ಸಂಡೂರು: ಪ್ರಧಾನಿಯಾಗಿದ್ದ ಮನಮೋಹನಸಿಂಗ್ ಹಾಗೂ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಗಳು ನುಡಿದಂತೆ ನಡೆದಿವೆ ಎಂದು ಶಾಸಕ ಈ. ತುಕಾರಾಂ ತಿಳಿಸಿದರು.
ಅನ್ನ, ನೀರು ಹಾಗೂ ಹಣವನ್ನು ಮಿತವಾಗಿ ಬಳಸಬೇಕು. ಆಗಮಾತ್ರ ಜೀವನ ಸುಧಾರಿಸಲು ಸಾಧ್ಯ. ೨೦೨೩ರಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ೫ ಗ್ಯಾರಂಟಿ ಯೋಜನೆ ಸೇರಿ ಎಸ್ಇಪಿ, ಟಿಎಸ್ಪಿಗೆ ರಾಜ್ಯ ಸರ್ಕಾರ ₹೮೬ ಸಾವಿರ ಕೋಟಿ ಖರ್ಚು ಮಾಡಿದೆ ಎಂದರು.
ಅಚ್ಚೆ ದಿನ್ ಯಾರಿಗೆ ಬಂತು ಎಂದು ಪ್ರಶ್ನೆ ಮಾಡಿದ ಶಾಸಕರು, ಕೇಂದ್ರ ಸರ್ಕಾರ ಅಂಬಾನಿ, ಅದಾನಿಗಳ ₹೧೨ ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಅದರ ಬದಲಿಗೆ ರೈತರ ಸಾಲ ಮನ್ನಾ ಮಾಡಿದ್ದರೆ ಅಗುತ್ತಿರಲಿಲ್ಲವೇ? ಗ್ಯಾಸ್ ಬೆಲೆ ಕಡಿಮೆ ಮಾಡಿದ್ದರೆ ಆಗುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.ಪ್ರಧಾನಿ ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ₹೫೪ ಲಕ್ಷ ಕೋಟಿಗಳಿದ್ದ ಭಾರತೀಯರ ಸಾಲ ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ₹೨೦೬ ಲಕ್ಷ ಕೋಟಿಗಳಿಗೇರಿದೆ. ಸಂಡೂರು ತಾಲೂಕಿನಾದ್ಯಂತ ೫ ಗ್ಯಾರಂಟಿ ಯೋಜನೆಗಳಿಗೆ ₹೪೭.೧೫ ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ. ರಾಜ್ಯ ಬಜೆಟ್ನಲ್ಲಿ ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಸ್ಕಿಲ್ ಡೆವಲೆಪ್ಮೆಂಟ್ ಕೇಂದ್ರಕ್ಕಾಗಿ ₹೩೦೦ ಕೊಟಿ ಮಂಜೂರು ಮಾಡಿಸಿಕೊಂಡು ಬಂದಿರುವೆ. ಧರ್ಮಾಪುರ ಬಳಿ ೧೧ ಎಕರೆಯಲ್ಲಿ ₹೨೨೦ ಕೋಟಿ ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸದ್ಯದಲ್ಲೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ಎಡಿಸಿ ಮಹಮ್ಮದ್ ಜುಬೇರ್, ತಾಪಂ ಇಒ ಎಸ್. ಷಡಾಕ್ಷರಯ್ಯ ಮಾತನಾಡಿದರು. ಸಿಡಿಪಿಒ ಎಳೆನಾಗಪ್ಪ, ಇಸಿಒ ಬಸವರಾಜ ಅವರು ಕಾರ್ಯಕ್ರಮ ನಿರ್ವಹಿಸಿದರು.