ಕಾಫಿ ಗಿಡದಿಂದಲೆ ಹಸಿ ಕಾಫಿ ಕಳವು ಮಾಡಿರುವ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲದ ಎಲ್ಕಿಲ್ ಎಸ್ಟೇಟ್ ನಲ್ಲಿ ಕಾಫಿ ಗಿಡದಿಂದಲೆ ಹಸಿ ಕಾಫಿ ಕಳವು ಮಾಡಿರುವ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಸಿದ್ದಾಪುರ ಸುಣ್ಣದಗೂಡು ಹಾಗೂ ಮಟ ನಿವಾಸಿಗಳಾದ ಅನ್ಸಾರ್ ( 34) ಮತ್ತು ಶಕೀರ್ (27) ಎಂಬವರೇ ಬಂಧಿತರು.ಡಿಸೆಂಬರ್ 27ರ ಮಧ್ಯಾಹ್ನ 2.30ರ ಸುಮಾರಿಗೆ ತೋಟದ ವ್ಯವಸ್ಥಾಪಕ ಕಾವೇರಪ್ಪ ಸಿಬ್ಬಂದಿಯ ಜತೆ ತೋಟದಲ್ಲಿ ಗಸ್ತು ನಡೆಸುವ ಸಂದರ್ಭದಲ್ಲಿ ಆರ್ಗನಿಕ್ಟಿಬಿ ಬ್ಲಾಕ್ ಬಳಿಯ ರಸ್ತೆಯ ಬದಿ ಸ್ಕೂಟಿಯೊಂದು ನಿಂತಿರುವುದನ್ನು ಕಂಡು ಅನುಮಾನಗೊಂಡು ತೋಟದೊಳಗೆ ನೋಡಿದ ಸಂದರ್ಭ ಇಬ್ಬರು ಗಿಡದಿಂದ ಕಾಫಿ ಹಣ್ಣು ಕಿತ್ತು ಚೀಲಕ್ಕೆ ತುಂಬುತ್ತಿದ್ದು ಇವರ ಶಬ್ದಕ್ಕೆ ಅವರು ಓಡಿ ಪರಾರಿಯಾಗಿದ್ದರು ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಅಂದಾಜು 100 ಕೆ.ಜಿ. ಕಾಫಿ ಹಣ್ಣು ಕೊಯ್ದಿರುವುದು ಕಂಡು ಬಂದಿತು. ಈ ಸಂಬಂಧ ಪೋಲೀಸ್ ಠಾಣೆಗೆ ದೂರು ನೀಡಲಾದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಿದ್ದಾಪುರ ಪೋಲಿಸರು ಸ್ಥಳದಲ್ಲಿ ಇದ್ದ ಸ್ಕೂಟಿ ಯನ್ನು ವಶಕ್ಕೆ ಪಡೆದು ಸ್ಥಳೀಯ ನಿವಾಸಿಗಳಾದ ಆರೋಪಿಗಳಾದ ಅನ್ಸಾರ್ ಮತ್ತು ಶಕೀರ್ ಎಂಬವರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಮಂಜುನಾಥ್, ಎ. ಎಸ್. ಐ ರಾಜೇಶ್, ಶ್ರೀನಿವಾಸ್ ಹಾಗೂ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.