ಮಡಿಕೇರಿ: ರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಒಳಿತಿಗಿಂತ ಅಧಿಕಾರವೇ ಮುಖ್ಯವಾಗಿದೆ. ಜನರ ಜೀವನ ಹಾಳಾದರೂ ಪರವಾಗಿಲ್ಲ, ನಾವು ಅಧಿಕಾರಕ್ಕೆ ಬರಬೇಕೆನ್ನುವುದು ರಾಜಕೀಯ ಪಕ್ಷಗಳ ಹಂಬಲವಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ಕಾನೂನು ಸಲಹೆಗಾರ ಹಾಗೂ ಹಿರಿಯ ವಕೀಲ ಕೆ.ಪಿ.ಬಾಲಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದ್ದಾರೆ.ನಗರದ ಮಹದೇವಪೇಟೆಯ ಎ.ವಿ ಶಾಲೆಯ ಬಳಿ ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಆಮ್ ಆದ್ಮಿ ಪಾರ್ಟಿ ಹೆಸರೇ ಸೂಚಿಸುವಂತೆ ಈ ಪಕ್ಷಕ್ಕೆ ಸಾಮಾನ್ಯ ಜನರೇ ಮುಖ್ಯವಾಗಿದ್ದಾರೆ. ಇಲ್ಲಿ ಕುಟುಂಬ ರಾಜಕಾರಣವಿಲ್ಲ, ಇದು ಪಾರ್ಟಿಯ ಸಿದ್ಧಾಂತವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಈ ದೇಶದ ಅಭಿವೃದ್ದಿಯಾಗುತ್ತದೆ ಎನ್ನುವ ಬಗ್ಗೆ ನನಗೆ ನಂಬಿಕೆ ಇಲ್ಲ. ಕಳೆದ 10 ದಿನಗಳ ಅವಧಿಯಲ್ಲಿ 4 ಬಾರಿ ಇಂಧನ ಬೆಲೆ ಏರಿಕೆ ಮಾಡಲಾಗಿದ್ದು, ಜನ ಸಾಮಾನ್ಯರಿಗೆ ಇಂಧನವೂ ದೊರಕದ ಪರಿಸ್ಥಿತಿ ಕಾಣುತ್ತಿದ್ದೇವೆ. ಸಾಮಾನ್ಯರ ಜೀವನ ಹಾಳಾದರೂ ಪರವಾಗಿಲ್ಲ, ನಾವು ಅಧಿಕಾರಕ್ಕೆ ಬರಬೇಕೆಂದು ರಾಜಕೀಯ ಪಕ್ಷಗಳು ಹಾತೊರೆಯುತ್ತಿವೆ ಎಂದರು.