ರಾಮನಗರ: ಜಿಲ್ಲಾ ಕೇಂದ್ರ ರಾಮನಗರವನ್ನು ಸೌಂದರ್ಯೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ನಗರಸಭೆ ನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ಕ್ಲಾಕ್ ಟವರ್(ಗೋಡೆ ಗಡಿಯಾರ) ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆ ಇರುವ ಸ್ಥಳವನ್ನು ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ , ಹುಲ್ಲು ಹಾಸು, ಹೂವಿನ ಗಿಡಗಳನ್ನು ಇಟ್ಟು ಸೌಂದರ್ಯೀಕರಣ ಮಾಡಿರುವುದು ಜನರ ಗಮನ ಸೆಳೆಯುತ್ತಿದೆ.
49.99 ಲಕ್ಷ ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಾಣ:
ವಾಟರ್ ಟ್ಯಾಂಕ್ ವೃತ್ತದಲ್ಲಿ ಕ್ಲಾಕ್ ಟವರ್ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ನಗರದಲ್ಲಿನ ಪ್ರಮುಖ ವೃತ್ತಗಳ ಸೌಂದರ್ಯೀಕರಣ ಹೆಚ್ಚಿಸಲು ನಗರಸಭೆ ಮಹತ್ವದ ನಿರ್ಧಾರ ಕೈಗೊಂಡಿತ್ತು. ಅದರಂತೆ ವಾಟರ್ ಟ್ಯಾಂಕ್ ವೃತ್ತದಲ್ಲಿ 49.99 ಲಕ್ಷ ರುಪಾಯಿ ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.ವಾಟರ್ ಟ್ಯಾಂಕ್ ವೃತ್ತದ ನಂತರ ರೈಲ್ವೆ ನಿಲ್ದಾಣ ವೃತ್ತ, ಕೆಂಪೇಗೌಡ ವೃತ್ತ ಹಾಗೂ ಪೊಲೀಸ್ ಭವನದ ಬಳಿ "ಐ ಲವ್ ರಾಮನಗರ " ವಿನ್ಯಾಸವನ್ನು ಸ್ಥಾಪಿಸಲಾಗುವುದು. ಈ ಎಲ್ಲಾ ಸೌಂದರ್ಯೀಕರಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್ , ಸದಸ್ಯರಾದ ನರಸಿಂಹ, ಸೋಮಶೇಖರ್, ಸಮದ್ , ಪವಿತ್ರ, ಮಹಾಲಕ್ಷ್ಮಿ, ಆಯುಕ್ತ ಜಯಣ್ಣ, ಎಂಜಿನಿಯರ್ ಗಳಾದ ವಿಶ್ವನಾಥ್, ಪವಿತ್ರ, ಬಿ.ಎಸ್.ನಿರ್ಮಲಾ ಮತ್ತಿತರರು ಹಾಜರಿದ್ದರು.
4.ಕ್ಲಾಕ್ ಟವರ್ ಮಾದರಿ.