ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಜಯಂತಿ ಹಾಗೂ 52ನೇ ವರ್ಷದ ಪಟ್ಟಾಧಿಕಾರದ ಅಂಗವಾಗಿ ಹೈಟೆಕ್ ಆಸ್ಪತ್ರೆ ಹಾಗೂ ಸುಸಜ್ಜಿತವಾದ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕಾಗಿ ಜು.1ರಂದು ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಜಯಂತಿ ಹಾಗೂ 52ನೇ ವರ್ಷದ ಪಟ್ಟಾಧಿಕಾರದ ಅಂಗವಾಗಿ ಹೈಟೆಕ್ ಆಸ್ಪತ್ರೆ ಹಾಗೂ ಸುಸಜ್ಜಿತವಾದ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕಾಗಿ ಜು.1ರಂದು ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ತಾಲೂಕಿನ ಶ್ರೀಮಠದಲ್ಲಿ ಶುಕ್ರವಾರ ಸಂಜೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಲಿಂ.ಶ್ರೀಗಳು ಇಡೀ ಮಧ್ಯ ಕರ್ನಾಟಕದ ನಡೆದಾಡುವ ದೇವರೆನ್ನಿಸಿಕೊಂಡು ಲಕ್ಷಾಂತರ ಸದ್ಬಕ್ತರಿಗೆ ಆಶೀರ್ವಾದ ಮಾಡುತ್ತಿದ್ದರು, ಅಂತಹ ನಡೆದಾಡುವ ದೇವರ ಸಂಸ್ಮರಣೆಗಾಗಿ ಹೊನ್ನಾಳಿ ಪಟ್ಟಣದಲ್ಲಿ ಹೈಟಕ್ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ವರ್ಗದ ಜನರ ಸೇವೆಗಾಗಿ ಮೀಸಲಿಡಲು ನಿರ್ಧರಿಸಲಾಗಿದೆ ಎಂದರು.
ಈ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರು,ನಮ್ಮ ರಾಜ್ಯದ ಸಚಿವರನ್ನು ಬರಮಾಡಿಕೊಳ್ಳಬೇಕಿದೆ, ಈ ಜವಾಬ್ದಾರಿಯನ್ನು ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಹಿಸಿಕೊಳ್ಳಬೇಕು ಎಂದರು.
ಆಸ್ಪತ್ರೆ,ಶಿಕ್ಷಣ ಸಂಸ್ಥೆಗಳನ್ನು ಮಾಡಬೇಕೆನ್ನುವ ನಿಮ್ಮ ನಿರ್ಧಾರ ಸರಿ ಇದೆ ಸ್ವಾಮಿಜಿ ಆದರೆ ಇದಕ್ಕೆಲ್ಲ ಹೆಚ್ಚಿನ ಸಂಪಲ್ಮೂನ ಬೇಕಾಗುತ್ತದೆ ಹಣ ಸಂಗ್ರಹ ಮುಖ್ಯ ಬುದ್ದಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದಾಗ ಎಲ್ಲದಕ್ಕೂ ಚನ್ನಪ್ಪಸ್ವಾಮಿ ಇದ್ದಾರೆ ಅವರು ನೋಡಿಕೊಳ್ಳುತ್ತಾರೆ, ನಾನು ಜೋಳಿಗೆ ಹಿಡಿದು ಗ್ರಾಮ ಗ್ರಾಮಕ್ಕೆ ಹೋಗಿ ಜೋಳಿಗೆ ಹಿಡಿಯುತ್ತೇನೆ ಜೋಳಿಗೆ ತುಂಬುತ್ತದೆ ನೀವು ಅದರ ಬಗ್ಗೆ ಯೋಚಿಸಬೇಡಿ ಮೊದಲು ಶಂಕುಸ್ಥಾಪನೆ ಕಾರ್ಯಕ್ರಮ ಮಾಡೋಣ ಎಂದರು.
ಜು.1ರಂದು ಕಟ್ಟಡ ಶಂಕುಸ್ಥಾಪನೆ ಹಾಗೂ ಅಂದೇ ವೈಧ್ಯರ ದಿನಾಚರಣೆ ಇರುವುದರಿಂದ ಲಿಂ. ಶ್ರೀಗಳಿಗೆ ಚಿಕಿತ್ಸೆ ನೀಡಿದ ಎಲ್ಲಾ ವೈದ್ಯರನ್ನು ಅಂದು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಾನು,ಮಾಜಿ ಸಚಿವರು ಹಾಗೂ ಇನ್ನೀತರರು ನೀವು ಹೇಳಿದ ಕೆಲಸ ಮಾಡುತ್ತೇವೆ ಆದರೆ ಕಾರ್ಯಕ್ರಮದ ರೂಪುರೇಷೆಗಳನ್ನು ನೀವೇ ನೋಡಿಕೊಂಡು ನಮಗೆ ಹೇಳಿ ಸ್ವಾಮೀಜಿ ಎಂದರು.
ವಿಧಾನ ಪರಿಷತ್ತು ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿದರು. ಪಂಚಮಸಾಲಿ ಸಮಾಜದ ಪ್ರಮುಖರಾದ ಪರಮೇಶ್ ಪಟ್ಟಣಶೆಟ್ಟಿ, ತಾಲೂಕು ಅಧ್ಯಕ್ಷ ವೀರಣ್ಣ, ಶ್ರೀಮಠದ ಸದ್ಭಕ್ತರಾದ ಎಚ್.ಎ.ಉಮಾಪತಿ, ಶ್ರೀಮಠದ ಆಡಳಿತಾಧಿಕಾರಿ ಚನ್ನಬಸವಯ್ಯ, ಸರಳಿನಮನೆ ಮಂಜುನಾಥ್, ರಾಜು ಫಲ್ಲವಿ, ಹವಳದ ಲಿಂಗರಾಜು, ಪ್ರಶಾಂತ, ವೀಣಾ ಸುರೇಶ್, ರೈತ ಮುಖಂಡ ಬಸವರಾಜಪ್ಪ, ಸಿದ್ದಪ್ಪ, ಗುರುಪಾದಯ್ಯ, ಕಡದಕಟ್ಟೆ ಚನ್ನಪ್ಪ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.