ಮಡಿಕೇರಿ ಕೋಟೆ ಮತ್ತು ದೇವಟ್ ಪರಂಬುವಿನಲ್ಲಿ ಪುಷ್ಪ ನಮನ ಸಲ್ಲಿಸುವ ಮೂಲಕ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆ ಹಿರಿಯರನ್ನು ಸ್ಮರಿಸಿತು.
ಮಡಿಕೇರಿ: ಮಡಿಕೇರಿ ಕೋಟೆ ಮತ್ತು ದೇವಟ್ ಪರಂಬುವಿನಲ್ಲಿ ಪುಷ್ಪ ನಮನ ಸಲ್ಲಿಸುವ ಮೂಲಕ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆ ಹಿರಿಯರನ್ನು ಸ್ಮರಿಸಿತು.ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪರ ನೇತೃತ್ವದಲ್ಲಿ ಭೇಟಿ ನೀಡಿದ ಸದಸ್ಯರು ಹಿರಿಯರ ದುರಂತ ಅಂತ್ಯದ ಕುರಿತು ಬೇಸರ ವ್ಯಕ್ತಪಡಿಸಿ ಗೌರವ ಅರ್ಪಿಸಿದರು. ಎನ್.ಯು. ನಾಚಪ್ಪ ಮಾತನಾಡಿ, ಮಡಿಕೇರಿ ಕೋಟೆ ಮತ್ತು ನಾಲ್ನಾಡ್ ಅರಮನೆಯಲ್ಲಿ ಪಿತೂರಿಯಿಂದ ಕೊಡವರನ್ನು ಹತ್ಯೆ ಮಾಡಲಾಗಿದೆ. ದೇವಟ್ ಪರಂಬುವಿನಲ್ಲಿ ಟಿಪ್ಪು ಸುಲ್ತಾನನ ಪಡೆಗಳಿಂದ ಮತ್ತು ಫ್ರೆಂಚ್, ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಿಂದ ಸಾವಿರಾರು ಕೊಡವರ ಹತ್ಯೆಯಾಗಿದೆ.
ರಾಜರು ಸಾವಿರಾರು ಕೊಡವರನ್ನು ಮಡಿಕೇರಿಯ ರಾಜಾಸೀಟು ಉದ್ಯಾನವನದಿಂದ ತಾಳತ್ತಮನೆಯ ಕಡಿದಾದ ಭೂಪ್ರದೇಶಕ್ಕೆ ತಳ್ಳಿದರು. ಹೀಗೆ ದುರಂತ ಅಂತ್ಯಕಂಡ ಹಿರಿಯ ಕೊಡವರ ಆತ್ಮಗಳಿಗೆ ಶಾಂತಿ ಮತ್ತು ಸಿಎನ್ಸಿಯ ಹೋರಾಟಕ್ಕೆ ಬೆಂಬಲ ಕೋರಿ ಪ್ರಾರ್ಥಿಸಲಾಯಿತು ಎಂದರು.ಆನಿಮಿಸ್ಟಿಕ್ ಏಕ-ಜನಾಂಗೀಯ ಕೊಡವ ಸಮುದಾಯದ ದುರಂತಗಳನ್ನು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು. ದುರಂತ ನಡೆದ ಸ್ಥಳಗಳಲ್ಲಿ ವಿಶ್ವ ದರ್ಜೆಯ ಅಂತಾರಾಷ್ಟ್ರೀಯ ಸ್ಮಾರಕಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು. ನಂದಿನೆರವಂಡ ರೇಖಾ ನಾಚಪ್ಪ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಮುದ್ದಿಯಾದ ಲೀಲಾವತಿ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಕಲಿಯಂಡ ಪ್ರಕಾಶ್, ಮಂದಪಂಡ ಮನೋಜ್ ಮಂದಣ್ಣ, ಅರೆಯಡ ಗಿರೀಶ್, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಚೋಳಪಂಡ ನಾಣಯ್ಯ, ಕೂಪದಿರ ಸಾಬು, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ನಂದಿನೆರವಂಡ ವಿಜು, ಮಂದಪಂಡ ಸೂರಜ್, ನಂದಿನೆರವಂಡ ಅಪ್ಪಯ್ಯ ಬಡುವಂಡ ವಿಜಯ, ಅಜ್ಜಿನಿಕಂಡ ಸನ್ನಿ ಮಾಚಯ್ಯ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.