- ಬ್ರಾಹ್ಮಣ ಸಮಾಜ ಸೇವಾ ಸಂಘ ಪ್ರತಿಭಟನೆಯಲ್ಲಿ ಒತ್ತಾಯ । ಕಾಂತರಾಜ ಆಯೋಗ ವರದಿಗೆ ವಿರೋಧ
- ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ಮಕ್ಕಳ ಜನಿವಾರ ತೆಗೆಸಿದ, ಪರೀಕ್ಷೆ ತಪ್ಪಿಸಿದ ಅಧಿಕಾರಿ-ಸಿಬ್ಬಂದಿ ವಜಾಗೆ ಆಗ್ರಹ- - -
ಕನ್ನಡಪ್ರಭ ವಾರ್ತೆ ದಾವಣಗೆರೆಅವೈಜ್ಞಾನಿಕವಾದ ಕಾಂತರಾಜ ಆಯೋಗದ ವರದಿ ತಿರಸ್ಕರಿಸುವಂತೆ, ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಿ ಬ್ರಾಹ್ಮಣ ಸಮಾಜ ಸೇವಾ ಸಂಘ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಡಾ. ಸಿ.ಕೆ.ಆನಂದ ತೀರ್ಥಾಚಾರ್, ನಗರ ಬ್ರಾಹ್ಮಣ ಸಮಾಜ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್, ಜಿಲ್ಲಾಧ್ಯಕ್ಷ ಡಾ. ಬಿ.ಟಿ.ಅಚ್ಯುತ್, ಡಾ. ಎಸ್.ಆರ್.ಹೆಗಡೆ, ಡಾ.ಸುರೇಶ ಬಾಬು, ಪಿ.ಸಿ. ಶ್ರೀನಿವಾಸ ಭಟ್, ಪಿ.ಸಿ.ರಾಮನಾಥ, ಎಂ.ಜಿ.ಶ್ರೀಕಾಂತ, ಅನಿಲ್ ಬಾರೆಂಗಳ್ ನೇತೃತ್ವದಲ್ಲಿ ಕಾಂತರಾಜ ವರದಿ ತಿರಸ್ಕರಿಸಲು, ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ಮಕ್ಕಳ ಜನಿವಾರ ಬಿಚ್ಚಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಅಪರ ಡಿಸಿ ಪಿ.ಎನ್.ಲೋಕೇಶ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಸದಸ್ಯ, ಸಮಾಜದ ಯುವ ಮುಖಂಡ ಪಿ.ಸಿ.ಶ್ರೀನಿವಾಸ ಭಟ್, 10 ವರ್ಷಗಳ ಹಿಂದೆಯೇ ಕಾಂತರಾಜ್ ಆಯೋಗ ಕೈಗೊಂಡ ಜಾತಿ ಜನಗಣತಿ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಅದರಲ್ಲಿ ಬ್ರಾಹ್ಮಣ ಸಮಾಜದ ಜನಗಣತಿ 17,83,428 ಮಾತ್ರ ತೋರಿಸಿದ್ದು, ಶೇ.2.98ರಷ್ಟು ಮಾತ್ರ ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಮೀಕ್ಷೆ ಬಗ್ಗೆ ಇಡೀ ರಾಜ್ಯವ್ಯಾಪಿ ಬಹುತೇಕ ಎಲ್ಲ ಜಾತಿ, ಸಮುದಾಯಗಳಿಂದ ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲವೆಂಬ ಮಾತು ಕೇಳಿಬರುತ್ತಿದೆ. ಮನೆ ಮನೆಗೂ ಸಂಪರ್ಕಿಸಿಲ್ಲ. ವರದಿಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ಬ್ರಾಹ್ಮಣ ಸಮುದಾಯಕ್ಕೂ ಅನ್ಯಾಯ:ಬ್ರಾಹ್ಮಣ ಸಮುದಾಯದ ಜಾತಿಗಣತಿಯೂ ಅವೈಜ್ಞಾನಿಕವಾಗಿದೆ. ಇಂತಹ ವರದಿ ತೀವ್ರವಾಗಿ ವಿರೋಧಿಸುತ್ತೇವೆ. ವೈಜ್ಞಾನಿಕ, ವ್ಯವಸ್ಥಿತವಾಗಿ ಮತ್ತೊಮ್ಮೆ ಜಾತಿ ಜನಗಣತಿ ಕೈಗೊಳ್ಳಬೇಕು. ಕಾಂತರಾಜ ಆಯೋಗದ ವರದಿ ತಿರಸ್ಕರಿಸಬೇಕು. ಇದು ಬ್ರಾಹ್ಮಣ ಸಮಾಜ ಸೇವಾ ಸಂಘದ ಹಕ್ಕೊತ್ತಾಯವಾಗಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು. ಯಾವುದೇ ಕಾರಣಕ್ಕೂ ಅವೈಜ್ಞಾನಿಕ ವರದಿ ಮಂಡಿಸಿ, ಅಂಗೀಕರಿಸುವ ಕೆಲಸ ಆಗಬಾರದು ಎಂದು ಹೇಳಿದರು.
ಜನಿವಾರಕ್ಕೆ ಅವಮಾನ ಅಕ್ಷಮ್ಯ:ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಏ.16ರಂದು ಸಿಇಟಿ ಪರೀಕ್ಷೆಗೆಂದು ಕೇಂದ್ರದೊಳಗೆ ತೆರಳುತ್ತಿದ್ದ ಬ್ರಾಹ್ಮಣ ವಿದ್ಯಾರ್ಥಿಗಳು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನೇ ತೆಗೆಸಿ ಹಾಕಿದ್ದು ಅಕ್ಷಮ್ಯ. ಬೀದರ್ ಪರೀಕ್ಷಾ ಕೇಂದರ್ದಲ್ಲಿ ಇದೇ ಕಾರಣಕ್ಕೆ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯದೇ, ಆತನ ಭವಿಷ್ಯವೇ ಮಂಕಾಗಿರುವುದು ದುರಂತ ಎಂದು ಶ್ರೀನಿವಾಸ ಭಟ್ ಹೇಳಿದರು.
ಹೀಗೆ ಗಾಯತ್ರಿ ಮಂತ್ರ ದೀಕ್ಷೆ ಪಡೆದು, ಆತ್ಮ ಸಾಕ್ಷಾತ್ಕಾರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ, ಜನಿವಾರ ತೆಗೆಯಲು ಒತ್ತಡ ಹೇರಿ, ಅವಮಾನಕರವಾಗಿ ವರ್ತಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.ವರ್ಷಪೂರ್ತಿ ಕಷ್ಟಪಟ್ಟು, ಓದಿ ಸಿಇಟಿ ಮೂಲಕ ಬದುಕು, ಭವಿಷ್ಯ ಕಟ್ಟಿಕೊಳ್ಳಲು ಸಿದ್ಧವಾಗಿ ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿದ ಅಧಿಕಾರಿಗಳ ಕೃತ್ಯವು ಬ್ರಾಹ್ಮಣ ಹಾಗೂ ಹಿಂದು ವಿರೋಧಿ ಧೋರಣೆಯಾಗಿದೆ. ಈ ನಡೆಯನ್ನು ಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ದಾವಣಗೆರೆ ವಿಪ್ರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಮೊಘಲರು, ಬ್ರಿಟಿಷರು ಮಾಡುತ್ತಿದ್ದ ಇಂತಹ ಹೀನಕೃತ್ಯವು ಈಗಲೂ ಮುಂದುವರಿದಿದ್ದು ಕಳವಳಕಾರಿ ಸಂಗತಿ. ಧರ್ಮದ್ರೋಹಿ ಅಧಿಕಾರಿಗಳು ಎಷ್ಟೇ ಅವಮಾನಿಸಿದರೂ ಬ್ರಾಹ್ಮಣ ಸಮಾಜ ಪ್ರಾಣ ಪಣಕ್ಕಿಟ್ಟು, ಧರ್ಮರಕ್ಷಣೆ ಮಾಡಲಿದೆ. ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಲಿ ಎಂದು ತಾಕೀತು ಮಾಡಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಗುರುರಾಜ ಆಚಾರ್, ಪ್ರಸನ್ನ, ಪ್ರದೀಪ್, ಮಾಧವ ಪದಕಿ, ಉಮೇಶ ಕುಲಕರ್ಣಿ, ಡಿ.ಶೇಷಾಚಲ, ಬಾಲಕೃಷ್ಣ ವೈದ್ಯ, ರಾಘವೇಂದ್ರ, ಪೃಥ್ವಿ ಹೊಳ್ಳ, ವಿನಯ್ ಪದಕಿ, ಗೋಪಾಲ ಕೃಷ್ಣ, ಸುಬ್ರಹ್ಮಣ್ಯ ಆಚಾರ್, ಸುಧನ್ವ ಭಾರದ್ವಾಜ್, ವಿಜಯಕುಮಾರ, ವಸಂತ, ಸುಮಂತ್, ಪ್ರವೀಣಕುಮಾರ, ರಮೇಶ ಕುಮಾರ, ಸುಬ್ರಹ್ಮಣ್ಯ, ಕೃಷ್ಣಪ್ರಸಾದ್ ಸೇರಿದಂತೆ ವಿದ್ಯಾರ್ಥಿ, ಯುವಜನರು, ಹಿರಿಯರು, ತಾಯಂದಿರು, ಬ್ರಾಹ್ಮಣ ಸಮಾಜದವರು ಇದ್ದರು.- - -
(ಕೋಟ್) ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರದ ಮೇಲೆ ಕಣ್ಣು ಹಾಕಿ, ಪರೀಕ್ಷಾ ಕೊಠಡಿಗೆ ಒಳಗೆ ಬರಲು ಹೇಳಿದ ಅಧಿಕಾರಿಯನ್ನು ಸೇವೆಯಿಂದಲೇ ವಜಾ ಮಾಡಬೇಕು. ಬೀದರ್ನಲ್ಲಿ ಬ್ರಾಹ್ಮಣ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆಯದಂತೆ ಮಾಡಿದ ಅಧಿಕಾರಿ, ಸಿಬ್ಬಂದಿಯನ್ನೂ ಸೇವೆಯಿಂದ ವಜಾ ಮಾಡಬೇಕು. ಸಿಇಟಿ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬರೀ ಮಾತಿನಲ್ಲಷ್ಟೇ ಅಲ್ಲ, ಕೃತಿಯಲ್ಲೂ ನ್ಯಾಯ ಒದಗಿಸಲಿ.- ಪಿ.ಸಿ.ಶ್ರೀನಿವಾಸ ಭಟ್, ಯುವ ಮುಖಂಡ, ಬ್ರಾಹ್ಮಣ ಸಮಾಜ
- - --19ಕೆಡಿವಿಜಿ: ಹೊಸದಾಗಿ ಜಾತಿ ಜನಗಣತಿ ಕೈಗೊಳ್ಳುವಂತೆ ಒತ್ತಾಯಿಸಿ ಹಾಗೂ ಜನಿವಾರ ಬಿಚ್ಚಿಸಿದ ಘಟನೆ ಖಂಡಿಸಿ ದಾವಣಗೆರೆಯಲ್ಲಿ ಶನಿವಾರ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.