ನಗರಸಭೆ ಹಿಂದಿನ ಆಯುಕ್ತರು ಸೇರಿ 14 ಮಂದಿ ವಿರುದ್ಧ ದೂರು

KannadaprabhaNewsNetwork | Published : May 23, 2025 11:47 PM
ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ನೀರು ಪೂರೈಕೆಯಲ್ಲಿ ಭ್ರಷ್ಟಾಚಾರ ಎಸಗಿದ್ದ ಕೊಳ್ಳೇಗಾಲ ನಗರಸಭೆಯ ಹಿಂದಿನ ಆಯುಕ್ತರು ಸೇರಿದಂತೆ 14ಮಂದಿ ನೌಕರರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow Us

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ನೀರು ಪೂರೈಕೆಯಲ್ಲಿ ಭ್ರಷ್ಟಾಚಾರ ಎಸಗಿದ್ದ ಕೊಳ್ಳೇಗಾಲ ನಗರಸಭೆಯ ಹಿಂದಿನ ಆಯುಕ್ತರು ಸೇರಿದಂತೆ 14ಮಂದಿ ನೌಕರರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹಿಂದಿನ ನಗರಸಭೆ ಆಯುಕ್ತರಾದ ಡಿ.ಕೆ.ಲಿಂಗರಾಜು, ವಿಜಯ್, ನಾಗಶೆಟ್ಟಿ, ಪ್ರಭಾರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದ ಸುರೇಶ್, ಅಲ್ತಾಫ್ ಹುಸೇನ್, ವ್ಯವಸ್ಥಾಪಕ ಲಿಂಗರಾಜು, ಸಿಬ್ಬಂದಿ ಹನುಮಂತರಾಜು, ನಟರಾಜು, ಸಿದ್ದಪ್ಪ, ಜಯಚಿತ್ರ, ಮಲ್ಲಪ್ಪ, ನಾಗರಾಜು, ಚಿಕ್ಕಸಿದ್ದಯ್ಯ, ಸಾಗರ್ ಸೇರಿದಂತೆ 14 ಮಂದಿ ವಿರುದ್ಧ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಈಗಿನ ಆಯುಕ್ತ ರಮೇಶ್ ಅವರು ಲಿಖಿತ ದೂರು ನೀಡಿದ್ದಾರೆ.

ದೂರಿನಲ್ಲಿ 14ಮಂದಿ ವಿರುದ್ದ ಕರ್ತವ್ಯಲೋಪ, ನಗರಸಭೆ ಅನುದಾನ ಸೋರಿಕೆ, ಭ್ರಷ್ಟಾಚಾರದ ಹಿನ್ನೆಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದೂರು ನೀಡಿದ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. 2014ರಿಂದ 2022ರತನಕ 8 ವರ್ಷಗಳ ಕಾಲ ಲಕ್ಷಾಂತರ ರು.ಗಳು ನಗರಸಭೆ ಆದಾಯಕ್ಕೆ ಸೋರಿಕೆಯುಂಟಾಗಲು 14ಮಂದಿ ಕಾರಣಕರ್ತರಾಗಿದ್ದು, ಕ್ರಮಕೈಗೊಳ್ಳದಂತೆ ಹಲವು ನೌಕರರು ರಾಜಕೀಯ ಲಾಬಿ ಹಾಗೂ ಹಿರಿಯ ಅಧಿಕಾರಿಗಳಿಗೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಆದರೆ, ವಿಚಾರಣಾ ವರದಿಯಲ್ಲಿ ಲೋಪ, ಅವ್ಯವಹಾರ ಸಾಬೀತಾದ ಹಿನ್ನೆಲೆ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಆಯುಕ್ತರಿಗೆ ನಿರ್ದೇಶನ ನೀಡಿದ ಹಿನ್ನೆಲೆ ಪಟ್ಟಣ ಠಾಣೆಗೆ ರಮೇಶ್ ದೂರು ನೀಡಿದರು ಎನ್ನಲಾಗಿದೆ.

ಆರೇಳು ವರುಷಗಳ ಬಳಿಕ ವಿಳಂಬ ಕ್ರಮ ನಗರಸಭೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಜರುಗಿ ಆರೇಳು ವರುಷಗಳೆ ಸಂದಿವೆ. ಈ ಸಂಬಂಧ ಲೋಕಾಯುಕ್ತದಲ್ಲೂ ದೂರು ದಾಖಲಾಗಿದೆ. ಅಲ್ಲದೆ ಜಿಲ್ಲಾಡಳಿತ ಸಹಾ ಹಿಂದಿನ ಉಪವಿಭಾಗಾಧಿಕಾರಿಗಳಾಗಿದ್ದ ಗೀತಾ ಹುಡೇದ್ ಅವರಿಂದ ತನಿಖೆ ಸಹಾ ಮಾಡಿಸಲಾಗಿತ್ತು. ಆರೋಪ ಸಾಬೀತಾದರೂ ಜಿಲ್ಲಾಡಳಿತ ದಿಟ್ಟ ಕ್ರಮಕೈಗೊಳ್ಳುವಲ್ಲಿ 2 ವರುಷಗಳಿಂದಲೂ ಕೈಚಲ್ಲಿತ್ತು. ಲೋಕಾಯುಕ್ತ ಪ್ರಕರಣ ಹಾಗೂ ಇನ್ನಿತರೆ ವಿಚಾರಗಳಿಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿರುವ ಹಿನ್ನೆಲೆ ಜಿಲ್ಲಾಧಿಕಾರಿ ಸೂಚಿಸಿದ ಮೇರೆಗೆ ಆಯುಕ್ತರು ಲಿಖಿತ ದೂರು ನೀಡಿದ್ದಾರೆ. ವಿಳಂಬವಾದರೂ ಸಹಾ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಕೇಳಿ ಬಂದಿದೆ, ಮಾತ್ರವಲ್ಲ ತಪ್ಪಿತಸ್ಥರು ಎಷ್ಟೆ ವರುಷಗಳಾದರೂ ತಮ್ಮ ತಪ್ಪಿನಿಂದ ಪಾರಾಗಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.