ಯಲಬುರ್ಗಾ: ನಮ್ಮ ಸರ್ಕಾರದ ಅವಧಿಯಲ್ಲಿ ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿವಿ ಎಂದು ನಾಮಕರಣ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಂಗಳೂರಿನಲ್ಲಿ ಸಮಾಜಕ್ಕೆ ೩ ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಂದಿನ ಬಜೆಟ್ನಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ. ಶೋಷಿತರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ದೆಹಲಿಯಲ್ಲಿ ₹೩೦ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅರ್ಧ ಎಕರೆ ಭೂಮಿ ಖರೀದಿಸಿ, ಐಎಎಸ್, ಐಪಿಎಸ್ ಅಧ್ಯಯನ ಮಾಡುವವರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಇಲ್ಲಿ ಯಾರನ್ನೂ ಯಾರೂ ಬೆಳೆಸುವುದಿಲ್ಲ. ನಾಯಕರನ್ನು ನೋಡಿ ಬೆಳೆಯಬೇಕು. ಎಲ್ಲ ಸಮಾಜದವರ ಸಹಕಾರದಿಂದ ನಾಯಕರಾಗಲು ಸಾಧ್ಯ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೌರವಯುತವಾಗಿ ಕಾಣಬೇಕು. ಶಿಕ್ಷಣದಿಂದ ಸಶಕ್ತರಾಗುವ ಪ್ರಯತ್ನ ಮಾಡಬೇಕು. ಸರ್ಕಾರ ತಾತ್ಪೂರ್ತಿಕವಾಗಿ ಸೌಲಭ್ಯ ಒದಗಿಸುತ್ತದೆ. ಪರಿಪೂರ್ಣವಾಗಿ ಒದಗಿಸುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಸಮಾಜದ ಸ್ವಾಮೀಜಿಗಳಿಗೆ ಬುದ್ಧಿ ಹೇಳುವುದು, ಅವರ ವಿರುದ್ಧ ಟೀಕೆ ಮಾಡುವುದು ನಿಲ್ಲಬೇಕು ಎಂದರು.