ವಸತಿ ಯೋಜನೆ ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಶಾಸಕರ ಹೇಳಿಕೆ ಸಾಕ್ಷಿ: ಎಚ್.ಡಿ.ಲೋಕೇಶ್

KannadaprabhaNewsNetwork | Published : Jun 28, 2025 12:27 AM

ನರಸಿಂಹರಾಜಪುರ, ರಾಜ್ಯದಲ್ಲಿ ವಸತಿ ಯೋಜನೆಯಡಿ ನಿವೇಶನ ಹಂಚುವಲ್ಲಿ ಭ್ರಷ್ಟಾಚಾರ ನಡೆದಿದ್ದು ಕಾಂಗ್ರೆಸ್‌ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಹೋಬಳಿ ಅಧ್ಯಕ್ಷ ಎಚ್.ಡಿ. ಲೋಕೇಶ್ ತಿಳಿಸಿದರು.

- ಗುಬ್ಬಿಗಾ ಗ್ರಾಮ ಪಂಚಾಯಿತಿ ಎದುರು ಬಿಜೆಪಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ರಾಜ್ಯದಲ್ಲಿ ವಸತಿ ಯೋಜನೆಯಡಿ ನಿವೇಶನ ಹಂಚುವಲ್ಲಿ ಭ್ರಷ್ಟಾಚಾರ ನಡೆದಿದ್ದು ಕಾಂಗ್ರೆಸ್‌ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಹೋಬಳಿ ಅಧ್ಯಕ್ಷ ಎಚ್.ಡಿ. ಲೋಕೇಶ್ ತಿಳಿಸಿದರು.

ಶುಕ್ರವಾರ ಗುಬ್ಬಿಗಾ ಗ್ರಾಮ ಪಂಚಾಯಿತಿ ಎದುರು ಬಿಜೆಪಿಯಿಂದ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಶಾಸಕ ಬಿ.ಆರ್.ಪಾಟೀಲ್‌ ಗೆ ಗೊತ್ತಿಲ್ಲದಂತೆ ಅವರ ವಿಧಾನ ಸಭಾ ಕ್ಷೇತ್ರದಲ್ಲೇ ಲಂಚ ಪಡೆದು ನಿವೇಶನ ಹಂಚಲಾಗಿದೆ. ವಸತಿಗಾಗಿ ಕಾಯುತ್ತಿರುವ ಬಡವರಿಗೆ ನಿವೇಶನ ಸಿಕ್ಕಿಲ್ಲ. ವಸತಿ ಸಚಿವರು ತಮ್ಮ ಖಾತೆ ನಿರ್ವಹಣೆ ಮಾಡಲು ವಿಫಲರಾಗಿದ್ದು ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಗುಬ್ಬಿಗಾ ಗ್ರಾಮ ಪಂಚಾಯಿತಿಯಲ್ಲೂ ಕಳೆದ 4 ವರ್ಷಗಳಿಂದ ವಸತಿ ಯೋಜನೆಯಡಿ ಮನೆ ಮಂಜೂರಾಗಿಲ್ಲ. ಗ್ರಾಮೀಣ ರಸ್ತೆಗಳು ಹಾಳಾಗಿವೆ. ರಸ್ತೆಯ ಗುಂಡಿ ಮುಚ್ಚುತ್ತಿಲ್ಲ. ಗ್ರಾಪಂ ವ್ಯಾಪ್ತಿಯ ರಸ್ತೆಯನ್ನು ಸಹ ದುರಸ್ತಿ ಮಾಡಿಸುತ್ತಿಲ್ಲ. ಗುಬ್ಬಿಗಾ ಗ್ರಾಪಂನ ಅರಳಿಕೊಪ್ಪ ಗ್ರಾಮದ ಸಿದ್ದನಕೊಡಿಗೆ, ಮಾವಿನ ಮನೆ, ಗದ್ದೇಮನೆ, ಸಾಲೂರು, ಕುರಕಹಳ್ಳಿ, ಮತ್ತೀಮರ, ಗುಬ್ಬಿಗಾ ಗ್ರಾಮದ ನಡುವಿನ ಮನೆ, ಕೆಳಸುತ್ತಾ, ಗುಬ್ಬಿಗಾ, ದಬ್ಬಗುಣಿ ಮುಂತಾದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ರಸ್ತೆಯಲ್ಲೇ ಓಡಾಡುವುದೇ ಕಷ್ಚವಾಗಿದೆ ಎಂದರು.

ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಇಂದು ಎಲ್ಲಾ ಗ್ರಾಪಂ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ. ಮುಂದೆ ತಹಸೀಲ್ದಾರ್‌ ಕಚೇರಿ, ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದರು.

ಬಿಜೆಪಿ ಮುಖಂಡ ಹಾಗೂ ಸಹಕಾರಿ ದುರೀಣ ಕೆ.ಎಂ. ಜಗದೀಶ್ ಮಾತನಾಡಿ, ಸರ್ಕಾರ ನಡೆಸುವಲ್ಲಿ ಕಾಂಗ್ರೆಸ್‌ ಸಂಪೂರ್ಣ ವಿಫಲವಾಗಿದೆ. ಪ್ರತಿಯೊಂದು ಕಾಮಗಾರಿಯಲ್ಲೂ ಶೇ. 40 ರಷ್ಟು ಕಮೀಷನ್ ಪಡೆಯುತ್ತಿದೆ. ಲೋಕೋಪ ಯೋಗಿ ರಸ್ತೆ ಗುಂಡಿ ಬಿದ್ದಿದೆ. ಮಕ್ಕಳ ಶಿಕ್ಷಣದ ಬಗ್ಗೆ ಗಮನ ನೀಡುತ್ತಿಲ್ಲ. ಮಂತ್ರಿಗಳು ಹಣ ಮಾಡುವ ದಂಧೆ ಯಲ್ಲಿ ತೊಡಗಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ, ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ.ವಸತಿ ಯೋಜನೆ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್‌ ಶಾಸಕರೇ ರಾಜೀನಾಮೆಗೆ ಮುಂದಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿ ಎಂದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರಾದ ಜಯಂತಿ ಲೋಕೇಶ್, ಸತೀಶ್, ಬಿಜೆಪಿಯ ಗುಬ್ಬಿಗಾ ಪಂಚಾಯಿತಿ ಮಟ್ಟದ ಅಧ್ಯಕ್ಷ ಡಿ.ಆರ್‌.ನಾಗರಾಜ್, ಬೂತ್ ಅಧ್ಯಕ್ಷ ವಿಕಾಸ್‌, ಕಿರಣ ಹಾಗೂ ಬಿಜೆಪಿ ಪಕ್ಷದ ಮುಖಂಡರು ಭಾಗವಹಿಸಿದ್ದರು. ನಂತರ ಗ್ರಾಪಂ ಪಿಡಿಓ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.