ಇಂದೇ ಕಡೆ ದಿನದ ಹಿನ್ನೆಲೆ । ಮರಣ ಹೊಂದಿದ- ಊರಿನಿಂದ ಹೊರಗಿರುವವವರ ಇ- ಕೆವೈಸಿ
ಎಲ್ಪಿಜಿ ಸಿಲಿಂಡರ್ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಗ್ರಾಹಕರಿಗೆ ಗ್ಯಾಸ್ ಏಜೆನ್ಸಿಗಳು ಸೂಚನೆ ನೀಡುತ್ತಿರುವುದನ್ನು ತಪ್ಪಾಗಿ ಗ್ರಹಿಸಿದ ಗ್ರಾಹಕರು ಈ ಗಾಗಲೇ ಇ-ಕೆವೈಸಿ ಆದವರು ಹಾಗೂ ಇನ್ನು ಮಾಡಿಸದವರು ಎಲ್ಲರೂ ಒಂದೇ ದಿನ ಶುಕ್ರವಾರ ಗ್ಯಾಸ್ ಏಜೆನ್ಸಿಗೆ ಮುಗಿಬಿದ್ದಿದ್ದಾರೆ. ಎಲ್ಲ ಗ್ರಾಹಕರೂ ಒಮ್ಮೆಲೆ ಬಂದಿದ್ದರಿಂದ ಇ-ಕೆವೈಸಿ ಮಾಡಿಸಬೇಕಾದವರು ನಾ ಮುಂದು ತಾ ಮುಂದು ಎಂದು ಹೊಡೆದಾಡುವ ಸ್ಥಿತಿ ಬೀರೂರಲ್ಲಿ ನಿರ್ಮಾಣವಾಗಿತ್ತು.
ಸುಮಾರು16 ಸಾವಿರ ಸಂಪರ್ಕಗಳನ್ನು ಹೊಂದಿರುವ ಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಭಾರತ್ ಗ್ಯಾಸ್ನ . ರುದ್ರೇಶ್ ಗ್ಯಾಸ್ ಏಜೆನ್ಸಿಯಲ್ಲಿ ಬೀರೂರು, ಕಡೂರು, ಎಮ್ಮೆದೊಡ್ಡಿ, ಸಖರಾಯಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಅನಿಲ ಸಂಪರ್ಕ ನೀಡಲಾಗಿದೆ. ಕೆಲವೊಂದು ಸಂಪರ್ಕಗಳು ಮರಣ ಹೊಂದಿರುವವರ ಹೆಸರಿನಲ್ಲೇ ಚಾಲ್ತಿಯಲ್ಲಿವೆ. ದುಡಿಮೆ ಅರಸಿ ಬೇರೆ ಊರುಗಳಲ್ಲಿ ನೆಲೆಸಿರುವವರೂ ಇ-ಕೆವೈಸಿ ಮಾಡಿಸಿಲ್ಲ. ಅಂಥವರಿಗೆ ಇ-ಕೆವೈಸಿ ಮಾಡಿಸಲು ಆ.15 ಕೊನೇ ದಿನ ಗಡುವು ನೀಡಲಾಗಿದೆ.ಇದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿದ್ದರಿಂದ ಗ್ರಾಹಕರು ಈ ಸಂದೇಶವನ್ನು ತಪ್ಪಾಗಿ ಗ್ರಹಿಸಿ ಏಜೆನ್ಸಿ ಕಚೇರಿ ಮುಂದೆ ಜಮಾಯಿಸಿ ಸರತಿ ಸಾಲಿನಲ್ಲಿ ನಿಂತರು. ಇದರಿಂದ ವೃದ್ಧರು, ಮಹಿಳೆಯರು ಹಾಗೂ ದೂರದ ಗ್ರಾಮಗಳಿಂದ ಬರುವ ಗ್ರಾಹಕರು ತೊಂದರೆ ಅನುಭವಿಸುವಂತಾಯಿತು. ಕೆಲವರು ಕೆಲಸ ಬಿಟ್ಟು ಬಂದು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರು. ಕೆಲವರು ನಾಮುಂದು ತಾಮುಂದು ಎಂದು ಜಗಳವಾಡಿದರು.
-- ಬಾಕ್ಸ್ಸ್--
ರುದ್ರೇಶ್ ಗ್ಯಾಸ್ ಏಜೆನ್ಸಿ ಮಾಲೀಕ ಶಿವಪ್ರಕಾಶ್ ಮಾತನಾಡಿ, ಮರಣ ಹೊಂದಿದ ಮತ್ತು ಊರಿನಿಂದ ಹೊರಗಿರುವ ಒಂದು ಸಾವಿರ ಸಂಪರ್ಕಗಳಿಗೆ ಇ-ಕೆವೈಸಿ ಮಾಡಲಾಗುತ್ತಿದೆ. ಮರಣ ಹೊಂದಿದವರ ಹೆಸರು ತೆಗೆದು ಕುಟುಂಬಸ್ಥರ ಹೆಸರಿಗೆ ಇ-ಕೆವೈಸಿ ಮಾಡಲು ಬಹಳಷ್ಟು ಬಾರಿ ತಿಳಿಸಲಾಗಿತ್ತು. ಆದರೆ ಯಾರೂ ಬಂದಿರಲಿಲ್ಲ ಕಡೇ ದಿನ ಎಂದು ಹೇಳಿದ ಕೂಡಲೇ ಕಚೇರಿಗೆ ಬಂದು ಮುಗಿ ಬೀಳುತ್ತಿದ್ದಾರೆ. ಆದರೆ ಗೊಂದಲದಿಂದ ಸಂಪರ್ಕ ಹೊಂದಿರುವ ಮತ್ತು ಈಗಾಗಲೇ ಇ-ಕೆವೈಸಿ ಆಗಿರುವವರು ಸಹ ಕಚೇರಿ ಮುಂದೆ ಜಮಾಯಿಸುತ್ತಿದ್ದಾರೆ. ಎಷ್ಟು ಹೇಳಿದರೂ ಕೇಳದ ಸ್ಥಿತಿಯಲ್ಲಿದ್ದಾರೆ ಎಂದರು.
ಬೀರೂರಿನ ರೈಲ್ವೆ ಸ್ಟೇಷನ್ ರಸ್ತೆಯ ಗ್ಯಾಸ್ ಏಜೆನ್ಸಿ ಮುಂದೆ ಶುಕ್ರವಾರ ಇ-ಕೆವೈಸಿ ಮಾಡಿಸಲು ಗ್ರಾಹಕರು ಸರತಿಯಲ್ಲಿ ನಿಂತು ಮುಗಿ ಬೀಳುತ್ತಿರುವುದು.