- ಶಿರಸ್ತೇದಾರ್ಗೆ ಹನಗವಾಡಿ ಗ್ರಾಪಂ ಸದಸ್ಯ ಪ್ರವೀಣ್ ಒತ್ತಾಯ
- - -ಕನ್ನಡಪ್ರಭ ವಾರ್ತೆ ಹರಿಹರ
ನಗರದಲ್ಲಿ ಹಾದುಹೋಗಿರುವ ಶಿವಮೊಗ್ಗ-ಹೊಸಪೇಟೆ ಹಾಗೂ ಬೀರೂರು-ಸಂಮ್ಮಸಗಿ (ಹಳೇ ಪಿ.ಬಿ. ರಸ್ತೆ) ರಾಜ್ಯ ಹೆದ್ದಾರಿಯ ಹರಿಹರ ನಗರ ವ್ಯಾಪ್ತಿಯಲ್ಲಿನ ಅವೈಜ್ಞಾನಿಕ ರೋಡ್ ಹಂಪ್ಸ್ಗಳನ್ನು (ವೇಗ ನಿಯಂತ್ರಕ)ಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಹನಗವಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಹನಗವಾಡಿ ಸೋಮವಾರ ಮಿನಿ ವಿಧಾನಸೌಧದಲ್ಲಿ ಶಿರಸ್ತೇದಾರ್ಗೆ ಮನವಿ ಸಲ್ಲಿಸಿದರು.ನಗರ ವ್ಯಾಪ್ತಿಯ ಹೆದ್ದಾರಿಯ ಹಲವು ಭಾಗಗಳಲ್ಲಿ ಅವೈಜ್ಞಾನಿಕ ರೋಡ್ ಹಂಪ್ಸ್ಗಳನ್ನು ಹಾಕಲಾಗಿದೆ. ಇದರಿಂದ ಪ್ರತಿನಿತ್ಯ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಅನೇಕ ಅಪಘಾತಗಳೂ ಸಂಭವಿಸುತ್ತಿವೆ. ರಾಜ್ಯ ಹೆದ್ದಾರಿಯಲ್ಲಿ ಲೋಕೋಪಯೋಗಿ ಇಲಾಖೆಯವರು ರಸ್ತೆ ನಿರ್ಮಿಸುವ ವೇಳೆ ಹಂಪ್ಸ್ ಹಾಕುವಾಗ ಸುಸಜ್ಜಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಆಯ್ದ ಭಾಗಗಳಲ್ಲಿ ಮಾತ್ರ ಹಂಪ್ಸ್ ಅಳವಡಿಸಬೇಕು. ಆದರೆ ಮನಬಂದಂತೆ ಹಾಗೂ ಕೆಲವರ ಅನುಕೂಲಕ್ಕೆ ತಕ್ಕಂತೆ ಹಂಪ್ಸ್ ಗಳನ್ನು ಅವೈಜ್ಞಾನಿಕವಾಗಿ ಹಾಕಿದ್ದಾರೆ. ಇವುಗಳನ್ನು ಕೂಡಲೇ ತೆರವು ಮಾಡಬೇಕು ಎಂದರು.
ಶಾಲೆ, ಆಸ್ಪತ್ರೆ, ಕೋರ್ಟ್ ಮತ್ತು ಅಪಾಯ ಸಂಭವಿಸುವ ಸ್ಥಳಗಳಲ್ಲಿ ಮಾತ್ರ ವೈಜ್ಞಾನಿಕವಾಗಿ ರೋಡ್ ಹಂಪ್ ನಿರ್ಮಿಸಬೇಕು ಎಂಬ ಆದೇಶ ಇದೆ. ಆದರೆ ತಾಲೂಕಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅಧಿಕಾರಿಗಳು ನಿಜವಾಗಿಯೂ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.ಶಿರಸ್ತೇದಾರ್ ಹರ್ಷವರ್ಧನ್ ಮನವಿ ಸ್ವೀಕರಿಸಿದರು. ಈ ಸಮಯದಲ್ಲಿ ಗ್ರಾಪಂ ಸದಸ್ಯರಾದ ಚಂದ್ರಗೌಡ ಹರಗನಹಳ್ಳಿ, ನಾಗರಾಜ್ ದೊಗ್ಗಳ್ಳಿ, ಹನುಮಂತಪ್ಪ ರಾಟಿ, ಸಿದ್ದೇಶ್ ಮಾಕನೂರ್ ಮತ್ತಿತರರು ಇದ್ದರು.
- - --29HRR01:
ಹರಿಹರ ನಗರ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ರೋಡ್ ಹಂಪ್ಸ್ಗಳ ಶೀಘ್ರ ತೆರವಿಗೆ ಒತ್ತಾಯಿಸಿ ಹನಗವಾಡಿ ಗ್ರಾಪಂ ಸದಸ್ಯ ಪ್ರವೀಣ್ ನೇತೃತ್ವದಲ್ಲಿ ಸೋಮವಾರ ಶಿರಸ್ತೇದಾರ್ಗೆ ಮನವಿ ಸಲ್ಲಿಸಲಾಯಿತು.