ಕನ್ನಡಪ್ರಭ ವಾರ್ತೆ ಬೇಲೂರು ಕಾರು ಹಾಗೂ ಸಿಎನ್ಜಿ ಆಟೋ ನಡುವೆ ಡಿಕ್ಕಿ ಸಂಭವಿಸಿದ್ದು ಆಟೋ ಸಂಪೂರ್ಣವಾಗಿ ಭಸ್ಮವಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಪಟ್ಟಣದ ಚನ್ನಕೇಶವ ನಗರದ ನಿವಾಸಿ ಸಿದ್ದೇಶ್ ಅವರ ಮಗ ಪ್ರೀತು, ಅವರ ಪತ್ನಿ ಪ್ರತಿಮಾ, ಮಗಳು ಪ್ರಿಯಾ ಹಾಗೂ ತಮ್ಮನ ಮಗಳು ಭೂಮಿಕ ಅವರು ಕುಟುಂಬ ಸಮೇತ ಮೂಡಿಗೆರೆ ತಾಲೂಕಿನ ಹಾನ್ಬಾಳಿಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಎದುರುಗಡೆಯಿಂದ ಬಂದ ಕಾರು ಚಾಲಕನ ಅಜಾಗರೂಕ ಚಾಲನೆಯ ಪರಿಣಾಮ ಆಟೋಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಆಟೋ ಪಲ್ಟಿಯಾಗಿದೆ. ಬಳಿಕ ಆಟೋದಲ್ಲಿದ್ದ ಸಿಎನ್ಜಿ ಗ್ಯಾಸ್ಗೆ ಬೆಂಕಿ ಹೊತ್ತಿಕೊಂಡು ವಾಹನ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.ಅಪಘಾತದಲ್ಲಿ ಆಟೋದಲ್ಲಿದ್ದ ಪ್ರೀತು, ಪ್ರತಿಮಾ, ಪ್ರಿಯಾ ಹಾಗೂ ಭೂಮಿಕ ಅವರಿಗೆ ತೀವ್ರ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಅವರನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಆಟೋ ಸಂಪೂರ್ಣವಾಗಿ ಭಸ್ಮವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.