ಕನ್ನಡಪ್ರಭ ವಾರ್ತೆ ತುಮಕೂರುಕಳೆದ ಒಂದು ಶತಮಾನದ ಅವಧಿಯಲ್ಲಿ ದೇಶದಾದ್ಯಂತ ತನ್ನ ಬೇರುಗಳನ್ನು ಆಳವಾಗಿ ನೆಟ್ಟಿರುವ, ಸಮಾಜ ಸೇವೆಯಲ್ಲಿ ಮತ್ತು ದೇಶ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಹೆಮ್ಮೆಯ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯನ್ನು ನಿಷೇಧಿಸುವ ಕುರಿತು ರಾಜ್ಯ ಕಾಂಗ್ರೆಸ್ ಪಕ್ಷ ಆಲೋಚಿಸುತ್ತಿರುವುದು ಅದಕ್ಕೆ ಬರಲಿರುವ ಕೇಡುಗಾಲದ ಸೂಚನೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡರು ಕಿಡಿ ಕಾರಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದು ಮತ್ತು ಅದಕ್ಕೆ ಮುಖ್ಯಮಂತ್ರಿ ಕಚೇರಿಯಿಂದ ಶೀಘ್ರ ಕ್ರಮದ ಭರವಸೆ ಸಿಕ್ಕಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ತಿಳಿಸಿದ್ದಾರೆ.
ಆರ್ಎಸ್ಎಸ್ ಇಂಥ ಗೊಡ್ಡು ಬೆದರಿಕೆಗಳನ್ನು ಅನೇಕ ಸಾರಿ ನೋಡಿದೆ. 1948, 1975 ಮತ್ತು 1992 ರಲ್ಲಿ (ಅಲ್ಪಕಾಲ) ನಿಷೇಧ ಎದುರಿಸಿದ್ದ ಈ ಸಂಘಟನೆ ಪ್ರತಿ ಸಾರಿಯೂ ಕಾನೂನಿನ ಸಮರದಲ್ಲಿ ಗೆಲುವು ಸಾಧಿಸಿ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ. ಆದರೂ ಖರ್ಗೆಯವರು ಯಾವ ಹುಂಬ ಧೈರ್ಯದ ಮೇಲೆ ಇಂಥ ಮಾತು ಆಡುತ್ತಾರೆ ಎನ್ನುವುದು ತಿಳಿಯದು. ಇತಿಹಾಸ ತಿಳಿದವರು ಇಂಥ ಆಲೋಚನೆಯನ್ನು ಕನಸಿನಲ್ಲಿಯೂ ಮಾಡಲು ಸಾಧ್ಯವಿಲ್ಲ. ಆದರೆ, ಅಧಿಕಾರ ಶಾಶ್ವತ ಎಂಬ ದುರಹಂಕಾರದಲ್ಲಿ ಮತ್ತು ತಮ್ಮ ತಂದೆ ಎಐಸಿಸಿ ಅಧ್ಯಕ್ಷರು ಎಂಬ ಭಂಡತನದಲ್ಲಿ ಪ್ರಿಯಾಂಕ್ ಖರ್ಗೆ ಹೀಗೆ ಮಾತನಾಡುತ್ತಿದ್ದಾರೆ. ಅವರು ತಮ್ಮ ಇಲಾಖೆಯಲ್ಲಿ ಏನು ಕೆಲಸ ಆಗಿದೆ ಎಂದು ಒಂದು ಕ್ಷಣ ನೋಡಿದ್ದಾರೆ ಇಂಥ ಅವಿವೇಕದ ಮಾತು ಅವರ ಬಾಯಿಯಿಂದ ಬರುತ್ತಿರಲಿಲ್ಲ ಎಂದು ಸುರೇಶಗೌಡರು ಚುಚ್ಚಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೇಶಪ್ರೇಮವೂ ಇಲ್ಲ. ಹಿಂದೂಗಳನ್ನು ಕಂಡರೆ ಅವರಿಗೆ ಆಗುವುದೂ ಇಲ್ಲ. ಅದಕ್ಕಾಗಿಯೇ ಆರ್.ಎಸ್.ಎಸ್ ಸಂಘಟನೆಯನ್ನು ನಿಷೇಧಿಸುವ ಕುರಿತು ಅವರು ಮತ್ತೆ ಮತ್ತೆ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಲಾಗಾಯತಿನಿಂದ ಮಾಡಿಕೊಂಡು ಬಂದಿರುವ ಮುಸ್ಲಿಂ ತುಷ್ಟೀಕರಣದ ಮುಂದುವರಿದ ಕಥೆಯಾಗಿದೆ. ಇಂಥ ನಡೆಗಳಿಂದ ಸಮಾಜ ವಿಘಟನೆಯಾಗುತ್ತದೆ, ಹಿಂದೂಗಳು ಒಗ್ಗಟ್ಟಾಗುತ್ತಾರೆ ಎಂಬ ಕನಿಷ್ಠ ಜ್ಞಾನವೂ ಪ್ರಿಯಾಂಕ್ ಅವರಿಗಾಗಲೀ ಅವರ ನೇತಾರರಾದ ಸಿದ್ದರಾಮಯ್ಯ ಅವರಿಗಾಗಲೀ ಇದ್ದಂತೆ ಇಲ್ಲ ಎಂದು ಅವರು ನುಡಿದಿದ್ದಾರೆ.ಕಾನೂನಿನ ಬೆಂಬಲವೇ ಇಲ್ಲದ ಇಂಥ ವಿಚಾರಗಳನ್ನು ಮಾಡಬಾರದು ಎಂದು ಇದನ್ನು ತಮ್ಮ ಪುತ್ರ ಪ್ರಿಯಾಂಕ್ ಅವರಿಗೆ ಮಲ್ಲಿಕಾರ್ಜನ ಖರ್ಗೆ ಅವರು ಕಿವಿಮಾತು ಹೇಳಬೇಕು. ಇಲ್ಲವಾದರೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಗಂಟು ಮೂಟೆ ಕಟ್ಟಿ ಬಂಗಾಲ ಉಪಸಾಗರಕ್ಕೆ ಹಾಕುವುದು ಗ್ಯಾರಂಟಿ ಎಂದು ಸುರೇಶಗೌಡರು ಭವಿಷ್ಯ ನುಡಿದಿದ್ದಾರೆ.