ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ಮುಸ್ಲಿಂ ಮುಖಂಡರಿಗೆ ಕಾಂಗ್ರೆಸ್‌ ನೋಟಿಸ್‌

KannadaprabhaNewsNetwork |  
Published : Jun 02, 2025, 12:40 AM ISTUpdated : Jun 02, 2025, 12:41 AM IST
ರಾಜಿನಾಮೆ ನೀಡಿದ ಅಲ್ಪಸಂಖ್ಯಾತ ಘಟಕ ಜಿಲ್ಲಾ ಅಧ್ಯಕ್ಷಗೆ ನೀಡಿದ ನೋಟಿಸ್‌ | Kannada Prabha

ಸಾರಾಂಶ

ಬಂಟ್ವಾಳ ಹತ್ಯೆ ಘಟನೆಗೆ ಸಂಬಂಧಿಸಿ ಸರ್ಕಾರ ಹಾಗೂ ಪಕ್ಷದಿಂದ ಸೂಕ್ತ ಸ್ಪಂದನ ಸಿಕ್ಕಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ಮುಸ್ಲಿಂ ಮುಖಂಡರಿಗೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ನೋಟಿಸ್‌ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಂಟ್ವಾಳ ಹತ್ಯೆ ಘಟನೆಗೆ ಸಂಬಂಧಿಸಿ ಸರ್ಕಾರ ಹಾಗೂ ಪಕ್ಷದಿಂದ ಸೂಕ್ತ ಸ್ಪಂದನ ಸಿಕ್ಕಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ಮುಸ್ಲಿಂ ಮುಖಂಡರಿಗೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ನೋಟಿಸ್‌ ನೀಡಲಾಗಿದೆ.ಪಕ್ಷದ ಹಿರಿಯ ನಾಯಕರು ಕರೆ ಮಾಡಿ ಪಕ್ಷಕ್ಕೆ ರಾಜಿನಾಮೆ ನೀಡುವಂತಹ ದುಡುಕಿನ ಕ್ರಮ ಕೈಗೊಳ್ಳದಂತೆ ತಿಳಿಸಿದರೂ ಸಭೆ ನಡೆಸಿದ್ದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಾಹುಲ್ ಹಮೀದ್‌, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಯಾರೂ ಮಾತನಾಡಬೇಡಿ ಎಂದು ಹೇಳಿಕೆ ನೀಡಿದ್ದ ಮಾಜಿ ಮೇಯ‌ರ್ ಕೆ.ಅಶ್ರಫ್ ಅವರಿಗೂ ನೋಟಿಸ್‌ ನೀಡಲಾಗಿದೆ.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್ ಕುಮಾರ್ ಅವರು ನೋಟಿಸ್‌ ನೀಡಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ರಹೀಂ ಕೊಲೆಯ ನಂತರ ಜಿಲ್ಲೆಯ ಜನತೆ ಆತಂಕಕ್ಕೆ ಈಡಾಗಿರುವುದು ಎಲ್ಲರಿಗೂ ತಿಲಿದ ವಿಚಾರ. ಈ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿಯುತ ನಾಯಕರಾದ ನಾವು ಸಾರ್ವಜನಿಕರಲ್ಲಿ, ಕಾರ್ಯಕರ್ತರಲ್ಲಿ ಮತ್ತು ಅಲ್ಪಸಂಖ್ಯಾತರಿಗೆ ಧೈರ್ಯ ತುಂಬಬೇಕಾಗಿರುವುದು ಪ್ರಥಮ ಆದ್ಯತೆಯಾಗಿರುತ್ತದೆ. ಇದೇ ವೇಳೆ ನೀವು ಅಲ್ಪಸಂಖ್ಯಾತರ ಸಭೆಯನ್ನು ಏರ್ಪಡಿಸಿದ್ದೀರಿ.ಆ ಸಂದರ್ಭ ಜಿಲ್ಲೆಯ ಎಂ.ಎಲ್.ಸಿ.ಗಳಾದ ಮಂಜುನಾಥ ಭಂಡಾರಿ ಮತ್ತು ಐವನ್ ಡಿ''''''''''''''''ಸೋಜಾರವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ಮಂತ್ರಿಗಳಾದ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಜೀರ್ ಅಹ್ಮದ್ ಮತ್ತು ಹಿರಿಯ ಮುಖಂಡರಾದ ಬಿ.ಕೆ. ಹರಿಪ್ರಸಾದ್ ಇವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿಚಾರದ ಬಗ್ಗೆ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಈ ಎಲ್ಲ ನಾಯಕರು ತಮಗೆ ದೂರವಾಣಿ ಮುಖಾಂತರ ಯಾವುದೇ ಸಭೆ ಸಮಾರಂಭಗಳು ಮತ್ತು ಪಕ್ಷಕ್ಕೆ ರಾಜಿನಾಮೆ ವಿಚಾರವಾಗಿ ಯಾವುದೇ ದುಡುಕಿನ ಕ್ರಮ ಕೈಗೊಳ್ಳಬಾರದು. ಎಲ್ಲವನ್ನೂ ಸರ್ಕಾರ ನಿಭಾಯಿಸುತ್ತಿದೆ ಎಂಬುದಾಗಿ ತಿಳಿಸಿರುತ್ತಾರೆ.ಆದಾಗ್ಯೂ ನೀವು ಸಭೆ ನಡೆಸಿ ಅಲ್ಪಸಂಖ್ಯಾತರಿಂದ ಪಕ್ಷಕ್ಕೆ ರಾಜಿನಾಮೆ ಕೊಡಿಸಿರುವುದಾಗಿ ಪತ್ರಿಕಾ ಮತ್ತು ದೃಶ್ಯ ಮಾಧ್ಯಮದಲ್ಲಿ ಬಂದಿರುತ್ತದೆ. ಇದು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಮುಜುಗರವನ್ನು ಉಂಟುಮಾಡುವಂತಹ ಪ್ರಕರಣವಾಗಿದೆ. ಆದುದರಿಂದ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು, ಪಕ್ಷದ ಶಿಸ್ತಿಗೆ ವಿರುದ್ಧವಾಗಿ ವರ್ತಿಸಿರುತ್ತೀರಿ ಮತ್ತು ಪಕ್ಷದ ನಾಯಕರ ಹೇಳಿಕೆಯನ್ನೂ ನಿರ್ಲಕ್ಷಿಸಿರುತ್ತೀರಿ. ಆದ್ದರಿಂದ ಈ ವಿಚಾರವನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಪಕ್ಷದ ಶಿಸ್ತಿಗೆ ವಿರುದ್ಧವಾಗಿರುವುದರಿಂದ ಯಾಕೆ ತಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬಾರದು. ತಾವು ಈ ಪತ್ರ ತಲುಪಿದ ಏಳು ದಿನಗಳೊಳಗಾಗಿ ವಿವರಣೆಯನ್ನು ನೀಡುವಂತೆ ಜಿಲ್ಲಾಧ್ಯಕ್ಷರಿಂದ ನಿರ್ದೇಶಿತನಾಗಿದ್ದೇನೆ ಎಂದ ಪ್ರಧಾನ ಕಾರ್ಯದರ್ಶಿ ವಿಕಾಸ್‌ ಶೆಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''