-ಸರ್ವರ್ ಸಮಸ್ಯೆಯಿಂದ ಒತ್ತಡದಲ್ಲಿ ಸಿಲುಕಿದ ಜಿವಿಪಿಗಳು
---ಕನ್ನಡಪ್ರಭ ವಾರ್ತೆ ಕೆಂಭಾವಿ
ಸರ್ಕಾರ ನೂತನವಾಗಿ ಪ್ರಕಟಿಸಿರುವ ಗೃಹಜ್ಯೋತಿ ಯೋಜನೆಯ ನೈಜ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿಲು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳು (ಜಿವಿಪಿ) ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಿಂದ ಗುರಿ ತಲುಪಲು ಕಷ್ಟಸಾಧ್ಯವಾಗುತ್ತಿದೆ ಎಂಬ ಮಾತುಗಳು ಜಿವಿಪಿ ಗಳಿಂದ ಕೇಳಿ ಬರುತ್ತಿದೆ.ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಜಿವಿಪಿಗಳು ಹೈರಾಣಾಗುತ್ತಿದ್ದು ಒಬ್ಬ ಗ್ರಾಹಕನ ವಿದ್ಯುತ್ ಮೀಟರ್ನ ಸಂಪೂರ್ಣ ವಿವರ ಪಡೆಯಲು ೨೦ರಿಂದ ೩೦ ನಿಮಿಷಗಳ ಅವಧಿ ಬೇಕಾಗುತ್ತದೆ. ಆದರೆ ಸರಿಯಾದ ನೆಟವರ್ಕ ಇಲ್ಲದೆ ಅದು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು ಇದು ಜಿವಿಪಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೆಂಭಾವಿ ವಲಯದಲ್ಲಿ ೯ ಗ್ರಾಮ ಪಂಚಾಯತಿಗಳು ೫೩ ಗ್ರಾಮಗಳು ಬರುತ್ತಿದ್ದು ೧೦ ಮಂದಿ ಜಿವಿಪಿಗಳು ಈ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಯಕ್ತಾಪೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ೧೩ ಹಳ್ಳಿಗಳಲ್ಲಿ ಈ ಸರ್ವರ್ ಸಮಸ್ಯೆ ಇದ್ದು ಕೆಲವು ಗ್ರಾಮಗಳಲ್ಲಿ ಹೊರತುಪಡಿಸಿ ಇನ್ನುಳಿದ ಹಳ್ಳಿಗಳಲ್ಲಿ ತಾಂತ್ರಿಕ ಸಮಸ್ಯೆ ಇದ್ದು ಅನಿವಾರ್ಯವಾಗಿ ಊರಿನ ಶಾಲೆಯ ಆವರಣ, ಸಮುದಾಯ ಭವನ, ಎತ್ತರದ ಪ್ರದೇಶ ಸೇರಿದಂತೆ ನೆಟವರ್ಕ ಬರುವ ಸ್ಥಳದಲ್ಲಿ ಜಿವಿಪಿ ಗಳು ಗ್ರಾಹಕರ ಮನವೊಲಿಸಿ ಅಲ್ಲಿಗೆ ಕರೆದು ತಮ್ಮ ಕರ್ತವ್ಯ ನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.
ಅಧಿಕಾರಿಗಳ ಒತ್ತಡ-ಜಿವಿಪಿ ಗಳಿಗೆ ಸರ್ವರ್ ಸಮಸ್ಯೆ ಒಂದೆಡೆಯಾದರೆ ಇತ್ತ ಅಧಿಕಾರಿಗಳ ಒತ್ತಡ ಜಿವಿಪಿಗಳಿಗೆ ಬೇಸರ ಮೂಡಿಸಿದೆ. ದಿನಕ್ಕೆ ಕನಿಷ್ಠ ೧೦ ರಿಂದ ೧೫ ಗ್ರಾಹಕರ ಮೀಟರನ ದಾಖಲಾತಿ ಅಪಲೋಡ್ ಮಾಡುವಂತೆ ಜಿವಿಗಳ ಮೇಲೆ ಒತ್ತಡ ಇದ್ದು ಇದು ಸರ್ವರ್ ಸಮಸ್ಯೆಯಿಂದ ಸಾಧ್ಯವಾಗದೆ ಜಿವಿಪಿ ಗಳು ಒತ್ತಡದಲ್ಲಿ ಸಿಲಿಕಿದ್ದಾರೆ. ಜೆಸ್ಕಾಂ ಇಲಾಖೆ ಗ್ರಾಮಾಂತರ ಪ್ರದೇಶಗಳಲ್ಲಿ ಇಂಥಾ ಸಮಸ್ಯೆಗೆ ಯಾವ ಮರ್ಗೋಪಾಯ ಕಂಡು ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಫೋಟೊಚಿತ್ರ ೧೧ಕೆಇಎಮ್೨
ನೆಟವರ್ಕ್ ಸಮಸ್ಯೆಯಿಂದ ಯಕ್ತಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮವೊಂದರ ಸಮುದಾಯ ಭವನದ ಮುಂದೆ ಗ್ರಾಮ ವಿದ್ಯುತ್ ಪ್ರತಿನಿಧಿ ಗ್ರಾಹಕರ ದಾಖಲಾತಿ ಅಪಲೋಡ್ ಮಾಡುತ್ತಿರುವುದು.