ಶಿರಸಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಸಭೆಯ ದಿನ ಸಾರ್ವಜನಿಕರು ಎಸೆದಿದ್ದ ತ್ಯಾಜ್ಯವನ್ನು ಶಿರಸಿ ಜೀವಜಲ ಕಾರ್ಯಪಡೆ ಮಂಗಳವಾರ ಸಂಪೂರ್ಣವಾಗಿ ಸ್ವಚ್ಛಗೊಳಿಸಿದೆ. ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ತಂಡ ಹಾಗೂ ಬಿಜೆಪಿ ಕಾರ್ಯಕರ್ತರು ಈ ಕಾರ್ಯ ನಡೆಸುವ ಮೂಲಕ ಮೋದಿಯವರ ಸ್ವಚ್ಛ ಭಾರತ ಕನಸಿಗೆ ಬೆಂಬಲವಾಗಿ ನಿಂತಿದ್ದಾರೆ.
ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಭಾ ಕಾರ್ಯಕ್ರಮಕ್ಕೆ ೮೦ ಸಾವಿರಕೂ ಅಧಿಕ ಜನ ಭಾಗಿಯಾಗಿದ್ದರು. ಬಿಸಿಲ ಧಗೆ ಜೋರಾಗಿದ್ದ ಕಾರಣ ಜೀವಜಲ ಕಾರ್ಯಪಡೆ ಬಂದವರಿಗೆ ನೀರಿನ ವ್ಯವಸ್ಥೆ ಮಾಡಿತ್ತು. ಕ್ರೀಡಾಂಗಣದ ಸುತ್ತ ಸಾರ್ವಜನಿಕರು ಎಸೆದ ನೀರಿನ ಬಾಟೆಲ್, ತ್ಯಾಜ್ಯ, ತಿಂಡಿಯ ಪೊಟ್ಟಣಗಳ ರಾಶಿಯೂ ಬಿದ್ದಿತ್ತು. ಸೋಮವಾರ ಬೆಳಗ್ಗೆ ಜೀವಜಲ ಕಾರ್ಯಪಡೆಯ ಮತ್ತು ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನಡೆಸಿದ್ದರು. ಆದರೆ, ತ್ಯಾಜ್ಯದ ಪ್ರಮಾಣ ಜಾಸ್ತಿ ಇದ್ದ ಕಾರಣ ಮಂಗಳವಾರವೂ ಜೀವಜಲ ಕಾರ್ಯಪಡೆಯ ೧೫ಕ್ಕೂ ಅಧಿಕ ಕಾರ್ಯಕರ್ತರು ಸ್ವಚ್ಛಗೊಳಿಸಿ ಟ್ರಾಕ್ಟರ್ ಮೂಲಕ ಸಾಗಿಸಿದ್ದಾರೆ.ಹಳೆಯ ಕಸವೂ ಸ್ವಚ್ಛ: ನಗರದ ಹೊರವಲಯದಲ್ಲಿ ಇರುವ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಇತ್ತೀಚಿನ ವರ್ಷಗಳಲ್ಲಿ ಮೋಜು ಮಸ್ತಿಯ ತಾಣವಾಗುತ್ತಿದೆ. ಕ್ರೀಡಾಂಗಣದ ಸುತ್ತ ಇರುವ ಖಾಲಿ ಜಾಗದಲ್ಲಿ ರಾತ್ರಿ ವೇಳೆ ಕುಳಿತು ಪಾರ್ಟಿ ಮಾಡುವವರು ಜಾಸ್ತಿ. ಹೀಗಾಗಿ ಈ ವಾತಾವರಣದಲ್ಲಿ ಖಾಲಿ ಬಾಟೆಲ್, ಗುಟ್ಕಾ ಪ್ಯಾಕೇಟ್, ನೀರಿನ ಬಾಟೆಲ್ ಜಾಸ್ತಿ ಬಿದ್ದಿದ್ದವು.
ಜೀವಜಲ ಕಾರ್ಯಪಡೆ ಕಾರ್ಯಕರ್ತರು ಈ ಎಲ್ಲ ಹಳೇ ತ್ಯಾಜ್ಯಗಳನ್ನೂ ಸಂಗ್ರಹಿಸಿ ಬುಟ್ಟಿ ತುಂಬಿ ಟ್ರ್ಯಾಕ್ಟರ್ಗೆ ಹಾಕಿದ್ದಾರೆ. ಈ ಮೂಲಕ ಜಿಲ್ಲಾ ಕ್ರೀಡಾಂಗಣದ ಸುತ್ತಲಿನ ಪ್ರದೇಶ ಶುಭ್ರವಾಗಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತರಾದ ಆರ್. ವಿ. ಹೆಗಡೆ ಚಿಪಗಿ, ಎಂ. ಎಂ. ಭಟ್ ಇತರರಿದ್ದರು. ಸುಂದರ ಪ್ರದೇಶ: ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಸುತ್ತಲಿನ ಪ್ರದೇಶ ಶುಭ್ರವಾಗಿಸುತ್ತಿದ್ದು, ಇಲ್ಲಿ ಕಸ ಎಸೆಯುವವರ ಮೇಲೆ ಕಣ್ಣಿಡುತ್ತೇವೆ. ಈ ಪ್ರದೇಶವನ್ನು ತ್ಯಾಜ್ಯಗಳ ಬದಲು ಸುಂದರ ಪ್ರದೇಶವಾಗಿಸಲಾಗುತ್ತಿದೆ ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ತಿಳಿಸಿದರು.