ಮಡಿಕೇರಿ: ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ (ಸಿಎನ್ಸಿ) 48 ಗಂಟೆಗಳ ಅಹೋರಾತ್ರಿ ಸತ್ಯಾಗ್ರಹವನ್ನು ಮಂಗಳವಾರ ಮಡಿಕೇರಿ ನಗರದ ಕೊಡವ ಮಂದ್ ನಲ್ಲಿ ಆರಂಭಿಸಿತು.
ಸತ್ಯಾಗ್ರಹದಲ್ಲಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ, ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರ ನೀಡಬೇಕೆಂದು ಆಗ್ರಹಿಸುವ ಮನವಿಪತ್ರವನ್ನು ರಾಷ್ಟಪತಿ, ಪ್ರಧಾನಮಂತ್ರಿ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಲಾಗುವುದು.
ಕೊಡವ ಮಂದ್ ನಲ್ಲಿ ಮೇ 14ರಂದು ಬೆಳಿಗ್ಗೆ 10.30ರವರೆಗೆ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದರು.ಕೊಡವರ ಸಾಂಪ್ರದಾಯಿಕ ಆವಾಸ ಸ್ಥಾನದ ಗಡಿಗಳನ್ನು ಬದಲಾಯಿಸದೆ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಕ್ಷೇತ್ರದ ಮಾದರಿಯಲ್ಲಿ, ಏಕ-ಜನಾಂಗೀಯ ಸ್ಥಳೀಯ ಪ್ರಕೃತಿ ಆರಾಧಕ (ಅನಿಮಿಸ್ಟಿಕ್) ಕೊಡವರಿಗಾಗಿ “ಅಮೂರ್ತ ಕೊಡವ ಕ್ಷೇತ್ರ”ವನ್ನು ಘೋಷಿಸಬೇಕು.ಮುಂಬರುವ 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ (ಸಂಕೇತ) ಮತ್ತು ಕಾಲಂ (ಅಂಕಣ) ಒದಗಿಸಬೇಕು ಎಂದು ಒತ್ತಾಯಿಸಿದ ಅವರು ಕೊಡವ ಪ್ರಾತಿನಿಧ್ಯ ಮತ್ತು ಜನಗಣತಿ ಮಾನ್ಯತೆಗಾಗಿ ಇರುವ ಸಾಂವಿಧಾನಿಕ ಅಂಶಗಳನ್ನು ವಿವರಿಸಿದರು.