ಅರಕಲಗೂಡು: ಮಹಾಮಾರಿ ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದಲೂ ಸಹಕಾರ ಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ತಿಳಿಸಿದರು.
ಗ್ರಾಮಗಳು, ಶಾಲಾ- ಕಾಲೇಜುಗಳಲ್ಲಿ ಸ್ಥಳೀಯ ಗ್ರಾಪಂ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಡೆಂಘೀ, ಮಲೇರಿಯಾ ಹಾಗೂ ಝೀಕಾವೈರಸ್ ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ. ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡಲ್ಲಿ ಮಾತ್ರ ಡೆಂಘೀ ಹಾಗೂ ಇತರೆ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ವಿಷ್ಣುಪ್ರಕಾಶ್, ಚಂದ್ರೇಗೌಡ, ಪರಮೇಶ್ ಮಾತನಾಡಿ, ಸಾರ್ವಜನಿಕರು ಮನೆಗಳ ಸುತ್ತ ವ್ಯರ್ಥವಾಗಿ ಬಿದ್ದಿರುವ ವೇಸ್ಟ್ ಬಾಟಲ್, ಟೈರ್, ಚಿಪ್ಪು, ಕಾಯಿಮೊಟ್ಟೆ ಹಾಗೂ ಮಡಿಕೆ ಚೂರುಗಳಿದ್ದರೆ ತೆರವುಗೊಳಿಸಬೇಕು. ಮನೆ ಬಳಕೆಗೆಂದು ನೀರು ಸಂಗ್ರಹಿಸುವ ತೆರೆದ ನೀರಿನ ತೊಟ್ಟಿಗಳ ಮುಚ್ಚಳ ಮುಚ್ಚಬೇಕು. ಅಲ್ಲದೆ ವಾರದಲ್ಲಿ ಎರಡು ಬಾರಿ ತೊಳೆದು ಸ್ವಚ್ಛಗೊಳಿಸುವುದರ ಜತೆಗೆ ನೀರು ಬದಲಿಸಬೇಕು. ಆರೋಗ್ಯ ಇಲಾಖೆಯ ಮಾಹಿತಿಗಳನ್ನು ಸಾರ್ವಜನಿಕರು ಸರಿಯಾಗಿ ಪಾಲಿಸಿ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಸಲಹೆ ನೀಡಿದರು.ಶಾಲೆಯ ಮುಖ್ಯ ಶಿಕ್ಷಕ ಮಂಜೇಗೌಡ, ದೈಹಿಕ ಶಿಕ್ಷಕ ಸಂಜೀವ್ಕುಮಾರ್, ಸಹ ಶಿಕ್ಷಕರಾದ ರವಿಕುಮಾರ್, ರಾಘವೇಂದ್ರ ಗಾಜಿ, ಗಿರೀಶ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಕರು ಹಾಜರಿದ್ದರು.