಬಸ್ ಗಳು ಹಾಗೂ ಕಾರುಗಳ ಮೂಲಕ ಬಂದಿಳಿದ ರೈತಸಂಘದ ಮುಖಂಡರು ಧರಣಿ ಸ್ಥಳಕ್ಕೆ ಸುಮಾರು 500 ಮೀಟರ್ ದೂರದಿಂದ ಪಾದಯಾತ್ರೆ ಪ್ರಾರಂಭಿಸಿದರು.
ಮತ್ತೊಂದೆಡೆ ಬೈರಮಂಗಲ ಶಾಲೆ ಬಳಿ ಧರಣಿ ನಡೆಸುತ್ತಿದ್ದ ಯೋಜನೆ ಪರವಾಗಿರುವ ರೈತರು, ಬೇರೆ ಜಿಲ್ಲೆಗಳಿಂದ ಬಂದ ರೈತ ಹೋರಾಟಗಾರರನ್ನು ತರಾಟೆ ತೆಗೆದುಕೊಂಡರು. ರೈತಮುಖಂಡರನ್ನು ತಡೆದ ಪ್ರತಿಭಟನಾಕಾರರು ಸ್ಥಳೀಯ ಸಮಸ್ಯೆ ಹಾಗೂ ವಾಸ್ತವಾಂಶಗಳನ್ನು ಅರಿಯದ ನೀವು ರಾಜ್ಯದ ಜನರಿಗೆ ತಪ್ಪು ಸಂದೇಶ ಕಳುಹಿಸುತ್ತಿದ್ದೀರಿ, ಇಲ್ಲಿನ ಕೆಲವು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಿ, ನೀವೆಲ್ಲರೂ ಪೇಮೆಂಟ್ ಗಿರಾಕಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.ಯೋಜನೆಗೆ ಭೂಮಿ ಕೊಡುವುದು ಬಿಡುವುದು ಈ ಭಾಗದ ರೈತರ ವಿವೇಚನೆಗೆ ಬಿಟ್ಟಿದ್ದು, ಆದರೆ, ನೀವು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದೀರಿ, ಬನ್ನಿ ನಮ್ಮೊಂದಿಗೆ ಚರ್ಚೆ ನಡೆಸಿ ನಾವು ಅನುಭವಿಸುತ್ತಿರುವ ನೋವುಗಳನ್ನು ಆಲಿಸಿ ಎಂದಾಗ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಮ್ಮ ಊರಿನ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನೀವು ವಾಪಸ್ ಹೋಗಿ ಎಂದು ಧಿಕ್ಕಾರ ಕೂಗಿದರು.
ಪರ ವಿರುದ್ಧದ ಧಿಕ್ಕಾರದ ಜತೆಗೆ ಪರಸ್ಪರ ನಿಂದನೆಯನ್ನೂ ಮಾಡಿಕೊಂಡರು.
ಕೂಗಾಡುತ್ತಿದ್ದ ರೈತರನ್ನು ನಿಯಂತ್ರಿಸಿ ಪರವಿರುವ ರೈತರನ್ನು ಸುತ್ತುವರೆದ ಪೊಲೀಸರು , ಹೊರ ಜಿಲ್ಲೆಗಳ ರೈತರ ಮೆರವಣಿಗೆ ಮುಂದುವರೆಯಲು ಅವಕಾಶ ಕಲ್ಪಿಸಿದರು. ಹೋರಾಟಗಾರರನ್ನು ನಿಯಂತ್ರಿಸುವುದು ಅಧಿಕ ಪ್ರಮಾಣದಲ್ಲಿ ನಿಯೋಜನೆಗೊಂಡಿದ್ದ ಪೋಲೀಸರಿಗೆ ದೊಡ್ಡ ಸವಾಲಾಗಿತ್ತು.
ಬಾಕ್ಸ್ ...............
ಭೈರಮಂಗಲ ಗ್ರಾಮದಲ್ಲಿ ಸುಮಾರು 100 ಮೀಟರ್ ಅಂತರದಲ್ಲಿ ರೈತರು ಎರಡು ಗುಂಪುಗಳಲ್ಲಿ ಪರ ವಿರೋಧದ ಪ್ರತಿಭಟನೆ ನಡೆಸುತ್ತಿದ್ದು ಧ್ವನಿವರ್ಧಕಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಏರುದನಿಯಲ್ಲಿ ಮಂಡಿಸುತ್ತಿರುವುದು ಕೇಳಿ ಬಂದಿತು. ಇದರಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳಿವೆ.
11ಕೆಆರ್ ಎಂಎನ್ 5,6.ಜೆಪಿಜಿ
6.ಹೊರ ಜಿಲ್ಲೆಗಳ ರೈತರಿದ್ದ ಬಸ್ ಅನ್ನು ರೈತರು ತಡೆಯುತ್ತಿರುವುದು.