ಅಲೆಮಾರಿಗಳಿಗೆ ಒಳಮೀಸಲಾತಿ ನೀಡದಿದ್ದರೆ ಸಿಎಂ ಮನೆ ಮುತ್ತಿಗೆ

KannadaprabhaNewsNetwork |  
Published : Aug 30, 2025, 01:00 AM IST
ಪೋಟೋ, 29ಎಚ್‌ಎಸ್‌ಡಿ1: ನಗರದಲ್ಲಿ ಶುಕ್ರವಾರ ಅಲೆಮಾರಿಗಳಿಗೆ ಶೇ 1ರಷ್ಟು ಒಳ ಮೀಸಲಾತಿ ಜಾರಿ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುವ ಸಲುವಾಗಿ ಓನಕೆ ಒಬವ್ವ ವೃತ್ತದಲ್ಲಿ  ಆಹೋ ರಾತ್ರಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಅಲೆಮಾರಿಗಳಿಗೆ ಶೇ.1ರಷ್ಟು ಒಳ ಮೀಸಲಾತಿ ಜಾರಿ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುವ ಸಲುವಾಗಿ ಓನಕೆ ಒಬವ್ವ ವೃತ್ತದಲ್ಲಿ ಅಹೋರಾತ್ರಿ ಧರಣಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕದಲ್ಲಿನ 59 ಅಲೆಮಾರಿ ಸಮುದಾಯಗಳನ್ನು ಒಳಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ ಶೇ.1ರಷ್ಟು ಪಾಲನ್ನು ನೀಡದಿದ್ದರೆ ವಿಧಾನಸೌಧ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಪರಿಶಿಷ್ಟ ಜಾತಿ 59 ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜೋಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಅಲೆಮಾರಿಗಳಿಗೆ ಶೇ.1ರಷ್ಟು ಒಳ ಮೀಸಲಾತಿ ಜಾರಿ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುವ ಸಲುವಾಗಿ ಓನಕೆ ಒಬವ್ವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಈಗಾಗಲೆ ಮೀಸಲಾತಿಯ ಒಳವರ್ಗೀಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಆದರೆ ಕರ್ನಾಟಕದ ಸರ್ಕಾರದ ಈ ಆದೇಶವು ಸರ್ವೋಚ್ಚ ನ್ಯಾಯಾಲಯವು ಮೀಸಲಾತಿಯ ಒಳವರ್ಗೀಕರಣದ ಕುರಿತು ನೀಡಿದ ಮಹತ್ವದ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ದೂರಿದರು.

ಕಳೆದ 75 ವರ್ಷಗಳಲ್ಲಿ ಮೀಸಲಾತಿಯ ಮೂಲಕ ಸೂಕ್ತ ಪ್ರಾತಿನಿಧ್ಯ ಪಡೆಯದ ಅಲೆಮಾರಿ ಸಮುದಾಯಗಳಲ್ಲಿ ಈ ತೀರ್ಪು ಹೊಸ ಭರವಸೆ ಮೂಡಿಸಿತ್ತು. ಸದರಿ ತೀರ್ಪನ್ನು ಆಧರಿಸಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ತರುವ ಸಲುವಾಗಿ ಕರ್ನಾಟಕ ಸರ್ಕಾರ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ನೇಮಿಸಲಾಗಿತ್ತು. ಈ ಆಯೋಗವು 59 ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಇವುಗಳ ಜೊತೆಗೆ ಇನ್ನೂ ಹತ್ತು ಸಮುದಾಯಗಳನ್ನು ಸೇರ್ಪಡೆ ಮಾಡಿ ಶೇ.1ರಷ್ಟು ಪ್ರಮಾಣದ ಮೀಸಲಾತಿ ನಿಗದಿ ಮಾಡಿತ್ತು. ಆದರೆ ಅವೈಜ್ಞಾನಿಕ ಕ್ಯಾಬಿನೆಟ್ ನಿರ್ಣಯವು ಅಲೆಮಾರಿ ಸಮುದಾಯಗಳನ್ನು ಪ್ರಭಾವಿ ಜಾತಿ ಸಮುದಾಯಗಳ ಗುಂಪಿಗೆ ಸೇರಿಸಿಬಿಟ್ಟಿದೆ ಎಂದು ಆರೋಪಿಸಿದರು.

ಒಳ ಮೀಸಲಾತಿಯನ್ನು ಜಾರಿ ಮಾಡುವ ಒತ್ತಡದಲ್ಲಿರುವ ಸರ್ಕಾರವು 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂ ಅಲೆಮಾರಿ ಗಳಂತಹ ಮುಖ್ಯವಾಹಿನಿಗೆ ಬಾರದ ಮತ್ತು ಧ್ವನಿ ಇಲ್ಲದ ಸಮುದಾಯಗಳ ವಿಷಯದಲ್ಲಿ ಸರ್ಕಾರವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ಸರ್ಕಾರದ ಈ ನಿರ್ಣಯವು ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವನ್ನು ಬರೆದುಬಿಟ್ಟಿದೆ. ಸಾವಿರಾರು ವರ್ಷಗಳಿಂದ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿಯೇ ಬದುಕಿ ಮನೆ ವಸತಿ ಮತ್ತು ಶಿಕ್ಷಣ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಸಮುದಾಯಕ್ಕೆ ಮಾನ್ಯ ಮುಖ್ಯಮಂತ್ರಿಗಳು ಸಂಜೀವಿನಿ ಆಗಬೇಕೆ ಹೊರೆತು ಅವರಿಗೆ ಸಿಗುವ ಅನ್ನವನ್ನು ಕಸಿದು ಇನ್ನೊಬ್ಬರಿಗೆ ನೀಡುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದರು.

75 ವರ್ಷಗಳಲ್ಲಿ ಸಂವಿಧಾನಬದ್ಧವಾದ ಯಾವ ಸೌಲಭ್ಯಗಳನ್ನೂ ಪಡೆಯದೆ ಹಿಂದುಳಿದಿರುವುದಕ್ಕೆ ಬಲಾಡ್ಯ ಸಮುದಾಯಗಳ ಪ್ರಭಾವ ಮತ್ತು ಸರ್ಕಾರಗಳ ದಿವ್ಯ ನಿರ್ಲಕ್ಷ್ಯವೇ ಕಾರಣ. ಈ ಕಾರಣಕ್ಕಾಗಿ 59 ಅಲೆಮಾರಿ ಸಮುದಾಯಗಳನ್ನು ಒಂದು ಪ್ರತ್ಯೇಕ ಗುಂಪನ್ನಾಗಿ ಗುರುತಿಸಬೇಕು. ಈಗಿರುವ ಮೀಸಲಾತಿಯಲ್ಲಿ ಶೇ.1 ಪ್ರಮಾಣವನ್ನು ನಿಗದಿಪಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ಅವರ ವರದಿಯಲ್ಲಿ ಎಬಿಸಿಡಿ ಎಂದು 4 ವರ್ಗಗಳನ್ನಾಗಿ ಮಾಡಿ ಅದರಲ್ಲಿ ಅಲೆಮಾರಿ ಬಂಧುಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕಾಗಿ ತಿಳಿಸಿದ್ದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‍ನ ಆದೇಶವನ್ನು ಉಲ್ಲಂಘನೆ ಮಾಡಿದ್ದು ಮತ್ತು ಅಯೋಗದ ವರದಿಯನ್ನು ದಿಕ್ಕರಿಸಿ ಈ ಮೂರು ವಿಭಾಗಗಳಾಗಿ ಮಾಡಿ ಅತೀ ಹಿಂದುಳಿದ ಅಲೆಮಾರಿ ವರ್ಗಗಳನ್ನು ಸಿ ವರ್ಗಕ್ಕೆ ಸೇರಿಸಿರುವುದರಿಂದ ಕರ್ನಾಟಕ ಉಚ್ಛನ್ಯಾಯಾಲಯಕ್ಕೆ ಅಲೆಮಾರಿ ಬಂಧುಗಳು ಪ್ರಕರಣವನ್ನು ದಾಖಲೆ ಮಾಡುತ್ತೇವೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸುಡುಗಾಡು ಸಿದ್ಧರ ಜಿಲ್ಲಾಧ್ಯಕ್ಷ ಜಿ.ಕೃಷ್ಣಪ್ಪ, ಹಂಡಿಜೋಗಿ ಸಮಾಜದ ಜಿಲ್ಲಾಧ್ಯಕ್ಷ ಎನ್.ಸಿದ್ದೇಶ್, ಶಿಳ್ಯಾಕ್ಯಾತ ಸಮಾಜದ ಜಿಲ್ಲಾಧ್ಯಕ್ಷ ಕೃಣ್ಣಪ್ಪ, ಧಕ್ಕಲಿಗ ಸಮಾಜ ಜಿಲ್ಲಾಧ್ಯಕ್ಷ ರಾಜಣ್ಣ ಚನ್ನದಾಸರು ಸಮಾಜದ ಜಿಲ್ಲಾಧ್ಯಕ್ಷ ಕಮಲಾಸನ್, ಜಗ್ಲಿ ಸಮಾಜ ಜಿಲ್ಲಾಧ್ಯಕ್ಷ ರಾಮಾಂಜನಪ್ಪ, ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ್, ಅಲೆಮಾರಿ ಸಮಾಜದ ಮುಖಂಡರಾದ ಬಾಬು.ಟಿ, ಬುಡುಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಸುಧಾಕರ್, ಸಮಾಜ ಚಿಂತಕರಾದ ಯಾದವರೆಡ್ಡಿ ರಾಮು ಗೋಸಾಯಿ, ವೆಂಕಟೇಶ್ವರ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ