ಕನ್ನಡಪ್ರಭವಾರ್ತೆ ಚನ್ನಪಟ್ಟಣ
ನಗರದಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ಅನುದಾನದ ಜತೆಗೆ ಪತ್ರಕರ್ತರ ಭವನ ನಿರ್ಮಾಣಕ್ಕೆ ದಾನಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸಹಾಯ ಸಹಕಾರ ಮಾಡುವ ವಿಶ್ವಾಸವಿದೆ. ಪತ್ರಕರ್ತರೆಲ್ಲರೂ ಒಟ್ಟಾಗಿ ನಿಂತು ಅವರ ಸಹಾಯ ಸಹಕಾರವನ್ನು ಪಡೆದು ನನ್ನೊಂದಿಗೆ ಸಹಕರಿಸಿದರೆ ಒಂದು ವರ್ಷದೊಳಗೆ ಪತ್ರಿಕಾ ಭವನವನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಕೆಯುಡ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ಭವನ ತಾಲೂಕಿನ ಪತ್ರಕರ್ತರ ಬಹುದಿನಗಳ ಕನಸು. ಪತ್ರಕರ್ತರೆಲ್ಲರೂ ಒಟ್ಟಾಗಿ ಅವಿರತವಾಗಿ ಹೋರಾಟ ಮಾಡಿ ಪಟ್ಟಣದ ಹೃದಯ ಭಾಗದಲ್ಲಿ ಸ್ವಂತ ನಿವೇಶನವನ್ನು ಹೊಂದಿ ಇಂದು ಶಾಸಕರಾದ ಸಿ.ಪಿ.ಯೋಗೇಶ್ವರ್ ಅವರ ಸಹಕಾರದೊಂದಿಗೆ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಪತ್ರಿಕಾ ಭವನ ನಿರ್ಮಾಣವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ ಇದೇ ಬಸವ ಜಯಂತಿ ದಿನ ಪತ್ರಿಕಾ ಭವನ ಲೋಕಾರ್ಪಣೆ ಗೊಳಿಸಲು ಶ್ರಮಿಸುವಂತೆ ಕಿವಿಮಾತು ಹೇಳಿದರು.ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ಮಾತನಾಡಿ, ಇಂದು ಬಸವಜಯಂತಿ ಮತ್ತು ಅಕ್ಷಯ ತೃತೀಯ ದಿನ. ಈ ಶುಭ ದಿನದಲ್ಲಿ ಯಾವುದೇ ಕಾರ್ಯ ಕೈಗೊಂಡರೂ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ. ಇಂದು ಪತ್ರಕರ್ತರ ಬಹುದಿನಗಳ ಕನಸು ನನಸಾಗುತ್ತಿದೆ. ಈ ಕಾರ್ಯಕ್ಕೆ ನಾನು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತೇನೆ. ಸಹಾಯ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.