ಬಂದ್ ಖಂಡಿಸಿ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ ಯತ್ನ

KannadaprabhaNewsNetwork | Published : Jun 29, 2025 1:33 AM

ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆ ಭದ್ರಾ ಡ್ಯಾಂ ಬಲದಂಡೆ ನಾಲೆಯಲ್ಲಿ ಬಫರ್ ಝೋನ್‌ನಲ್ಲಿ ಅಪಾಯಕಾರಿ ಕಾಮಗಾರಿ ಕೈಗೊಂಡಿದ್ದನ್ನು ನಿಲ್ಲಿಸುವಂತೆ ನಡೆಸುತ್ತಿದ್ದ ದಾವಣಗೆರೆ ಬಂದ್‌ ಖಂಡಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶನಿವಾರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಿದ್ದಾರೆ.

- ಬಿಜೆಪಿ ಸರ್ಕಾರವೇ ಭದ್ರಾ ನೀರಿನ ಯೋಜನೆಗೆ ಅನುಮೋದನೆ ನೀಡಿ, ಈಗ ನಾಟಕ: ಕಾಂಗ್ರೆಸ್ ಕಿಡಿ- ಮುತ್ತಿಗೆ ತಡೆಯಲು ಸಾಹಸ । ಮಂಜಪ್ಪ, ಶೆಟ್ಟಿ, ಮುದೇಗೌಡ ಸೇರಿ 110ಕ್ಕೂ ಹೆಚ್ಚು ಜನ ಪೊಲೀಸ್‌ ವಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆ ಭದ್ರಾ ಡ್ಯಾಂ ಬಲದಂಡೆ ನಾಲೆಯಲ್ಲಿ ಬಫರ್ ಝೋನ್‌ನಲ್ಲಿ ಅಪಾಯಕಾರಿ ಕಾಮಗಾರಿ ಕೈಗೊಂಡಿದ್ದನ್ನು ನಿಲ್ಲಿಸುವಂತೆ ನಡೆಸುತ್ತಿದ್ದ ದಾವಣಗೆರೆ ಬಂದ್‌ ಖಂಡಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶನಿವಾರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ ಇತರರ ನೇತೃತ್ವದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಮುಂದಾದರು. ಈ ವೇಳೆ 110ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.

ಜಯದೇವ ವೃತ್ತದಿಂದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಬಿಜೆಪಿ ಸರ್ಕಾರ ನೀಡಿದ್ದ ಅನುಮತಿ ಪತ್ರದ ಪ್ರತಿಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಕೇಂದ್ರ ಬಿಜೆಪಿ ಸರ್ಕಾರ, ರಾಜ್ಯ ಬಿಜೆಪಿ ವಿರುದ್ಧ ಧಿಕ್ಕಾಗ ಕೂಗುತ್ತಾ ಬಿಜೆಪಿ ಕಚೇರಿಯತ್ತ ಓಡಿಹೋಗಿ ಮುತ್ತಿಗೆ ಹಾಕಲು ಬಂದರು. ಈ ವೇಳೆ ಪೊಲೀಸರು ಅವರನ್ನು ತಡೆಯಲು ಯತ್ನಿಸಿದರು. ಪೊಲೀಸರನ್ನೇ ತಳ್ಳಿಕೊಂಡು ಮುಂದೆ ನುಗ್ಗಿದ ಕಾಂಗ್ರೆಸ್ಸಿಗರನ್ನು ಹರಸಾಹಸಪಟ್ಟು ಅಶೋಕ ರಸ್ತೆ ಮಧ್ಯದಲ್ಲೇ ಪೊಲೀಸರು ತಡೆದರು. ಬಳಿಕ ಹಲವರನ್ನು ತಮ್ಮ ವಾಹನಗಳನ್ನು ಕರೆಸಿಕೊಂಡು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದರು.

ಪೊಲೀಸ್ ವಾಹನ ಮುಂದೆ ಹೋಗುತ್ತಿದ್ದಂತೆ ಮತ್ತಷ್ಟು ಕಾಂಗ್ರೆಸ್ಸಿಗರು ಪೊಲೀಸ್ ವಾಹನ ತಡೆದರೆ, ಮತ್ತೆ ಕೆಲವರು ವಾಹನದ ಮುಂದೆ ಬಿದ್ದು ಹೊರಳಾಡಿ ಪ್ರತಿಭಟಿಸಿದರು. ಮತ್ತಷ್ಟು ಜನ ಪೊಲೀಸ್ ವಾಹನ್ನೇರಿದ್ದರಿಂದ ಹೈಡ್ರಾಮಾವೇ ನಡೆಯಿತು. ಕಾಂಗ್ರೆಸ್ಸಿನ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಡಿಎಆರ್ ಪಡೆ, ಅರೆ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಎಲ್ಲಿಲ್ಲದ ಪ್ರಯತ್ನ ಮಾಡಬೇಕಾಯಿತು. ಕಡೆಗೂ ಕಾಂಗ್ರೆಸ್ಸಿನ ಜಿಲ್ಲಾ ಘಟಕ, ಮಹಿಳಾ ಘಟಕ ಸೇರಿದಂತೆ ಎಲ್ಲರನ್ನೂ ಬಂಧಿಸಿ, ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದು, ಸಂಜೆ ವೇಳೆಗೆ ಬಿಡುಗಡೆ ಮಾಡಿದರು.

ಪಕ್ಷದ ಮುಖಂಡರಾದ ಮುದೇಗೌಡರ ಗಿರೀಶ, ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ಜಿ.ಎಸ್.ಮಂಜುನಾಥ ಗಡಿಗುಡಾಳ, ಯುವರಾಜ, ಶ್ರೀನಿವಾಸ ನಂದಿಗಾವಿ, ಮುಜಾಹಿದ್ ಪಾಷ, ಬೂದಾಳ ಬಾಬು, ಲಿಯಾಖತ್ ಅಲಿ, ಕೇರಂ ಗಣೇಶ, ಗಾಂಧಿ ನಗರ ರಮೇಶ, ಗಾಂಧಿ ನಗರ ರಾಕೇಶ, ಕವಿತಾ ಚಂದ್ರಶೇಖರ, ಸರ್ವಮಂಗಳ, ಡೋಲಿ ಚಂದ್ರು, ಸೈಯದ್ ಜಿಕ್ರಿಯಾ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿದ್ದರು.

- - -

(ಬಾಕ್ಸ್‌-1) * ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಅಪಪ್ರಚಾರ ಪೊಲೀಸರು ವಶಕ್ಕೆ ಪಡೆಯುವುದಕ್ಕೂ ಮುನ್ನ ಜಯದೇವ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಭದ್ರಾ ಬಲದಂಡೆಯಿಂದ ನೆರೆ ಜಿಲ್ಲೆಗಳಿಗೆ ಬಹುಗ್ರಾಮ ಯೋಜನೆಯಡಿ ನೀರೊದಗಿಸುವ ಯೋಜನೆಗೆ ಬಿಜೆಪಿ ಸರ್ಕಾರ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವಧಿಯಲ್ಲೇ ಅನುಮತಿ ನೀಡಿತ್ತು. ಆಗ ಸುಮ್ಮನಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತು ತಂಡ ಜನರಿಗೆ ತಪ್ಪು ಮಾಹಿತಿ ನೀಡುತ್ತಾ, ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು.

2019ರಿಂದ 2023ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವೇ ಭದ್ರಾ ಬಲದಂಡೆ ಕಾಲುವೆಯಿಂದ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಅನುಮತಿ ನೀಡಿದೆ. ಈಗ ಸತ್ಯವನ್ನು ಮರೆಮಾಚಿ, ಜನರಿಗೆ ದಾರಿ ತಪ್ಪಿಸಲು ಕಾಂಗ್ರೆಸ್‌ ಸರ್ಕಾರದ ಮೇಲೆ ಗೂಬೆ ಕೂರಿಸಲಾಗುತ್ತಿದೆ. ದಾವಣಗೆರೆ ಬಂದ್ ಹೆಸರಿನಲ್ಲಿ ಜನರಿಗೆ ತೊಂದರೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಬಗ್ಗೆ ಬಿಜೆಪಿ ನಾಯಕರಿಗೆ ನಿಜವಾದ ಕಳಕಳಿ ಇದ್ದರೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಭದ್ರಾ ಯೋಜನೆಗೆ ಘೋಷಿಸಿದ ₹5 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿಸಲಿ. ಈವರೆಗೆ ನಯಾ ಪೈಸೆ ಸಹ ತರಲಾಗದವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪ್ರಚಾರಕ್ಕೋಸ್ಕರ ಬಂದ್‌ಗೆ ಕರೆ ಕೊಟ್ಟು, ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಬಿಜೆಪಿಯವರು ಹಸಿರು ಶಾಲು ಹಾಕಿಕೊಂಡು ಬಂದು, ದಾವಣಗೆರೆ ಬಂದ್ ಹೆಸರಿನಲ್ಲಿ ಜನರಿಗೆ, ವ್ಯಾಪಾರಸ್ಥರಿಗೆ ತೊಂದರೆ ಕೊಡುವ ನಾಟಕ ಮೊದಲು ನಿಲ್ಲಿಸಲಿ. ಅಭಿವೃದ್ಧಿ ವಿಚಾರದಲ್ಲಿ ಹೋರಾಟ ಮಾಡಲಿ ಎಂದು ತಾಕೀತು ಮಾಡಿದರು.

- - -

(ಬಾಕ್ಸ್‌-2) * ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಮಾತನಾಡಿ, ಬಿಜೆಪಿಯವರ ಒಂದು ಸುಳ್ಳನ್ನೇ ನೂರು ಬಾರಿ ಹೇಳಿ ಸುಳ್ಳನ್ನೇ ಸತ್ಯ ಮಾಡುವುದಕ್ಕೆ ನಾವು ಬಿಡಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಿಜೆಪಿ ಅನುಮತಿ ಕೊಟ್ಟ ಪ್ರತಿ ನಮ್ಮ ಬಳಿ ಇದ್ದು, ಇದನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಸರ್ಕಾರ ಸುಭದ್ರ ಆಡಳಿತ ನೀಡುತ್ತಿರುವುದನ್ನು ಸಹಿಸಿಕೊಳ್ಳದೆ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಜಿಲ್ಲೆಯ ರೈತರ ಪರ ಕೆಲಸ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

- - -

-28ಕೆಡಿವಿಜಿ10: ದಾವಣಗೆರೆ ಶ್ರೀ ಜಯದೇವ ವೃತ್ತದಲ್ಲಿ ಬಿಜೆಪಿ ಕರೆ ನೀಡಿದ್ದ ಬಂದ್ ಖಂಡಿಸಿ, ವಿಪಕ್ಷದ ವಿರುದ್ಧ ಕಾಂಗ್ರೆಸ್ ಪ್ರತಿ ಹೋರಾಟ ಹಮ್ಮಿಕೊಂಡಿರುವುದು. -28ಕೆಡಿವಿಜಿ11, 12, 13, 14.ಜೆಪಿಜಿ:

ದಾವಣಗೆರೆ ಶ್ರೀ ಜಯದೇವ ವೃತ್ತದಲ್ಲಿ ಬಿಜೆಪಿ ಕರೆ ನೀಡಿದ್ದ ಬಂದ್ ಖಂಡಿಸಿ, ವಿಪಕ್ಷದ ವಿರುದ್ಧ ಕಾಂಗ್ರೆಸ್ ಪ್ರತಿ ಹೋರಾಟದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಪೊಲೀಸರು ಬಂಧಿಸುತ್ತಿರುವುದು. -28ಕೆಡಿವಿಜಿ15, 16:

ದಾವಣಗೆರೆ ಶ್ರೀ ಜಯದೇವ ವೃತ್ತದಲ್ಲಿ ಬಿಜೆಪಿ ಕರೆ ನೀಡಿದ್ದ ಬಂದ್ ಖಂಡಿಸಿ, ವಿಪಕ್ಷದ ವಿರುದ್ಧ ಕಾಂಗ್ರೆಸ್ ಪ್ರತಿ ಹೋರಾಟದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಪೊಲೀಸರು ವಶಕ್ಕೆ ಪಡೆದು, ಪೊಲೀಸ್ ಕವಾಯಿತು ಮೈದಾನದಲ್ಲಿಟ್ಟಿರುವುದು.