ಶಿರಹಟ್ಟಿ: ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸಾಮಾಜಿಕ ನ್ಯಾಯವು ಅವಶ್ಯವಾಗಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಸಂವಿಧಾನಿಕ ಕರ್ತವ್ಯಗಳನ್ನು ಮರೆಯಬಾರದು. ಯುವ ಜನಾಂಗ ಸರಿಯಾದ ತಿಳುವಳಿಕೆಯ ಮೂಲಕ ಸಾಮಾಜಿಕ ಬದ್ಧತೆಯೊಂದಿಗೆ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು ಎಂದು ದಿವಾಣಿ ನ್ಯಾಯಾಧೀಶ ಸತೀಶ್ ಎಂ. ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಶಿರಹಟ್ಟಿ ಹಾಗೂ ಎಫ್.ಎಂ. ಡಬಾಲಿ ಪಿಯು ಕಾಲೇಜಿನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಂಚಿನಲ್ಲಿರುವ ಜನರ ಹಕ್ಕುಗಳ ರಕ್ಷಣೆಯಾಗಬೇಕು. ಸಾಂವಿಧಾನಿಕ ಚೌಕಟ್ಟಿನಲ್ಲಿ ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಅರಿತುಕೊಂಡು ಎಲ್ಲರೂ ಕಾರ್ಯನಿರ್ವಹಿಸಬೇಕು. ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದರು.ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಮಾನವ ಹಕ್ಕುಗಳ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತಿವೆ. ಮಾನವ ಹಕ್ಕುಗಳ ವ್ಯಾಪ್ತಿ ಮತ್ತು ಮಹತ್ವವನ್ನು ಮನವರಿಕೆ ಮಾಡಿಕೊಡುವಲ್ಲಿ ಸಾರ್ವಜನಿಕರ ಪರವಾಗಿ ಎಲ್ಲರೂ ನಿಲ್ಲಬೇಕು. ಅಲ್ಲದೇ ಮಾನವ ಹಕ್ಕುಗಳ ಕುರಿತು ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಕೆಲಸವನ್ನು ಕೂಡ ಮಾಡಬೆಕು ಎಂದು ತಿಳಿಸಿದರು.
ವಕೀಲರು ಹಾಗೂ ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಪಿ.ಎಂ. ವಾಲಿ ಉಪನ್ಯಾಸ ನೀಡಿ ಮಾತನಾಡಿ, ಹದಿಹರೆಯದ ಯುವಕರು ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಉಪಯೋಗಕ್ಕಿಂತ ದುರುಪಯೋಗ ಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸಮಾಜದ ಸದೃಢ ಪ್ರಜೆಯಾಗಿ ಬದುಕಲು ಎಲ್ಲರಿಗೂ ಸಾಮಾಜಿಕ ನ್ಯಾಯ ಅವಶ್ಯವಾಗಿ ಬೇಕು. ಯಾವುದೇ ಜಾತಿ ಮತ ಲಿಂಗ ಭೇದಭಾವ ಇಲ್ಲದೆ ಸಾಮಾಜಿಕ ಸಮಾನತೆಯೊಂದಿಗೆ ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರ ಸಂಘದ ಅಧ್ಯಕ್ಷರಾದ ಅನಿಲ್ ಮಾನೆ ಮಾತನಾಡಿ, ಸಾಮಾಜಿಕ ಬದ್ಧತೆ ಎಲ್ಲರ ಧ್ಯೇಯವಾಗಬೇಕು ಸದ್ವಿಚಾರವನ್ನು ಅಳವಡಿಸಿಕೊಳ್ಳುವ ಮೂಲಕ ಯಾವುದೇ ತಾರತಮ್ಯತೆ ಇಲ್ಲದೆ ಸಮಾನತೆಯ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ. ಭಜಂತ್ರಿ ಮಾತನಾಡಿ, ದೇಶದ ಪ್ರಜೆಯಾಗಿ ನಾವೆಲ್ಲರೂ ಕಾನೂನನ್ನು ಗೌರವಿಸುವುದು ಹಾಗೂ ಕಾನೂನಿನ ನಿಯಮಗಳನ್ನು ತಪ್ಪದೇ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗೆಯೇ ಇಂದಿನ ಮಕ್ಕಳನ್ನು ಸದೃಢ ಸಮಾಜಕ್ಕೆ ನಿರ್ಮಾಣಗೊಳಿಸುವಲ್ಲಿ ಇಂತಹ ಸಂವಿಧಾನಿಕ ನಿಯಮಗಳನ್ನು ಕರ್ತವ್ಯಗಳನ್ನು ಜ್ಞಾಪಿಸುವ ಅವಶ್ಯಕತೆ ಇದೆ. ಇಂದಿನ ಯುವ ಜನಾಂಗ ಕಾನೂನಿನ ತಿಳಿವಳಿಕೆ ಇಲ್ಲದೆ ಅದೆಷ್ಟೋ ತಪ್ಪು ತಡೆಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದ್ದು, ಇವೆಲ್ಲವುಗಳನ್ನು ತಡೆಗಟ್ಟುವುದು ಪ್ರಜ್ಞಾವಂತ ಸಮಾಜದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಸದಸ್ಯರಾದ ಶಿವನಗೌಡ ಪಾಟೀಲ್ ವಹಿಸಿದ್ದರು. ಉಪನ್ಯಾಸಕರಾದ ಎಮ್.ಕೆ. ಲಮಾಣಿ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಪಿಯುಸಿಯ ವಿದ್ಯಾರ್ಥಿನಿಯರಾದ ಮಧು ಗಾಣಿಗೇರ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಿ.ಎಲ್. ಜಾಧವ್, ದಿನೇಶ್, ವಿನಾಯಕ ಹಾಗೂ ಉಪನ್ಯಾಸಕರಾದ ಎಫ್.ಎ. ಬಾಬುಖಾನವರ, ಎಂ.ಎಂ. ನದಾಫ್, ವಾಯ್.ಎಸ್. ಪಂಗಣ್ಣವರ್, ಬಸವರಾಜ್, ಶಿರುಂದ್, ಪ್ರವೀಣ್ ಹೊಸೂರ್ ಮುಂತಾದವರು ಉಪಸ್ಥಿತರಿದ್ದರು.