ಗಾಳಿಯೊಂದಿಗೆ ಅಲ್ಲಲ್ಲಿ ಮಳೆಯಿಂದ ಇಳುವರಿ ಮೇಲೆ ಪರಿಣಾಮ । ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿ ಮಾವು ಬೆಳೆಗಾರ
ಕಳೆದ ಮೂರು ತಿಂಗಳಿಂದ ರಾಜ್ಯದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಯಿಂದ ಮಾವು ಇಳುವರಿ ಕುಸಿತಗೊಂಡಿದ್ದು, ಮಾರುಕಟ್ಟೆಗೆ ಮಾವು ಬರುವುದು ಕಡಿಮೆಯಾಗಿ ಬೆಲೆ ದುಬಾರಿಯಾಗುತ್ತಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಮಾವು ಬೆಳೆಯುವಲ್ಲಿ ಮುಂಚೂಣಿಯಲ್ಲಿದ್ದು, ವಾಡಿಕೆಯಂತೆ ಮೇ ತಿಂಗಳಲ್ಲಿ ಮಾವು ಮಾರುಕಟ್ಟೆಗೆ ಬರುತ್ತಿತ್ತು. ಹವಾಮಾನ ವೈಪರೀತ್ಯಗಳಿಂದ ಇಲ್ಲಿನ ಮಾವು ಮಾರುಕಟ್ಟೆಗೆ ಈ ಬಾರಿ ಬರುವುದು ತಡವಾಗಿದೆ. ಜೂನ್, ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಇದಕ್ಕೂ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆಯ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಹೆಚಿನ ಬೆಲೆಗೆ ಮಾರಾಟವಾಗುತ್ತಿದೆ. ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಗಾಳಿ ಹೆಚ್ಚಾಗಿದ್ದು, ಗಾಳಿಯೊಂದಿಗೆ ಅಲ್ಲಲ್ಲಿ ಮಳೆಯೂ ಆಗುತ್ತಿದ್ದು ಇಳುವರಿ ಮೇಲೆ ಪರಿಣಾಮ ಬೀರಿದೆ.ಮಾರುಕಟ್ಟೆಯಲ್ಲಿ ಹೊರ ಜಿಲ್ಲೆಯ ಮಾವಿನ ಹಣ್ಣುಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು ಇದನ್ನು ಕಂಡ ಸ್ಥಳೀಯ ಮಾವು ಬೆಳೆಗಾರರು ತಮ್ಮ ಸರಕಿಗೂ ಹೆಚ್ಚಿನ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಹವಾಮಾನ ಬದಲಾವಣೆಯಿಂದ ಇಳುವರಿ ಕಡಿಮೆಯಾಗುವುದು ಕಂಡು ಕಂಗಾಲಾಗಿದ್ದಾರೆ.
ಕಳೆದ ವರ್ಷ ಮಾವು ಇಳುವರಿ ಹೆಚ್ಚಾಗಿ ಮಾವಿಗೆ ಬೇಡಿಕೆ ಕುಸಿದಿದ್ದರಿಂದ ಬೆಲೆಯು ಸಿಗದೇ ಮಾವು ಬೆಳೆಗಾರರಿಗೆ ನಷ್ಟ ಉಂಟಾಗಿತ್ತು. ಆದರೆ ಈ ಬಾರಿಯು ಉತ್ತಮ ದರ ಸಿಗುವ ನಿರೀಕ್ಷಯಲ್ಲಿ ಮಾವು ಬೆಳೆಗಾರ ಇದ್ದರೂ ಇಳುವರಿ ಕಡಿಮೆ ಯಾಗಿದೆ.
ಮಾರುಕಟ್ಟೆಯಲ್ಲಿ ಬಾದಾಮ್, ರಸಪುರಿ ಮತ್ತು ಬೈಗಾನ್ ಪಲ್ಲಿ ಮಾವುಗಳು ಕೆಜಿಗೆ ರು. 200ರಿಂದ 300, ರಾಜಗೀರ್ ಕೆಜಿಗೆ ರು.100ರಿಂದ 150, ಬೇನಿಷಾ ಕೆಜಿಗೆ ರು. 60 ರಿಂದ 120, ತೋತಾಪುರಿ ಕೆಜಿಗೆ 40 ರಿಂದ 60 ರು.ಗಳಿಗೆ ಮಾರಾಟ ವಾಗುತ್ತಿದ್ದು, ಕಳೆದ ಬಾರಿಗಂತ ಕೆಜಿಯ ಮೇಲೆ ರು. 20 ರಿಂದ 60 ರವರೆಗೆ ಹೆಚ್ಚಾಗಿದ್ದು ಗ್ರಾಹಕರಿಗೆ ಹೊರೆಯಾಗಿದೆ.
ತೋತಾಪುರಿ ತಳಿಯು ಹೆಚ್ಚಾಗಿ ತಿರುಳು ತೆಗೆಯಲು ಮತ್ತು ಜ್ಯೂಸ್ ಹಾಗೂ ಪಲ್ಪ್ ಜ್ಯೂಸ್ ಗಳಿಗೆ ಬಳಕೆ ಯಾಗುವುದರಿಂದ ಜ್ಯೂಸ್ ತಯಾರಿಕಾ ಫ್ಯಾಕ್ಟರಿಗಳವರು ಜುಲೈ ತಿಂಗಳಲ್ಲಿ ಮಾವು ಖರೀದಿಗೆ ಆಗಮಿಸುವ ನಿರೀಕ್ಷೆ ಇದೆ. ಪಕ್ಕದ ಕೋಲಾರ ಜಿಲ್ಲೆಯ ಶ್ರೀನಿವಾಸಪುರವು ದೇಶದಲ್ಲೆ ಅಧಿಕ ಮಾವು ಬೆಲಕೆಯುವ ತಾಲೂಕಾಗಿದ್ದು ಇದರ ನಂತರದ ಸ್ಥಾನದಲ್ಲಿ ಜಿಲ್ಲೆಯ ಚಿಂತಾಮಣಿ ಬರುತ್ತದೆ. ಜಿಲ್ಲೆಯಲ್ಲಿ ಸುಮಾರು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು 10 ರಿಂದ 15 ಲಕ್ಷ ಟನ್ ಮಾವು ಬೆಳೆಯುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇಳುವರಿ ಕಡಿಮೆಯಾಗುವ ಆತಂಕದಲ್ಲಿ ಬೆಳೆಗಾರರಿದ್ದಾರೆ.