ಸರ್ಕಾರಿ ಶಾಲೆ ಸಶಕ್ತಗೊಳಿಸಲು ಸಮುದಾಯದ ಸಹಕಾರ ಅಗತ್ಯ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Mar 4, 2025 12:32 AM

ಸಾರಾಂಶ

ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಕೈಜೋಡಿಸಿ ಎನ್ನುವ ನಮ್ಮ ಮನವಿಗೆ ತಾಲೂಕಿನಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. 4 ಶಾಲೆಗಳ ಕಟ್ಟಡಗಳನ್ನು ಓಸ್ಯಾಟ್ ಸಂಸ್ಥೆ ತಲಾ ₹75 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಇನ್ನೊಂದು ಶಾಲೆಯಲ್ಲಿ ನಾಲ್ಕು ಕೊಠಡಿಗಳನ್ನು ರೌಂಡ್ ಟೇಬಲ್ ಇಂಡಿಯಾ ಸಂಸ್ಥೆ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದೆ.

ಹಾನಗಲ್ಲ: ಬಹುತೇಕ ಸಾಧಕರು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಓದಿದವರಾಗಿರುತ್ತಾರೆ. ಅಂಥ ಶಕ್ತಿ ನಮ್ಮ ಸರ್ಕಾರಿ ಶಾಲೆಗಳಿಗಿದ್ದು, ಮೂಲ ಸೌಕರ್ಯ ಕಲ್ಪಿಸಿ ಇಂದಿನ ಯುಗಕ್ಕೆ ತಕ್ಕಂತೆ ಅವುಗಳನ್ನು ಸಶಕ್ತಗೊಳಿಸಲು ಸಮುದಾಯದ ಸಹಕಾರ ಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ತಾಲೂಕಿನ ತಿಳವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ, ಸಾಂಸ್ಕೃತಿಕ ವೇದಿಕೆ ಮತ್ತು ನವೀಕೃತ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಕೈಜೋಡಿಸಿ ಎನ್ನುವ ನಮ್ಮ ಮನವಿಗೆ ತಾಲೂಕಿನಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. 4 ಶಾಲೆಗಳ ಕಟ್ಟಡಗಳನ್ನು ಓಸ್ಯಾಟ್ ಸಂಸ್ಥೆ ತಲಾ ₹75 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಇನ್ನೊಂದು ಶಾಲೆಯಲ್ಲಿ ನಾಲ್ಕು ಕೊಠಡಿಗಳನ್ನು ರೌಂಡ್ ಟೇಬಲ್ ಇಂಡಿಯಾ ಸಂಸ್ಥೆ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದೆ.

ಡ್ರೀಮ್ ಸ್ಕೂಲ್ ಫೌಂಡೇಶನ್ ಸ್ಮಾರ್ಟ್ ಟಿವಿ, ಟ್ಯಾಬ್, ವಿಜ್ಞಾನ ಮತ್ತು ಗಣಿತ ಉಪಕರಣ ನೀಡಿದೆ. ಇದಲ್ಲದೇ ವೈಯಕ್ತಿಕವಾಗಿ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಒಂದೂವರೆ ಕೋಟಿ ರು. ವೆಚ್ಚದಲ್ಲಿ 92 ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಶೀಘ್ರ ರೋಟರಿ ಕ್ಲಬ್ ₹50 ಲಕ್ಷ ವೆಚ್ಚದಲ್ಲಿ 12 ಶಾಲೆಗಳಲ್ಲಿ ಶೌಚಾಲಯ ಬ್ಲಾಕ್ ನಿರ್ಮಿಸಲಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆಗೆ ನಾಂದಿ ಹಾಡಲಾಗಿದೆ ಎಂದರು.ನಿವೃತ್ತ ಅಭಿಯಂತರ ವಿನಾಯಕ ಪವಾರ ಮಾತನಾಡಿ, ಆಧುನಿಕ ಮತ್ತು ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಹಾನಗಲ್ಲ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಬಲ ತುಂಬಲಾಗುತ್ತಿದೆ. ಸರ್ಕಾರದ ಅನುದಾನಕ್ಕೆ ಕಾಯದೇ ಸಹೃದಯಿಗಳು ನೀಡಿದ ದಾನದ ಹಣದಲ್ಲಿ ಸೌಲಭ್ಯ ಕಲ್ಪಿಸುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿ. ಈ ವಿಷಯದಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಕಳಕಳಿ ಅಭಿನಂದನೀಯ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ರಾಜೂ ಅಸ್ವಾಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಪ್ರಮುಖರಾದ ಮಂಜು ಗೊರಣ್ಣನವರ, ಗಣೇಶಪ್ಪ ಕೋಡಿಹಳ್ಳಿ, ಈರೇಶ ಚಕ್ಕಡಿ, ಪರಶುರಾಮ ಕರೇಗಲ್, ಮೋಹನ ಉಡುಗಣಿ, ಷಣ್ಮುಖಪ್ಪ ಎಲಿ, ರೇಣುಕಾ ಹತ್ತಿ, ಕೃಷ್ಣಮೂರ್ತಿ ಬಂಕಾಪೂರ, ಸುಶೀಲಾ ತಳವಾರ, ಎಂ.ಬಿ. ಕಡ್ಲಿಕೊಪ್ಪ, ಎಸ್.ವಿ. ಮಡ್ಲೂರ, ಅಶೋಕ ಗೊಲ್ಲರ, ಜಿ.ಎನ್. ಬಳಿಗಾರ, ವಿ.ವೈ. ಹೋಹರಿ, ಹನುಮಂತಪ್ಪ ಈಳಿಗೇರ, ಪಿ.ಆರ್. ಇಂಗಳಗೊಂದಿ, ಅಕ್ಕಮಹಾದೇವಿ ಹಾದಿಮನಿ, ಪಿ.ಎಸ್. ಲಂಗಟಿ, ವಿನಾಯಕ ಖಾಂಡಕೆ, ನಾಗರತ್ನಾ ಚನ್ನಾಪೂರ, ಲಕ್ಷ್ಮಿಬಾಯಿ ಪಾಟೀಲ ಇದ್ದರು.

Share this article