ರಾಮನಗರ: ಬಿಡದಿ ಪುರಸಭೆ ವ್ಯಾಪ್ತಿಯ ಮುದ್ದಾಪುರಕರೇನಹಳ್ಳಿ (5ನೇ ವಾರ್ಡಿ) ನಲ್ಲಿ 30ಲಕ್ಷ ರು.ಗಳ ವೆಚ್ಚದಲ್ಲಿ ಮೂರು ಅಶ್ವಥಕಟ್ಟೆಗಳ ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಂಡು ಮಾದರಿ ವಾರ್ಡನ್ನಾಗಿ ರೂಪಿಸಲು ಶ್ರಮಿಸಲಾಗುತ್ತಿದೆ ಎಂದು ಪುರಸಭಾ ಸದಸ್ಯೆ ಲಲಿತಾ ನರಸಿಂಹಯ್ಯ ತಿಳಿಸಿದರು.
ಬಿಡದಿ ಪುರಸಭಾ ವ್ಯಾಪ್ತಿಯ 5 ನೇ ವಾರ್ಡಿನ ಹುಚ್ಚಮ್ಮನದೊಡ್ಡಿಯಲ್ಲಿ ಗುರುವಾರ ಪುರಸಭಾ ನಿಧಿಯಿಂದ 20 ಲಕ್ಷ ರು.ಗಳ ವೆಚ್ಚದ ಚರಂಡಿ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.ವಾರ್ಡಿನ ಅಭಿವೃದ್ಧಿ ಕೆಲಸಗಳ ಜೊತೆಗೆ ಮುದ್ದಾಪುರ ಕರೆ, ಶೆಟ್ಟಿಗೌಡನದೊಡ್ಡಿನದೊಡ್ಡಿ, ನೆಲ್ಲಿಗುಡ್ಡೆ ಕೆರೆ ಬಳಿಯಿರುವ ಮೂರು ಅಶ್ವಥಕಟ್ಟೆಗಳನ್ನು ಅಭಿವೃದ್ದಿ ಮಾಡಲಾಗುತ್ತಿದ್ದು, ಪುರಸಭಾ ನಿಧಿಯಲ್ಲಿ ಲಭ್ಯವಾಗಿರುವ 20 ಲಕ್ಷ ಅನುದಾನದಲ್ಲಿ ಹುಚ್ಚಮ್ಮನದೊಡ್ಡಿ, ಮುದ್ದಾಪುರ ಕರೇನಹಳ್ಳಿಯಲ್ಲಿ ಚರಂಡಿ ಮತ್ತು ರಸ್ತೆಗಳಿಗೆ ಕಾಂಕ್ರಿಟ್ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಭಾಗದ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದಾಗಿ ಲಲಿತಾ ತಿಳಿಸಿದರು.ಬಿಡದಿ ರೈತ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ ಮಾತನಾಡಿ, ಮುದ್ದಾಪುರ ಕರೇನಹಳ್ಳಿ ಭಾಗದಲ್ಲಿ ಶವ ಸಂಸ್ಕಾರ ಮಾಡಲು ಜನರಿಗೆ ಅನುಕೂಲವಾಗುವಂತೆ 25 ಲಕ್ಷ ರು.ವೆಚ್ಚದಲ್ಲಿ ಸ್ಮಶಾನ ನಿರ್ಮಾಣ ಮಾಡಲಾಗಿದೆ. ಅದಕ್ಕೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಯಿಂದ ಹಳ್ಳದವರೆಗೆ 30 ಲಕ್ಷ ರು. ವೆಚ್ಚದಲ್ಲಿ ಚರಂಡಿಗಳ ನಿರ್ಮಾಣ, ಗಾಣಕಲ್ ರಸ್ತೆಯಲ್ಲಿ 15 ಲಕ್ಷ ರು. ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣ, ಧನ ಕರುಗಳಿಗೆ ನೀರುಣಿಸಲು ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿದೆ. ನರಸೇಗೌಡನದೊಡ್ಡಿ ಗ್ರಾಮದಲ್ಲಿ ಸಿಸಿ ರಸ್ತೆಗೆ 30 ಲಕ್ಷ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.ವಾರ್ಡಿನೆಲ್ಲೆಡೆ 180 ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಶೆಟ್ಟಿಗೌಡನದೊಡ್ಡಿ ಗ್ರಾಮದ ಬಳಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಪ್ರಗತಿಯಲ್ಲಿದೆ. ಹುಚ್ಚಮ್ಮನದೊಡ್ಡಿ, ನರಸೇಗೌಡನದೊಡ್ಡಿ, ಮುದ್ದಾಪುರ ಕರೇನಹಳ್ಳಿ ಭಾಗಗಳಲ್ಲಿ ಅಭಿವೃದ್ದಿ ಕಾರ್ಯಗಳು ನಡೆದಿವೆ. ಅಲ್ಲದೆ ತೆಂಗು ಬೆಳೆ ಅಭಿವೃದ್ದಿ ನಿಗಮದಿಂದ ಹೀರೆಹಳ್ಳಿ, ಕಾಕರಾಮನಹಳ್ಳಿ, ಕರೇನಹಳ್ಳಿ ಗ್ರಾಮಗಳಿಗೆ ರಸಗೊಬ್ಬರ, 1500ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ನರಸಿಂಹಯ್ಯ ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ನಾಗಣ್ಣ, ಶ್ರೀನಿವಾಸ್, ಬೈರಪ್ಪ, ಮಹದೇವು, ನಾಡಗೌಡ ಚನ್ನಪ್ಪ, ದೇವರಾಜು, ಹರೀಶ್, ಮಾಯಣ್ಣ, ಶಿವಣ್ಣ ಮತ್ತಿತರರು ಹಾಜರಿದ್ದರು.-----------------------------------
10ಕೆಆರ್ ಎಂಎನ್ 3.ಜೆಪಿಜಿಬಿಡದಿ ಪುರಸಭಾ ವ್ಯಾಪ್ತಿಯ 5 ನೇ ವಾರ್ಡಿನ ಹುಚ್ಚಮ್ಮನದೊಡ್ಡಿಯಲ್ಲಿ ಚರಂಡಿ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಸದಸ್ಯೆ ಲಲಿತಾ ನರಸಿಂಹಯ್ಯ ಹಾಗೂ ಮುಖಂಡರು ಭೂಮಿ ಪೂಜೆ ನೆರವೇರಿಸಿದರು.
------------------------------------