₹ 5 ಕೋಟಿ ವೆಚ್ಚದಲ್ಲಿ ಸಸ್ಯೋದ್ಯಾನ ವನ ನಿರ್ಮಾಣ: ಜಿ.ಎಸ್. ಪಾಟೀಲ

KannadaprabhaNewsNetwork | Published : Mar 2, 2025 1:16 AM

ಪ್ರವಾಸಿಗರ ಆಕರ್ಷಣೀಯ, ಪ್ರಾಣಿ, ಪಕ್ಷಿ ಪ್ರಿಯರಿಗೆ ನೆಚ್ಚಿನ ತಾಣವಾಗಿಸುವಲ್ಲಿ ಜಿಗಳೂರ ಬೃಹತ್ ಕರೆ ಹತ್ತಿರ 5 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ₹ 5 ಕೋಟಿ ವೆಚ್ಚದಲ್ಲಿ ಸಸ್ಯೋದ್ಯಾನ ವನ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ರೋಣ: ಪ್ರವಾಸಿಗರ ಆಕರ್ಷಣೀಯ, ಪ್ರಾಣಿ, ಪಕ್ಷಿ ಪ್ರಿಯರಿಗೆ ನೆಚ್ಚಿನ ತಾಣವಾಗಿಸುವಲ್ಲಿ ಜಿಗಳೂರ ಬೃಹತ್ ಕರೆ ಹತ್ತಿರ 5 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ₹ 5 ಕೋಟಿ ವೆಚ್ಚದಲ್ಲಿ ಸಸ್ಯೋದ್ಯಾನ ವನ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ತಾಲೂಕಿನ ಜಿಗಳೂರ ಬೃಹತ ಕೆರೆ ಸಮೀಪ ಅರಣ್ಯ ಇಲಾಖೆ ಅನುದಾನದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಸಸ್ಯೋದ್ಯಾನ ವನ (ಟ್ರೀ ಪಾರ್ಕ್‌) ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕರೆ ಹತ್ತಿರ ಒಟ್ಟು 13 ಎಕರೆ ಪ್ರದೇಶದವಿದ್ದು, ಇದರಲ್ಲಿ 5 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸ್ಯೋದ್ಯಾನ ವನ ನಿರ್ಮಿಸಲಾಗುವುದು. ಇದರ ಜೊತೆಗೆ 7 ಎಕರೆ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ₹2 ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದ ಮೊದಲ ಹಂತದಲ್ಲಿ ಬಿಡುಗಡೆಯಾದ ₹ 50 ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಉಳಿದ ಅನುದಾನ ಹಂತ ಹಂತವಾಗಿ ಬಿಡುಗಡೆಗೊಂಡು ಉದ್ಯಾನವನ ಅಭಿವೃದ್ಧಿಗೊಳ್ಳುವುದು. ಅರಣ್ಯ ಇಲಾಖೆಯು ₹ 5 ಕೋಟಿ, ಪ್ರವಾಸೊದ್ಯಮ ಇಲಾಖೆಯ ₹ 2 ಕೋಟಿ ಸೇರಿ ಒಟ್ಟು ₹ 7 ಕೋಟಿ ವೆಚ್ಚದಲ್ಲಿ ಕೆರೆ ಹತ್ತಿರ ಸುಂದರ ಪ್ರವಾಸಿತಾಣ ನಿರ್ಮಾಣಗೊಳ್ಳಲಿದೆ. ಸಸ್ಯೋದ್ಯಾನ ವನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದು 3 ವರ್ಷದ ಅವಧಿ ಯೋಜನೆಯಾಗಿದ್ದು, ಒಟ್ಟು ₹ 5 ಕೋಟಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಬರುವ ಮಳೆಗಾಲದಲ್ಲಿ ಒಟ್ಟು 2000 ವಿವಿಧ ಬಗೆಯ ಸಸಿಗಳನ್ನು ನಡೆಸಲಾಗುವುದು ಜೊತೆಗೆ ಪ್ರಾಣಿ, ಪಕ್ಷಿಗಳ ಆಕರ್ಷಣೆಗೆ ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಬೇಕಾದ ಸೌಲಭ್ಯಗಳನ್ನು ಹಾಗೂ ಈಜುಕೋಳ, ಬೋಟಿಂಗ್, ಪಾದಚಾರಿ ಮಾರ್ಗ, ತರ ತರಹದ ಹೂ ಮರಗಳ ನೆಡುವುದು, ಮಕ್ಕಳಿಗೆ ಬೇಕಾದ ಆಟದ ಸಾಮಗ್ರಿಗಳು ನಿರ್ಮಾಣ ಸೇರಿದಂತೆ ಇದೊಂದು ಸುಂದರ ಪ್ರವಾಸಿ ತಾಣವಾಗಿಸುವಲ್ಲಿ ಸಸ್ಯೋದ್ಯಾನ ಹಾಗೂ ಉದ್ಯಾನವನ ನಿರ್ಮಿಸಲಾಗುವುದು ಎಂದರು.

ಜಿಲ್ಲಾ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವ ಮಾತನಾಡಿ, ಗಿಡ, ಮರಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ, ಪರಿಸರ ಶುದ್ಧೀಕರಣಗೊಳಿಸಿ ಆಮ್ಲಜನಕ ವೃದ್ದಿಸುವಲ್ಲಿ ಸಸ್ಯೋದ್ಯಾನ ವನ ನಿರ್ಮಿಸಲಾಗುವುದು. ಬಿಂಕದಕಟ್ಟಿ ಟ್ರಿ ಪಾರ್ಕ್‌ ಮಾದರಿಯಲ್ಲಿಯೇ ರೋಣ ಸಮೀಪ ಜಿಗಳೂರ ಬೃಹತ್ ಕರೆ ಪಕ್ಕದಲ್ಲಿಯೆ ಸಸ್ಯೋದ್ಯಾನ ನಿರ್ಮಿಸಲಾಗುವುದು. 3 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹೊಸಳ್ಳಿ ಗ್ರಾಪಂ ಅಧ್ಯಕ್ಷೆ ಬಸಮ್ಮ ಸ್ಥಾವರಮಠ, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ವ್ಹಿ.ಆರ್. ಗುಡಿಸಾಗರ, ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ರಾಜಣ್ಣ ಸುಂಕದ, ಯೂಸೂಧ ಇಟಗಿ ಮುಂತಾದವರು ಉಪಸ್ಥಿತರಿದ್ದರು. ಅರಣ್ಯಾಧಿಕಾರಿ ಎ.ಬಿ. ಕೊಲಾರ ನಿರೂಪಿಸಿ, ವಂದಿಸಿದರು.