ತಂಬಾಕು ಉತ್ಪನ್ನಗಳ ಸೇವನೆ ಕ್ಯಾನ್ಸರ್ ಗೆ ಕಾರಣ: ನ್ಯಾ. ಮಹಮ್ಮದ್ ರೋಷನ್ ಷಾ

KannadaprabhaNewsNetwork |  
Published : Jan 24, 2025, 12:48 AM IST
ಸುದ್ದಿಚಿತ್ರ ೧ ಶಿಡ್ಲಘಟ್ಟಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಗುಲಾಬಿ ಆಂದೋಲನ ಕಾರ್ಯಕ್ರಮವನ್ನು  ಹಿರಿಯಸಿವಿಲ್ ನ್ಯಾಯಾಧೀಶರಾದ  ಮಹಮ್ಮದ್ರೋಷನ್ ಷಾ  ಉದ್ಘಾಟಿಸಿದರು | Kannada Prabha

ಸಾರಾಂಶ

ಕೆಡುಕು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ, ಇದು ಕೇವಲ ಜೀವನವನ್ನಷ್ಟೇ ಅಲ್ಲ, ಆರ್ಥಿಕ ನಷ್ಟವನ್ನೂ ತರುತ್ತದೆ ಎಂದು ಹೇಳಿದರೂ ಧಮ್ ಹೊಡೆಯುವವರ ಪ್ರಮಾಣವೇನೂ ಕಡಿಮೆಯಾಗಿಲ್ಲ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ತಂಬಾಕು ಉತ್ಪನ್ನಗಳ ಸೇವನೆಯು ಮಾರಣಾಂತಿಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದ್ದು, ಹೆಚ್ಚಾಗಿ ವಿದ್ಯಾವಂತ ಯುವ ಜನತೆಯೇ ಇದಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ್ ರೋಷನ್ ಷಾ ಬೇಸರ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ನಗರಸಭೆ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಗುಲಾಬಿ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯ ಅಂದ ಮೇಲೆ ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕು ಎಂದು ತಪ್ಪು ದಾರಿಯನ್ನು ತೋರಿಸಿಕೊಡುತ್ತಾರೆ. ನೀವು ವಿದ್ಯಾವಂತರು ಅವರಿಗೆ ತಪ್ಪು ಯಾವುದು, ಸರಿ ಯಾವುದು ಎಂದು ಹೇಳಿಕೊಡಬೇಕು. ಅದು ಬಿಟ್ಟು ನೀವೇ ತಪ್ಪು ದಾರಿ ಹಿಡಿದರೆ ಈ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು ಯಾರು? ತಂಬಾಕು ಸೇವನೆ ಕ್ಯಾನ್ಸರ್ ಗೆ ಕಾರಣವಾಗುತ್ತಿರುವುದು ಗೊತ್ತಿದ್ದರೂ ಕೂಡಾ ಯುವ ಜನತೆ ಇದರ ಹಿಂದೆ ಬಿದ್ದು ತಮ್ಮ ಆರೋಗ್ಯ ಹಾಗೂ ಹಣವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಮಾರಕವಾದ ವಸ್ತು ಎಂದು ಕಳವಳ ವ್ಯಕ್ತಪಡಿಸಿದರು.

ತಹಸೀಲ್ದಾರ್ ಬಿ.ಎನ್ ಸ್ವಾಮಿ ಮಾತನಾಡಿ, ಕೆಡುಕು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ, ಇದು ಕೇವಲ ಜೀವನವನ್ನಷ್ಟೇ ಅಲ್ಲ, ಆರ್ಥಿಕ ನಷ್ಟವನ್ನೂ ತರುತ್ತದೆ ಎಂದು ಹೇಳಿದರೂ ಧಮ್ ಹೊಡೆಯುವವರ ಪ್ರಮಾಣವೇನೂ ಕಡಿಮೆಯಾಗಿಲ್ಲ. ತಂಬಾಕು ಸೇವೆನೆಯಿಂದ ಕೇವಲ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ಅಡಿಯಿಂದ ಮುಡಿವರೆಗೆ ನಮ್ಮ ದೇಹದ ಪ್ರತಿಯೊಂದು ಜೀವ ಕೋಶದ ಮೇಲೂ ಅದು ಮಾರಕ ಪರಿಣಾಮವನ್ನುಂಟು ಮಾಡುತ್ತದೆ ಎಂದರು.

ಸಿವಿಲ್ ನ್ಯಾಯಾಧೀಶರಾದ ಪೂಜಾ, ತಾಪಂ ಇಒ ಹೇಮಾವತಿ, ವಕೀಲರ ಸಂಘದ ಅಧ್ಯಕ್ಷ ಎ ನಾರಾಯಣಸ್ವಾಮಿ, ಕಾರ್ಯದರ್ಶಿ ಸಿಜಿ ಬಾಸ್ಕರ್ , ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿಎ ನರೇಂದ್ರ ಕುಮಾರ್ , ಡಾ. ಮನೋಹರ್ , ಮುಖ್ಯ ಶಿಕ್ಷಕಿ ಸಹಿದಾ ಇಸ್ರತ್, ಆರೋಗ್ಯ ಇಲಾಖಾ ಸಿಬ್ಬಂದಿ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

PREV