ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಆಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹನ್ನೆರಡನೇ ಶತಮಾನದಲ್ಲಿ ಮಡಿವಾಳ ಮಾಚಿದೇವರು ಕೇವಲ ಶರಣರಾಗಿರದೆ, ಶರಣ ಸಂಕುಲ ಮತ್ತು ವಚನ ಸಾಹಿತ್ಯದ ರಕ್ಷಾಕವಚವಾಗಿ ಕಾರ್ಯನಿರ್ವಹಿಸಿದ್ದರು ಎಂದು ಇತಿಹಾಸ ಸಂಶೋಧಕ ಹಾಗೂ ಪ್ರಾಧ್ಯಾಪಕ ಡಾ.ಎನ್.ಎಸ್.ಮಹಂತೇಶ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಮಾಚಿದೇವರು ಕೇವಲ ನಂಬಿಕೆಯ ಆಧಾರದ ಮೇಲೆ ಬದುಕಿದವರಲ್ಲ. ಅವರು ವೇದ, ಶಾಸ್ತ್ರ, ಪುರಾಣ ಮತ್ತು ಆಗಮಗಳನ್ನು ವೈಜ್ಞಾನಿಕ ದೃಷ್ಠಿಕೋನದಿಂದ ವಿಶ್ಲೇಷಿಸಿದವರು. ಇವು ಸಮಾಜಕ್ಕೆ ಎಷ್ಟು ಪೂರಕವಾಗಿವೆ ಎಂಬುದನ್ನು ತಾರ್ಕಿಕವಾಗಿ ವಿವರಿಸುವ ಮೂಲಕ ಅಂದಿನ ಸಮಾಜದಲ್ಲಿ ಹೊಸ ಅರಿವು ಮೂಡಿಸಿದ್ದರು ಎಂದರು.
ಮಡಿವಾಳ ಎಂದರೆ ಕೇವಲ ಬಟ್ಟೆ ತೊಳೆಯುವವರಲ್ಲ, ಬದಲಾಗಿ ಜನರ ಮನಸ್ಸಿನ ಅಜ್ಞಾನವೆಂಬ ಮೈಲಿಗೆಯನ್ನು ತೊಳೆಯುವ ಶಕ್ತಿ ಎಂದು ಸ್ವತಃ ಬಸವಣ್ಣನವರೇ ಮಾಚಿದೇವರನ್ನು ಕೊಂಡಾಡಿದ್ದಾರೆ. ಅವರ ಕಾಯಕ ನಿಷ್ಠೆ ಮತ್ತು ನಿರ್ಭೀತ ವ್ಯಕ್ತಿತ್ವವು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.ಶರಣ ಚಳುವಳಿಯ ಇತಿಹಾಸದಲ್ಲಿ ವೀರ ಮತ್ತು ದೇವ ಎಂಬ ಬಿರುದುಗಳಿಂದ ಅಲಂಕೃತರಾದ ಏಕೈಕ ಶರಣ ಮಡಿವಾಳ ಮಾಚಿದೇವರು. ತಮ್ಮ ಅಪ್ರತಿಮ ಕಾಯಕ ನಿಷ್ಠೆ ಮತ್ತು ವೈಚಾರಿಕ ಧೈರ್ಯ ಇಂದಿಗೂ ಆದರ್ಶಪ್ರಾಯ. ಕೇವಲ ಬಟ್ಟೆ ಒಗೆಯುವ ಕಾಯಕಕ್ಕೆ ಸೀಮಿತವಾಗದ ಮಾಚಿದೇವರು, ಸಮಾಜದ ಹೊಲಸನ್ನು ತೊಳೆಯುವ ಕ್ರಾಂತಿಕಾರಿಯಾಗಿ ಹೊರಹೊಮ್ಮಿದವರು ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಸಮಾಜದ ಅಶುದ್ಧತೆಯನ್ನು ತೊಳೆದು ಪರಿಶುದ್ಧತೆ ನೀಡುವ ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಸುಂದರವಾಗಿ ಕಾಣಲು ಮಡಿವಾಳ ಸಮುದಾಯದ ಸೇವೆ ಸ್ತುತ್ಯರ್ಹವಾದುದು. ಇಂದಿಗೂ ದೇವಸ್ಥಾನಗಳ ಉತ್ಸವಗಳಲ್ಲಿ ದೇವರ ದಾರಿಗೆ ಬಟ್ಟೆ ಹಾಸುವ ನಡೆಮುಡಿ ಸೇವೆಯನ್ನು ಸಮುದಾಯವು ಅತ್ಯಂತ ಶ್ರದ್ಧೆಯಿಂದ ಪಾಲಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.ಸಮುದಾಯವು ಈಗ ಕೇವಲ ಸಾಂಪ್ರದಾಯಿಕ ವೃತ್ತಿಗೆ ಸೀಮಿತವಾಗದೇ ಆಧುನಿಕತೆಯತ್ತ ಮುಖ ಮಾಡಿದ್ದು, ರಾಜ್ಯ ಸರ್ಕಾರದ ಮಡಿವಾಳ ಅಭಿವೃದ್ಧಿ ನಿಗಮದ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮಶೀಲರಾಗುವಂತೆ ಸಲಹೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಜಿಲ್ಲಾ ಮಡಿವಾಳರ ಸಂಘ ಅಧ್ಯಕ್ಷ ಬಿ.ರಾಮಪ್ಪ, ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಗೌರವಾಧ್ಯಕ್ಷ ಡಾ.ಬಸವರಾಜು, ಮಡಿವಾಳ ಮಾಚಿದೇವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ರುದ್ರೇಶ್, ರಾಜ್ಯ ಮಡಿವಾಳರ ಸಂಘದ ಗೌರವಾಧ್ಯಕ್ಷೆ ಬಿ.ರಂಗಮ್ಮ, ಮುಖಂಡರಾದ ಪರಶುರಾಮ್, ರಂಗಸ್ವಾಮಿ, ಪ್ರಕಾಶ್, ಮಂಜುನಾಥ್, ಮಲ್ಲಿಕಾರ್ಜುನ, ಲಕ್ಷ್ಮಣ ಸೇರಿದಂತೆ ಮತ್ತಿತರರು ಇದ್ದರು.