ಜನರಿಗೆ ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್‌ ಮೋಸ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪ

KannadaprabhaNewsNetwork |  
Published : Jan 04, 2025, 12:32 AM ISTUpdated : Jan 04, 2025, 12:13 PM IST
ಪ್ರಹ್ಲಾದ ಜೋಶಿ | Kannada Prabha

ಸಾರಾಂಶ

ಆಸ್ತಿ ನೋಂದಣಿ ದರ, ಮದ್ಯದ ದರ ಹೆಚ್ಚಳ ಮಾಡಿರುವ ಜತೆಗೆ ಈಗ ಸರ್ಕಾರ ಬಸ್ ಟಿಕೆಟ್ ದರ ಕೂಡ ಹೆಚ್ಚಿಸಿದೆ. ಗ್ಯಾರಂಟಿ ಯೋಜನೆಗಳಿಂದ ಹಿಮಾಚಲ ಪ್ರದೇಶದಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಅಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸಲು ಹೊರಟಿದ್ದಾರೆ.

ಹುಬ್ಬಳ್ಳಿ:   ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ದುರಾಡಳಿತದ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ನಿತ್ಯದ ಜೀವನಕ್ಕೆ ಬೇಕಾಗಿರುವ ಎಲ್ಲ ಅಗತ್ಯ ವಸ್ತುಗಳ ದರಗಳನ್ನು ಹೆಚ್ಚಳ ಮಾಡುವ ಮೂಲಕ ಜನರಿಗೆ ಹೊರೆ ಹಾಕುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ದೇಶದಲ್ಲಿ ಸುಳ್ಳು ಗ್ಯಾರಂಟಿ ಕೊಟ್ಟಿತ್ತು. ಅದು ಈಗ ಎಕ್ಸ್‌ಪೋಸ್ ಆಗುತ್ತಿದೆ. ಉಚಿತ ವಿದ್ಯುತ್ ಎಂದರು ಈಗ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಹಾಲು, ಪೆಟ್ರೋಲ್, ಡೀಸೆಲ್‌ಗೆ ಸೆಸ್ ಹಾಕುವ ಮೂಲಕ ಜನರನ್ನು ಆರ್ಥಿಕವಾಗಿ ಹಿಂಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳು ಹೇಳುವ ನಿರ್ಲಜ್ಜರು:

ಆಸ್ತಿ ನೋಂದಣಿ ದರ, ಮದ್ಯದ ದರ ಹೆಚ್ಚಳ ಮಾಡಿರುವ ಜತೆಗೆ ಈಗ ಸರ್ಕಾರ ಬಸ್ ಟಿಕೆಟ್ ದರ ಕೂಡ ಹೆಚ್ಚಿಸಿದೆ. ಗ್ಯಾರಂಟಿ ಯೋಜನೆಗಳಿಂದ ಹಿಮಾಚಲ ಪ್ರದೇಶದಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಅಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸಲು ಹೊರಟಿದ್ದಾರೆ. ಅಧಿಕಾರಕ್ಕಾಗಿ ಯಾವ ಕೀಳುಮಟ್ಟಕ್ಕೂ ಇಳಿಯಲು ಕಾಂಗ್ರೆಸ್ ಹಿಂದೆ ಸರಿಯುವುದಿಲ್ಲ. ಇವರು ಬರೀ ಸುಳ್ಳು ಹೇಳುವ ನಿರ್ಲಜ್ಜರು ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸರ್ಕಾರ ದಿವಾಳಿಯತ್ತ:

ಸಾರಿಗೆ ಸಂಸ್ಥೆ ₹ 2 ಸಾವಿರ ಕೋಟಿ ಸಾಲ ಮಾಡುವ ಹಂತಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ನೌಕರರಿಗೆ ಸಂಬಳ ನೀಡಲು ಸಹ ಹಣವಿಲ್ಲ. ಇದನ್ನೆಲ್ಲ ಅವಲೋಕಿಸಿದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗುತ್ತಿದೆ. ಆದರೂ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗಿದ್ದರೆ ನಿಮಗೆ ಸಾಲವೇಕೆ ಎಂದು ಪ್ರಶ್ನಿಸಿದರು. ಇದರೊಟ್ಟಿಗೆ ಕೊಲೆ, ಸುಲಿಗೆಗಳು ಹೆಚ್ಚಾಗಿ, ಜನಪ್ರತಿನಿಧಿಗಳನ್ನು ಸುಪಾರಿ ಕೊಟ್ಟು ಸಾಯಿಸುವ ಹೇಯ ಕೃತ್ಯಕ್ಕೆ ರಾಜ್ಯ ಸರ್ಕಾರ ಇಳಿದಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಬಣ ರಾಜಕಾರಣ:

ಸಚಿವ ಪ್ರಿಯಾಂಕ ಖರ್ಗೆ ಅಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿ ಕಲಿತುಕೊಳ್ಳಲಿ ಎಂದು ತಿರುಗೇಟು ನೀಡಿರುವ ಜೋಶಿ, ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಬಿಟ್ಟು ಸಚಿವ ಸತೀಶ ಜಾರಕಿಹೊಳೆ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದಾರೆ. ಏಕೆ ಡಿಕೆಶಿ ಅವರು ಬೆಕ್ಕನ್ನು ಕೊಂದು ಪಾಪ ಮಾಡಿದ್ದಾರೆಯೇ?. ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಜೋರಾಗಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು.

ಚಿಲ್ಲರೆ ವಿವಾದದಲ್ಲಿ ಬೀಳಬೇಡಿ:

ಮೈಸೂರಿನ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಸಿದ್ದರಾಮಯ್ಯ ಇಂತಹ ಚಿಲ್ಲರೆ ವಿವಾದದಲ್ಲಿ ಬೀಳಬಾರದು. ಅವರು ಸ್ವಲ್ಪ ಎಡಪಂಥೀಯ ಮನಸ್ಥಿತಿಯವರು. ಬಹುತೇಕ ವಿವಿಗಳ, ಸರ್ಕಾರದ ಸಂಸ್ಥೆಗಳಲ್ಲಿ ಸಿದ್ದರಾಮಯ್ಯ ಅಂತಹವರ ಮನಸ್ಥಿತಿಯವರೇ ನೇಮಕವಾಗಿದ್ದಾರೆ. ಅವರೇ ಇದಕ್ಕೆ ವಿರೋಧಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಇಂತಹ ಚಿಲ್ಲರೆ ವಿವಾದದಲ್ಲಿ ಬೀಳಬಾರದು. ಈಗಾಗಲೇ ಸಿದ್ದರಾಮಯ್ಯ ಮುಡಾ, ವಾಲ್ಮೀಕಿ ಹಗರಣದಂತಹ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಹಲವು ವರ್ಷಗಳಿಂದ ಮುಖ್ಯಮಂತ್ರಿಗಳಾಗಿರುವ ಅವರು ಇಂತಹ ಸಣ್ಣ ವಿವಾದಕ್ಕೆ ಬೀಳಬಾರದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ತೊಡಗಲು ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗೆ ರಾಜೀನಾಮೆ!
ವಂಚನೆಗೆ ಬ್ಯಾಂಕ್ ಖಾತೆ ಬಳಕೆ: ಅಂತಾರಾಜ್ಯ ಸೈಬರ್ ಕ್ರೈಂ ಜಾಲ ಬಯಲು