ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ಬರ ಪರಿಹಾರ ಕಾರ್ಯ ಕೈಗೊಳ್ಳಲು ವಿಫಲವಾದ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಸರ್ಕಾರ ಪರಿಹಾರದ ಮೊತ್ತದ ಆಸೆಗೆ ರೈತರ ಆತ್ಮಹತ್ಯೆಯಾಗುತ್ತಿವೆಯೆನ್ನುವ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ರೈತ ವಿರೋಧಿಯಾಗಿದೆ. ಕಾವೇರಿ ನೀರನ್ನು ಹರಿಯಲು ಬಿಟ್ಟು, ಕಾವೇರಿ ಕೊಳ್ಳದ ಬದುಕನ್ನೇ ದುರ್ಬರಗೊಳಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ದೂರಿದರು.
ರಾಜ್ಯಾದ್ಯಂತ ಕುಡಿಯುವ ನೀರಿನ ಘಟಕಗಳು ಮುಚ್ಚುತ್ತಿವೆ. ಟ್ಯಾಂಕರ್ ನೀರಿನ ಮಾಫಿಯಾಗೆ ಜೊತೆಯಾಗಿ ನೀರಿನ ಬೆಲೆ ದುಪ್ಪಟ್ಟು ಮಾಡಿದ್ದು ಕಾಂಗ್ರೆಸ್ ಸರ್ಕಾರ. ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸದೇ, ಉದ್ಯಮಗಳು ಬಾಗಿಲು ಮುಚ್ಚಿ, ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಶೋಷಿತ, ಪೀಡಿತ, ವಂಚಿತ ತಳ ಸಮುದಾಯಗಳ ಮೇಲಿನ ನಿರಂತರ ಅನ್ಯಾಯ ಮುಂದುವರಿದಿದ್ದು, ಇದೊಂದು ದಲಿತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.ಕಾಂಗ್ರೆಸ್ನ ಸಚಿವರು, ಶಾಸಕರು ರಾಜ್ಯ, ಕ್ಷೇತ್ರ ಪ್ರವಾಸ ಮಾಡುತ್ತಿಲ್ಲ. ಒಂದೇ ಒಂದು ಕಡೆ ಚರಂಡಿ, ರಸ್ತೆ ಸೇರಿ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುತ್ತಿಲ್ಲ. ಇದೊಂದು ಅಭಿವೃದ್ಧಿ ಶೂನ್ಯ ಸರ್ಕಾರ. ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆ. ಅಬಕಾರಿ ಸುಂಕ, ಆಸ್ತಿ ನೋಂದಣಿ, ವಾಹನ ನೋಂದಣಿ ದರಹೆಚ್ಚಿಸಿದೆ. ನರೇಂದ್ರ ಮೋದಿಯವರನ್ನೇ ಸೋಲಿಸಲೆಂದೇ ಐಎನ್ಡಿ ಮೈತ್ರಿಕೂಟ ರಚಿಸಿಕೊಂಡ ಕಾಂಗ್ರೆಸ್ಗೆ ಚುನಾವಣೆ ಮುನ್ನವೇ ಮೈತ್ರಿಕೂಟ ಛಿದ್ರವಾಗಿ ಮುಖಭಂಗವಾಗಿದೆ ಎಂದು ಟೀಕಿಸಿದರು.
....................
ರೈತ ಮೋರ್ಚಾ ಹಿರಿಯ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಭದ್ರಾ ಜಲಾಶಯದ ಶೇ.70 ಅಚ್ಚುಕಟ್ಟು ಪ್ರದೇಶ ದಾವಣಗೆರೆ ಜಿಲ್ಲೆಯಲ್ಲಿದೆ. ಅಚ್ಚುಕಟ್ಟಿನ ಶೇ.30ರಷ್ಟಿರುವ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಾಗಿ ಅಚ್ಚುಕಟ್ಟು ರೈತರ ಬದುಕನ್ನೇ ಶಿವಮೊಗ್ಗ ಉಸ್ತುವಾರಿ ಸಚಿವರು ಬಲಿ ಕೊಟ್ಟಿದ್ದಾರೆ ಎಂದರು. ಜಿಲ್ಲೆಯಲ್ಲಿ ಶೇ.80ರಷ್ಟು ಗ್ರಾಮಗಳ ಕುಡಿಯುವ ನೀರಿಗೆ ಕೊಳವೆ ಬಾವಿಗಳೇ ಆಸರೆ. ಆದರೆ, ಅಂತರ್ಜಲ ಬತ್ತಿದ್ದು, ತೋಟಗಳ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕಬ್ಬು ಬೆಳೆದ ರೈತರು, ತೋಟದ ಬೆಳೆಗಳ ಉಳಿಸಿಕೊಳ್ಳಲು, ಕುಡಿಯುವ ನೀರಿಗಾಗಿ ನಾಲೆಗೆ ತುರ್ತಾಗಿ ನೀರು ಬಿಡಬೇಕಿದೆ. ಆದರೆ, ನಾಲೆಯ ಮೇಲ್ಭಾಗದಿಂದಲೇ ನೀರು ಕಡಿಮೆಯಾಗಿ, ಕೊನೆಯ ಭಾಗಕ್ಕೆ ನೀರೇ ತಲುಪುತ್ತಿಲ್ಲ. ಜೀವ ಉಳಿಸಿಕೊಳ್ಳುವುದಕ್ಕಾದರೂ ನೀರು ಕೊಡಬೇಕೆಂಬ ಕಾಳಜಿ ಸರ್ಕಾರ ಪ್ರದರ್ಶಿಸಲಿ ಎಂದು ತಾಕೀತು ಮಾಡಿದರು.