ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಹಿಂದಿನ ಕಾಲದಲ್ಲಿ ನಾವು ವನ್ಯಪ್ರಾಣಿಗಳನ್ನು ಪ್ರಾಣಿ ಸಂಗ್ರಹಾಲಯ, ಸರ್ಕಸ್, ಸಿನಿಮಾ ಅಥವಾ ಅರಣ್ಯಕ್ಕೆ ತೆರಳಿ ನೋಡಬೇಕಿದ್ದು ಇತ್ತೀಚಿನ ವರ್ಷಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ ಪರಿಸರವನ್ನು ವಿನಾಶಗೊಳಿಸುತ್ತಿರುವುದೇ ವನ್ಯಪ್ರಾಣಿಗಳು ನಾಡಿನಲ್ಲೇ ಕಾಣುವಂತಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪುರುಷೋತ್ತಮ್ ಹೇಳಿದ್ದಾರೆ.ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್ಬೈಲ್ ಕಾರ್ಯಕ್ಷೇತ್ರದ ವತಿಯಿಂದ ಕಾನ್ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾವರಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧುನಿಕತೆಯ ಭರಾಟೆಯಲ್ಲಿ ಪರಿಸರವನ್ನು ಉಳಿಸಿ ಬೆಳೆಸ ಬೇಕಾದ ನಾವು ಪರಿಸರದ ನಿತ್ಯ ವಿಪರೀತವಾದ ನಾಶಗೊಳಿಸುತ್ತಿರುವ ಹಿನ್ನಲೆಯಲ್ಲಿ ಹವಾಮಾನ ವೈಪರೀತ್ಯ ಸೇರಿದಂತೆ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಮುಖ ಮಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಆದುದರಿಂದ ನಾವುಗಳು ನಮ್ಮ ಸುತ್ತ ಮುತ್ತಲಿನಲ್ಲಿ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.ಇಂದಿನ ದಿನಗಳಲ್ಲಿ ವಾರ್ಷಿಕವಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಯವರು ಸೇರಿ ಲಕ್ಷಾಂತರ ಗಿಡಗಳನ್ನು ನೆಡುವ ಮೂಲಕ ಸರ್ಕಾರಕ್ಕೆ ಲೆಕ್ಕ ಪತ್ರವನ್ನು ನೀಡುತ್ತಾರೆ. ಆದರೆ ಎಷ್ಟು ಗಿಡಗಳನ್ನು ಬೆಳೆಸಿದ್ದಾರೆಂದು ಲೆಕ್ಕಪತ್ರವನ್ನು ಬಯಸದೆ ಇರುವುದರಿಂದ ಅರಣ್ಯ ಹಿನ್ನಡೆಗೆ ಕಾರಣವಾಗಿದೆ. ಸರ್ಕಾರವು ವಾರ್ಷಿಕವಾಗಿ ನೆಟ್ಟಗಿಡಗಳ ಆರೈಕೆ ಲೆಕ್ಕವನ್ನು ತೆಗೆದುಕೊಳ್ಳುವ ಮೂಲಕ ಅರಣ್ಯವನ್ನು ವಾರ್ಷಿಕವಾಗಿ ಹೆಚ್ಚಿಸಬಹುದೆಂದು ಪುರುಷೋತ್ತಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಈಗಿನಿಂದಲೇ ಪರಿಸರವನ್ನು ಉಳಿಸಿ ಬೆಳೆಸುವ ಪ್ರತಿ ಮನೆಯಲ್ಲೂ ಗಿಡಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದರು.ಕಾನ್ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ, ಮಂಜಿಕೆರೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮೂರ್ತಿ ಮಾತನಾಡಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್, ಸುಂಟಿಕೊಪ್ಪ ವಲಯ ಮೇಲ್ವಿಚಾರಕ ಸಂತೋಷ್, ಕಾನ್ಬೈಲ್ ಒಕ್ಕೂಟದ ಅಧ್ಯಕ್ಷೆ ಭವ್ಯ, ಪದಾಧಿಕಾರಿಗಳಾದ ಗೀತಾ, ಪುಷ್ಪಲತ, ಅರ್ಚನ, ಶ್ರೀಮತಿ, ಸೇವಾ ಪ್ರತಿನಿಧಿ ಯಶೋಧ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಸಹಶಿಕ್ಷಕರು ಉಪಸ್ಥಿತರಿದ್ದರು.ಕಾನ್ಬೈಲ್ ಪ್ರಾಥಮಿಕ ಶಾಲಾವರಣದಲ್ಲಿ ಆಗಮಿಸಿದ ಅತಿಥಿಗಳು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್ಬೈಲ್ ಕಾರ್ಯಕ್ಷೇತ್ರದ ವತಿಯಿಂದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು, ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.