ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ವ್ಯವಸಾಯ ಹಾಗೂ ಕುಡಿಯುವ ನೀರಿಗೆ ಮತ್ತು ಕೆರೆ-ಕಟ್ಟೆಗಳು ತುಂಬದೆ ಜಾನುವಾರುಗಳಿಗೂ ತೊಂದರೆಯಾಗಿದ್ದು, ಸರ್ಕಾರ ತಕ್ಷಣವೇ ಬರಪೀಡಿತ ತಾಲೂಕೆಂದು ಘೋಷಿಸಬೇಕೆಂದು ಶಾಸಕ ಜಿ.ಡಿ.ಹರೀಶ್ ಗೌಡ ಒತ್ತಾಯಿಸಿದರು.

ಹನಗೋಡು ಅಣೆಕಟ್ಟೆ ಲಕ್ಷ್ಮಣತೀರ್ಥ ನದಿಗೆ ಬಾಗಿನ ಅರ್ಪಿಸಿದ ನಂತರ ತಾಲೂಕಿನಲ್ಲಿ ಬರದ ಪರಿಸ್ಥಿತಿ ಬಗ್ಗೆ ಪ್ರಶ್ನಿಸಿದ ವೇಳೆ ತಾಲೂಕಿನಲ್ಲಿ ಬಹುತೇಕ ಬೋರ್ವೆಲ್‌ಗಳು, ಕೆರೆಕಟ್ಟೆಗಳಲ್ಲಿ ನೀರು ಬತ್ತಿದೆ. ಬೆಳೆಗಳು ಒಣಗುತ್ತಿವೆ. ಬರದ ಛಾಯೆ ಆವರಿಸಿದೆ. ರೈತರು ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ತಕ್ಷಣವೇ ಸಮೀಕ್ಷೆ ನಡೆಸಿ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

ಅನುದಾನ ಬರುತ್ತಿಲ್ಲ: ಪ್ರತಿ ತಾಲೂಕಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಂದು ಕೋಟಿ ಅನುದಾನ ಘೋಷಿಸಿದ್ದಾರೆ. ಆದರೆ ಇನ್ನೂ ಬಿಡುಗಡೆಯಾಗಿಲ್ಲ. ಯಾವುದೇ ನೀರಾವರಿ ಯೋಜನೆಗಳು, ರಸ್ತೆ ಅಭಿವೃದ್ದಿ ಸೇರಿದಂತೆ ಯಾವೊಂದು ಯೋಜನೆಗೂ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿ, ಘೋಷಿಸಿರುವ ಅನುದಾವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಬಹುತೇಕ ಹಾಡಿಗಳಿಗೆ ಎಸ್ಐಆರ್ನ ಎನುಮ್ಯುರೇಷನ್ ಫಾರಂ ಇನ್ನೂ ತಲುಪದ ಬಗೆಗಿನ ಪ್ರಶ್ನೆಗೆ ತಾಲೂಕಿನಲ್ಲಿ ಎಲ್ಲೂ ಕೂಡ ಗೊಂದಲ ಕಂಡು ಬಂದಿಲ್ಲ, ಅಧಿಕಾರಿಗಳು ಹಾಗೂ ಬಿಎಲ್ಒಗಳು ಯಾವೊಬ್ಬ ಮತದಾರನೂ ಬಿಟ್ಟು ಹೋಗದಂತೆ ಕ್ರಮವಹಿಸಬೇಕೆಂದು ಸೂಚಿಸುವೆನೆಂದರು.


ಸದನದಲ್ಲಿ ಪ್ರಶ್ನಿಸುವೆ; ಗ್ಯಾರಂಟಿ ಯೋಜನೆಯ ಪರಿಷ್ಕರಣೆ ನಡೆಸುತ್ತಿರುವುದೇನೋ ಸರಿ, ಆದರೆ ಪರಿಷ್ಕರಣೆ ನೆಪದಲ್ಲಿ ವೃದ್ದರು, ವಿಕಲಚೇತನರು, ವಿಧವೆಯರಿಗೆ ಕಳೆದ ಐದು ತಿಂಗಳಿನಿಂದ ಮಾಶಾಸನ ವಿತರಣೆಯಾಗದೆ ತೊಂದರೆ ಅನುಭವಿಸುತ್ತಿದ್ದರೂ ಸರಕಾರ ಸಮೀಕ್ಷೆ ನೆಪದಲ್ಲಿ ತೊಂದರೆ ನೀಡುತ್ತಿರುವುದು ಸರಿಯಲ್ಲ.

ಲಕ್ಷ್ಮಣತೀರ್ಥ ನದಿ ಸ್ವಚ್ಚತೆಯಾಗದೆ ಪರಿಸರ ಹಾಳಾಗುತ್ತಿದ್ದು, ಸ್ವಚ್ಚತೆಗೆ ಹಾಗೂ ನಗರದಲ್ಲಿ ಒಳಚರಂಡಿ ವ್ಯವಸ್ಥೆಗಾಗಿ ಅನುದಾನ ಮಂಜೂರಿಗೆ ಸದನದಲ್ಲಿ ಪ್ರಸ್ತಾಪಿಸುವೆನೆಂದರು.

ಕಂಬಳ ಆಲೋಚಿಸಬೇಕು:

ಮೈಸೂರಿನ ಸಂಸ್ಥಾನದಲ್ಲಿ ನಾಡಹಬ್ಬ ದಸರಾ ನಡೆಯುತ್ತಿದೆ. ಈ ಬಾರಿ ಕಂಬಳ ನಡೆಯುತ್ತಿರುವ ಬಗೆಗಿನ ಪ್ರಶ್ನೆಗೆ ಸಂಸದರು ಕಂಬಳ ಬೇಡ ಎಂದಿದ್ದಾರೆ, ನಾಡಹಬ್ಬ ಇದು ಎಲ್ಲ ಜಿಲ್ಲೆಗಳಲ್ಲೂ ಆಚರಣೆ ಮಾಡಬೇಕು. ನಮ್ಮ ಕಲೆ, ಸಂಸ್ಕೃತಿ, ಪದ್ದತಿಯನ್ನು ಪರಿಗಣಿಸಿ ಕಂಬಳದ ಬಗ್ಗೆಯೂ ಆಲೋಚನೆ ಮಾಡಿ ನಡೆಸಬೇಕು. ಗಜಪಯಣ ಇಲ್ಲಿಂದಲೇ ಆರಂಭವಾಗುವುದರಿಂದ ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದರು.