ಮುನಿರಾಬಾದ್: ಹುಲಿಗಿ ಗ್ರಾಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಭಕ್ತರ ಅನುಕೂಲಕ್ಕಾಗಿ 3 ಪ್ರತ್ಯೇಕ ಬಸ್ ನಿಲ್ದಾಣ ಗಳನ್ನು ನಿರ್ಮಿಸಲಾಗುವುದು ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ತಿಳಿಸಿದ್ದಾರೆ.
ಹುಲಿಗೆಮ್ಮ ದೇವಸ್ಥಾನಕ್ಕೆ ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಹುಬ್ಬಳಿ-ಧಾರವಾಡ ಕಡೆಯಿಂದ ಭಕ್ತರು ಬಸ್ಸಿನಲ್ಲಿ ಬರುತ್ತಾರೆ. ಇದಲ್ಲದೆ ವಿಜಯನಗರ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಕಡೆಯಿಂದ ಭಕ್ತರು ಬಸ್ಸಿನಲ್ಲಿ ಬರುತ್ತಾರೆ. ಎರಡು ಕಡೆಯಿಂದ ಬರುವ ಭಕ್ತಾದಿಗಳಿಗಾಗಿ ಹುಲಿಗಿ ಕ್ರಾಸ್ ಸಮೀಪ ತೋಟಗಾರಿಕೆ ಮಹಾವಿದ್ಯಾಲಯದ ಪಕ್ಕದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಹೊಸಪೇಟೆ ಕಡೆಯಿಂದ ಬರುವ ಭಕ್ತಾದಿಗಳಿಗಾಗಿ ಹುಲಿಗಿ ರೈಲ್ವೆ ಹಳಿ ಪಕ್ಕದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಕೊಪ್ಪಳ, ಸಿಂಧನೂರು, ಗಂಗಾವತಿ, ರಾಯಚೂರ ಕಡೆಯಿಂದ ಬರುವ ಭಕ್ತಾದಿಗಳಿಗಾಗಿ ಹಿಟ್ನಾಳ ರಸ್ತೆಯಲ್ಲಿ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಸಂಸದ ಹಿಟ್ನಾಳ್ ವಿವರಿಸಿದರು.
3 ನೂತನ ಬಸ್ ನಿಲ್ದಾಣಗಳ ನಿರ್ಮಾಣದಿಂದ ಹುಲಿಗಮ್ಮ ದೇವಸ್ಥಾನಕ್ಕೆ ರಾಜ್ಯದ ನಾನಾ ಕಡೆಗಳಿಂದ ಹಾಗೂ ಹೊರ ರಾಜ್ಯದಿಂದ ಆಗಮಿಸುವ ಭಕ್ತಾದಿಗಳಿಗೆ ಮುಂಬರುವ ದಿನಗಳಲ್ಲಿ ತುಂಬಾ ಅನುಕೂಲವಾಗಲಿದೆ ಎಂದರು.ಏಜೆನ್ಸಿಗಳ ನೇಮಕ
ಈ ಕುರಿತಂತೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ 2-3 ಸ್ವಚ್ಛತಾ ಏಜೆನ್ಸಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಶೀಘ್ರದಲ್ಲಿ ಈ ಏಜೆನ್ಸಿಗಳೊಂದಿಗೆ ಮಾತನಾಡಿ, ದೇವಸ್ಥಾನ ಹಾಗೂ ಸುತ್ತಮುತ್ತಲಿನ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಟೆಂಡರ್ ಪ್ರಕ್ರಿಯೆ ಮೂಲಕ ಒಂದು ಏಜೆನ್ಸಿ ನೇಮಕ ಮಾಡಲಾಗುವುದು ಎಂದು ಸಂಸದರು ವಿವರಿಸಿದರು.
ಮಂಗಳವಾರ ಸೆಪ್ಟೆಂಬರ್ 8ರಂದು ಹುಲಿಗಿಯಲ್ಲಿ ನಡೆಯಲಿರುವ ತುಂಗಾ ಆರತಿ ನಿಮಿತ್ತ ಗ್ರಾಮದ ಮಹಿಳೆಯರಿಗೆ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಉಡಿ ತುಂಬು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಅಮ್ಮನವರ ಮೂರ್ತಿಯನ್ನು ವಾದ್ಯ ಮೇಳದೊಂದಿಗೆ ಕಳಸ ಹೊತ್ತ ಮಹಿಳೆಯರಿಂದ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ಅಮ್ಮನವರು ಉತ್ಸವ ಮೂರ್ತಿಯನ್ನು ನದಿ ಪಾತ್ರಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಿ ತುಂಗಾ ಆರತಿ ನೆರವೇರಿಸಲಾಗುವುದು ಎಂದು ಸಂಸದ ಹಿಟ್ನಾಳ ವಿವರಿಸಿದರು.