ಶುದ್ಧ ಕುಡಿವ ನೀರು ಪ್ರತಿಯೊಬ್ಬರ ಹಕ್ಕು

KannadaprabhaNewsNetwork |  
Published : Apr 29, 2026, 01:30 AM IST
ಮಾಗಡಿ ತಾಲ್ಲೂಕಿನ ಮಾಡಬಾಳ್ ಹೋಬಳಿ ಮೇಲನಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ‌ ಶುದ್ಧ ನೀರಿನ ಘಟಕವನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು, ಬ್ಯಾಂಕ್ ಆಫ್ ಬರೋಡ ಶಾಖೆಯ‌ ಅಧಿಕಾರಿಗಳು ಮುಖಂಡರು ಜೊತೆಯಲ್ಲಿದ್ದರು. | Kannada Prabha

ಸಾರಾಂಶ

ಮಾಗಡಿ: ನೀರು ಜೀವನದ ಮೂಲಾಧಾರ, ನಮ್ಮ ದೇಹದಲ್ಲೇ ಶೇ. 60 ನೀರಿನಂಶವಿದ್ದು, ನೀರನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು

ಮಾಗಡಿ: ನೀರು ಜೀವನದ ಮೂಲಾಧಾರ, ನಮ್ಮ ದೇಹದಲ್ಲೇ ಶೇ. 60 ನೀರಿನಂಶವಿದ್ದು, ನೀರನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ತಾಲೂಕಿನ ಮಾಡಬಾಳ್ ಹೋಬಳಿ ಮೇಲನಹಳ್ಳಿ ಗ್ರಾಮದಲ್ಲಿ ಬ್ಯಾಂಕ್ ಆಫ್ ಬರೋಡ ಸಿಎಸ್ಆರ್ ನಿಧಿಯಡಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೆಲವೆಡೆ 800 ರಿಂದ 1000 ಅಡಿ ತೋಡಿದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪರಿಸರ ಸಂರಕ್ಷಣೆ, ಹೆಚ್ಚು ಗಿಡ-ಮರಗಳನ್ನು ನೆಡುವುದು ಹಾಗೂ ಜಲಸಂಪತ್ತನ್ನು ಉಳಿಸುವ ಸಂಕಲ್ಪ ನಮ್ಮೆಲ್ಲರ ಮುಂದಿರಬೇಕು ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 100ಕ್ಕೂ ಹೆಚ್ಚು ಕುಡಿಯುವ ನೀರಿನ ಯೋಜನೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಕುಣಿಗಲ್, ಮಾಗಡಿ, ರಾಮನಗರ, ಚನ್ನಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಜಾರಿಗೆ ತಂದಿದ್ದೇವೆ ಇಂತಹ ಜನಪರ ಕಾರ್ಯಗಳಲ್ಲಿ ಬ್ಯಾಂಕ್ ಆಫ್ ಬರೋಡದ ಪಾತ್ರ ಶ್ಲಾಘನೀಯ ಎಂದು ಹೇಳಿದರು.

ಮುದ್ರಾ ಲೋನ್ ಯೋಜನೆಯ ಮೂಲಕ ದೇಶದ ಸಣ್ಣ ಉದ್ಯಮಿಗಳಿಗೆ, ಮಹಿಳೆಯರಿಗೆ, ಯುವಕರಿಗೆ ಹಾಗೂ ಸ್ವಯಂ ಉದ್ಯೋಗ ಆರಂಭಿಸಲು ಬಯಸುವವರಿಗೆ ಅಪಾರ ಸಹಾಯ ದೊರಕಿದೆ. ಕಳೆದ ಏಳು ವರ್ಷಗಳಲ್ಲಿ ₹ 32 ಲಕ್ಷ ಕೋಟಿ ರುಪಾಯಿಗಳ ಸಾಲವನ್ನು ₹ 52 ಕೋಟಿ ಜನರಿಗೆ ವಿತರಿಸಲಾಗಿದೆ. ಬಡವರು ಸಾಲ ಪಡೆದರೆ ಪ್ರಾಮಾಣಿಕವಾಗಿ ಮರುಪಾವತಿಸುತ್ತಾರೆ. ಅವರ ಆರ್ಥಿಕ ಶಿಸ್ತು ಮತ್ತು ಹೃದಯ ಶ್ರೀಮಂತಿಕೆ ನಿಜಕ್ಕೂ ಅಭಿನಂದನೀಯ ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ಬ್ಯಾಂಕ್ ಆಫ್ ಬರೋಡ ಸಮಾಜಮುಖಿ ಕೆಲಸಗಳ ಮೂಲಕ ಕುಡಿಯುವ ನೀರು, ಆಸ್ಪತ್ರೆಗಳ ಪುನಶ್ಚೇತನ, ಶಾಲೆಗಳ ಅಭಿವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಹಾಯ ಮಾಡುವ ಮೂಲಕ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುತ್ತಿದೆ ಇಂತಹ ಸೇವಾ ಮನೋಭಾವದಿಂದ ಮಾಡಿದ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿದ್ದು ಬ್ಯಾಂಕ್ ಆಫ್ ಬರೋಡದ ಈ ಉತ್ತಮ ಪ್ರಯತ್ನವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

‌ಕಾರ್ಯಕ್ರಮದಲ್ಲಿ ಬೆಂಗಳೂರಿನ ಬ್ಯಾಂಕ್ ಆಫ್ ಬರೋಡ ವಲಯ ಕಚೇರಿಯ ಮುಖ್ಯ ಮಹಾಪ್ರಬಂಧಕರಾದ ಮನೋಜ್ ಚಯನಿ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಸಾದ್ ಗೌಡ್ರು, ಜೆಡಿಎಸ್ ಮುಖಂಡರಾದ ತಮ್ಮಣ್ಣ ಗೌಡ, ಬ್ಯಾಂಕ್ ಆಫ್ ಬರೋಡದ ಸಿಬ್ಬಂದಿ ವರ್ಗ, ಗ್ರಾಮಸ್ಥರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಞನ್‌)ಮಾಗಡಿ ತಾಲೂಕಿನ ಮಾಡಬಾಳ್ ಹೋಬಳಿ ಮೇಲನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕವನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು. ಬ್ಯಾಂಕ್ ಆಫ್ ಬರೋಡ ಶಾಖೆಯ‌ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಸಮಸ್ಯೆ ಅರಿತು ಪರಿಹರಿಸಲು ಪ್ರಯತ್ನಿಸಿ: ದರ್ಶನ್ ಪುಟ್ಟಣ್ಣಯ್ಯ
ಸಾರಿಗೆ ಬಸ್‌ಗಳ ಕೆಲ ನಿರ್ವಾಹಕರಿಂದ ಶಕ್ತಿ ಯೋಜನೆ ದುರ್ಬಳಕೆ: ಮೂಡ್ಲೀಗೌಡ