ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಮೂರು ವರ್ಷ ಆಡಳಿತಾವಧಿಯ ಸಾಧನೆಯ ಸಮಾವೇಶ ಅರ್ಥಹೀನವಾಗಿದೆ, ಕಳೆದ ಮೂರು ವರ್ಷದಿಂದ ಕಾಂಗ್ರೆಸ್ ಸಾಧನೆ ಶೂನ್ಯವಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಪ್ರತಿಯೊಬ್ಬರ ತಲೆ ಮೇಲೆ ೧,೫ ಲಕ್ಷ ರು. ಸಾಲ ಹೇರಿದೆ. ಮೂರು ವರ್ಷದಲ್ಲಿ ೭.೫ ಸಾವಿರ ಕೋಟಿ ಸಾಲ ಮಾಡಿರುವುದೇ ಕಾಂಗ್ರೆಸ್ ಸಾಧನೆ ಎಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ವ್ಯಂಗ್ಯವಾಡಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಯಾವ ಸರ್ಕಾರದಲ್ಲೂ ನಡೆಯದಷ್ಟು ಭ್ರಷ್ಟಾಚಾರ ನಡೆದಿದೆ. ಜೈಲಿಗೆ ಹೋಗಿ ಜಾಮೀನು ಮೇಲೆ ಇರುವ ಶಾಸಕರುಗಳಿಗೆ ಲೆಕ್ಕವೇ ಇಲ್ಲ. ಎಸ್.ಸಿ.ಎಸ್.ಟಿ ಹಣದ ದುರ್ಬಳಕೆ ಸಿಎಂ ಅಧಿವೇಶನದಲ್ಲಿ ಒಪ್ಪಿಕೊಂಡು ಸ್ಪಷ್ಟನೆ ನೀಡಿದ್ದಾರೆ, ಆಡಳಿತ ನಡೆಸಲು ನಿಮಗೆ ನೈತಿಕತೆಯೇ ಇಲ್ಲವಾದರೂ, ಈವರೆಗೆ ರಾಜೀನಾಮೆ ನೀಡದೆ ಮುಂದುವರಿಯುತ್ತಿರುವುದು ನಾಚಿಕೆಗೇಡು. ಕೂಡಲೇ ಎಲ್ಲ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಮುಡಾ ಹಗರಣದಲ್ಲಿ ನಿವೇಶನಗಳನ್ನು ವಾಪಸ್ ಮಾಡಬೇಕೆಂದರೆ ಹಣ ಪಾವತಿಸಬೇಕೆಂದು ಒತ್ತಾಯಿಸಿದವರು ನಂತರದಲ್ಲಿ ಭ್ರಷ್ಟಾಚಾರವು ಬೆಳಕಿಗೆ ಬಂದಾಗ ನಿವೇಶನಗಳನ್ನು ವಾಪಸ್ ಮಾಡಿ ಸಿಎಂ ಸ್ಥಾನ ಉಳಿಸಿ ಕೊಂಡಿದ್ದಾರೆಂದು ಟೀಕಿಸಿದರು.ಕಾರ್ಮಿಕ ಇಲಾಖೆಯಲ್ಲಿ ಕಿಟ್ಗಳ ಹಗರಣ, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ವೇತನ ನೀಡಲು ಸಾಧ್ಯವಾಗದೆ ರಾಜ್ಯದ ಖಜಾನೆ ದಿವಾಳಿಯಾಗಿದೆ. ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ಗ್ಯಾರಂಟಿಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಭ್ರಷ್ಟಾಚಾರ ಪ್ರಸ್ತಾವನೆಯಾದಾಗ ಸಚಿವರು ಸದನದಿಂದ ಪಲಾಯನ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಯಾವುದೇ ಇಲಾಖೆಯಲ್ಲೂ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯದ ಪಾಲು ಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಕೆ.ಸಿ.ವ್ಯಾಲಿ ೩ನೇ ಹಂತದ ಶುದ್ಧೀಕರಣವಿಲ್ಲ. ಯರ್ಗೋಳ್ ಯೋಜನೆಗೆ ಬಿಜೆಪಿ ಹಣ ಬಿಡುಗಡೆ ಮಾಡಿ ಪೂರ್ಣಗೊಳಿಸಿದ್ದರೂ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಆಡಳಿತ ವಿಫಲವಾಗಿದೆ. ಬಿಜೆಪಿ ಸರ್ಕಾರವು ೬೦ ಸಾವಿರ ಕೋಟಿ ಉಳಿಸಿತ್ತು. ಅದರೆ ರಾಜ್ಯ ಸರ್ಕಾರವು ೭.೫ ಸಾವಿರ ಕೋಟಿ ಸಾಲ ಮಾಡಿದ್ದರೂ ಅಭಿವೃದ್ಧಿ ಶೂನ್ಯವಾಗಿದೆ. ರೈತರಿಗೆ ಯಾವೂದೇ ಸೌಲಭ್ಯಗಳಿಲ್ಲ. ಆತ್ಮಹತ್ಯೆಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಸಾರ್ವಜನಿಕರ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ವಿಶ್ವಾಸ ಕಳೆದು ಕೊಂಡಿದೆ ಎಂದರು.
--೧೯ಕೆಎಲ್ಆರ್-೪ ಮಾಜಿ ಸಂಸದ ಎಸ್.ಮುನಿಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.