ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರ ಮನೆಯ ಮುಂಭಾಗದ ಬಾಸಾಪುರ ರಸ್ತೆಯಿಂದ ಶಿರವಾಸೆ, ಬೊಗಸೆ-ಕಡವಂತಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಬಾರೀ ಮಳೆಗೆ ಬಿರುಕು ಬಿಟ್ಟು ಗುಂಡಿ ಬಿದ್ದಿದ್ದು, ಸಂಪರ್ಕ ಕಡಿತಗೊಂಡಿದೆ.
ಬಾರೀ ಮಳೆಯಿಂದ ಅಧಿಕ ಪ್ರಮಾಣದ ನೀರು ಕೆರೆಯಿಂದ ಹೊರ ಹರಿದ ಪರಿಣಾಮ ರಸ್ತೆ ಗುಂಡಿ ಬಿದ್ದು ಸಂಪರ್ಕ ಕಡಿತಗೊಂಡಿದ್ದು, ಈ ಭಾಗದ ಜನರು ಬಾಳೆಹೊನ್ನೂರು, ಚಿಕ್ಕಮಗಳೂರು, ಖಾಂಡ್ಯ, ಸಂಗಮೇಶ್ವರಪೇಟೆ, ಕಡಬಗೆರೆ ಮುಂತಾದ ಕಡೆಗಳಿಗೆ ತೆರಳಲು ಪರದಾಡುವಂತಾಗಿದೆ. ಮಂಗಳವಾರ ಪರ್ಯಾಯ ಮಾರ್ಗ ಬಳಸಿ ಸಂಚರಿಸಿದರು.ಕಳಸ, ಕುದುರೆಮುಖ, ಬಾಳೆಹೊಳೆ, ಮಾಗುಂಡಿ ಸೇರಿದಂತೆ ಬಾಳೆಹೊನ್ನೂರು ಪಟ್ಟಣದಲ್ಲಿಯೂ ಮಳೆ ಅಧಿಕವಾಗಿ ಸುರಿದ ಪರಿಣಾಮ ಭದ್ರಾನದಿಯಲ್ಲಿ ನೀರು ಎರಡನೇ ದಿನವೂ ಅಪಾಯದಮಟ್ಟದಲ್ಲಿಯೇ ಹರಿಯುತ್ತಿದ್ದು, ಭದ್ರಾನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ನೂತನ ಸೇತುವೆ ಕಾಮಗಾರಿಗೆ ತಂದಿದ್ದ ಜನರೇಟರ್ ನದಿಯ ನೀರಿನಲ್ಲಿ ಮುಳುಗಡೆಗೊಂಡು ಹಾನಿಯಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಹಿಟಾಚಿ ಮೂಲಕ ನೀರಿನಲ್ಲಿ ಮುಳುಗಿದ್ದ ಜನರೇಟರ್ನ್ನು ಮೇಲಕ್ಕೆ ಎತ್ತಲಾಯಿತು.
ಬೈರೇಗುಡ್ಡದ ಹಿಂದೂ ರುದ್ರಭೂಮಿಯಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ಕೆಲವು ಕಡೆ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಸಂಪರ್ಕ ಕಡಿತಗೊಂಡಿದೆ.