ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪುರಸಭೆಯಿಂದ ಪ್ರಾರಂಭವಾಗಿ ಸಂವಿಧಾನ ಜಾಗೃತಿ ಜಾಥಾದ ರಥಯಾತ್ರೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು. ಈ ವೇಳೆ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಮೈಸೂರು-ಬೆಂಗಳೂರು ಮುಖ್ಯರಸ್ತೆಯಲ್ಲಿ ಸಾಗಿದ ಜಾಗೃತಿ ರಥವು ಚನ್ನೇಗೌಡನದೊಡ್ಡಿ, ಲೀಲಾವತಿ ಬಡಾವಣೆ, ವಿ.ವಿ ನಗರ, ಕಾವೇರಿ ನಗರ, ಸಿದ್ದಾರ್ಥ ನಗರ, ಹಳೇ ಎಂ.ಸಿ ರಸ್ತೆ, ಎಸ್.ಬಿ.ಎಂ ರಸ್ತೆ, ದೊಡ್ಡಿ ಬೀದಿ ಗಳಲ್ಲಿ ಸಂಚರಿಸಿ ಕೊಲ್ಲಿಸರ್ಕಲ್ ಮೂಲಕ ಶಿವಪುರದಲ್ಲಿರುವ ಸತ್ಯಾಗ್ರಹ ಸೌಧವನ್ನು ತಲುಪಿತು. ಜಾಥಾ ಸಂಚರಿಸಿದ ವ್ಯಾಪ್ತಿಯಲ್ಲಿನ ಶಾಲಾ ಮಕ್ಕಳಿಗೆ ರಸಪ್ರಶ್ನೆ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಜಾಥಾ ಸಂಚರಿಸಿದ ಪಟ್ಟಣದ ವ್ಯಾಪ್ತಿಯಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ಸಾರ್ವಜನಿಕರಿಗೆ ಸಂವಿಧಾನದ ಮಹತ್ವ, ಪ್ರಜೆಗಳಿಗೆ ನೀಡಿರುವ ಹಕ್ಕುಗಳು ಹಾಗೂ ಜವಾಬ್ಧಾರಿಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅರಿವು ಮೂಡಿಸಲಾಯಿತು. ಜಾಥಾ ಸಾಗುವ ದಾರಿಯುದ್ದಕ್ಕೂವಿವಿಧ ಕಲಾ ತಂಡಗಳಿಂದ ಪೂಜಾ ಕುಣಿತ, ಡೊಳ್ಳು ಕುಣಿತ, ಕಂಸಾಳೆ ನೃತ್, ಕುಂಭಮೇಳಗಳು ಮತ್ತು ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ವಾದ್ಯಗಳು ಜಾಥಾಕ್ಕೆ ಮೆರುಗು ತಂದವು. ಶಾಲಾ ಪುಟಾಣಿಗಳ ರಾಷ್ಟ್ರ ನಾಯಕರ ವೇಷಭೂಷಣವು ಎಲ್ಲರ ಗಮನ ಸೆಳೆಯುತ್ತಿದ್ದು ವಿಶೇಷವಾಗಿತ್ತು. ಜಾಥಾ ಸಂಚರಿಸುವ ವೇಳೆ ಪುರಸಭೆ ಅಧ್ಯಕ್ಷರು, ಪುರಸಭೆ ಅಧಿಕಾರಿಗಳು ,ಸದಸ್ಯರು,ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು,ಶಿಕ್ಷಕರು ವಿವಿದ ಸಂಘ ಸಂಸ್ಥೆಯ ಪ್ರತಿನಿಧಿಗಳು, ಸಿಬ್ಬಂದಿಗಳು, ಭಾಗವಹಿಸಿದ್ದರು.