ಹುಬ್ಬಳ್ಳಿ: ಕಾಂಗ್ರೆಸ್ನ ಇಬ್ಬರು ಶಾಸಕರ ಕ್ಷೇತ್ರಗಳಲ್ಲಿ ಬರುವ ಎರಡು ಪ್ರಸ್ತಾವಗಳನ್ನು ಬಿಜೆಪಿ ಆಡಳಿತವಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತಡೆಯುವಲ್ಲಿ ಯಶಸ್ವಿಯಾಗಿದೆ. ಇದರಿಂದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಹಿನ್ನಡೆ ಅನುಭವಿಸಿದರೆ, ಬಿಜೆಪಿಗರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಯಾವ್ಯಾವ ಪ್ರಸ್ತಾವ: ಧಾರವಾಡ ಶಾಸಕ ವಿನಯ ಕುಲಕರ್ಣಿ ಅವರ ಕ್ಷೇತ್ರ ವ್ಯಾಪ್ತಿಯ 9 ವಾರ್ಡ್ಗಳಲ್ಲಿ ಒಳಚರಂಡಿ ಕಾಮಗಾರಿ ₹170 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದಕ್ಕೆ ಒಪ್ಪಿಗೆ ನೀಡಲು ಕಳೆದ ಸಾಮಾನ್ಯಸಭೆಯಲ್ಲಿ ನೀಡಲಾಗಿತ್ತು. ಅದರ ದೃಢೀಕರಣ ಶನಿವಾರದ ಸಭೆಯಲ್ಲಿ ಮಾಡಬೇಕಿತ್ತು. ಆದರೆ ಸದಸ್ಯ ಈರೇಶ ಅಂಚಟಗೇರಿ ಆಕ್ಷೇಪಿಸಿದರು. ಎಲ್ಲವನ್ನು ಸರ್ಕಾರದ ಮಟ್ಟದಲ್ಲೇ ನಿರ್ಧರಿಸಿಕೊಂಡು ಇಲ್ಲಿಗೆ ಬರಲಾಗಿದೆ. ಹಾಗಾದರೆ ನಾವೇಕೆ ಇರಬೇಕು. ಜತೆಗೆ 9 ವಾರ್ಡ್ಗಳ ಪೈಕಿ ಐದರಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಅವರ್ಯಾರಿಗೂ ಈ ವಿಷಯವೇ ಗೊತ್ತಿಲ್ಲ. ಶೇ.50ರಷ್ಟು ಸರ್ಕಾರ ಅನುದಾನ ನೀಡಿದರೆ ಶೇ.35ರಷ್ಟು ಸಾಲ ಮಾಡಬೇಕು. ಶೇ.15ರಷ್ಟು ಪಾಲಿಕೆ ಭರಿಸಬೇಕಿದೆ. ಈಗ ತೋರಿಸಿರುವ ಯೋಜನೆಯಂತೆ ಅನಧಿಕೃತ ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.ಸಾಲ ಮಾಡಿ ಅಕ್ರಮ ಬಡಾವಣೆಗಳಲ್ಲಿ ಏಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಪೂರ್ಣ ಅನುದಾನ ಸರ್ಕಾರವೇ ನೀಡುವುದಾದರೆ ನಮ್ಮ ಅಭ್ಯಂತರವಿಲ್ಲ. ಇಲ್ಲದಿದ್ದಲ್ಲಿ ಈ ಕಾಮಗಾರಿ ಕೈಬಿಡಬೇಕು ಎಂದು ಒತ್ತಾಯಿಸಿದರು. ಹೀಗಾಗಿ ಸದ್ಯಕ್ಕೆ ಈ ಯೋಜನೆಗೆ ಮೇಯರ್ ತಡೆ ನೀಡಿದರು.
ಹೆರಿಗೆ ಆಸ್ಪತ್ರೆ: ಇನ್ನು ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರ ಕ್ಷೇತ್ರದಲ್ಲಿ ಬರುವ ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಸ್ತಾಂತರಿಸುವ ಪ್ರಸ್ತಾವ ತಡೆ ಹಿಡಿಯಲಾಯಿತು. ಮೊದಲಿಗೆ ಆಸ್ಪತ್ರೆ ಪರಿಶೀಲಿಸಿ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ವಹಿಸಲು ಸಾಧ್ಯವೇ ಇಲ್ಲ ಎಂದಾದ ಮೇಲಷ್ಟೇ ಹಸ್ತಾಂತರಿಸಬೇಕು. ಅದು ಬಿಟ್ಟು ಯಾವುದೇ ಬಗೆಯ ಪರಿಶೀಲನೆ ನಡೆಸದೇ ಹಸ್ತಾಂತರಿಸಬಾರದು ಎಂದು ಚರ್ಚೆ ನಡೆಸಿ ಪರಿಶೀಲನೆ ನಡೆಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಸಭೆಯಲ್ಲಿ ಠರಾವು ಪಾಸ್ ಮಾಡಲಾಯಿತು.ವಿಷಯ ಪ್ರಸ್ತಾಪಿಸಿ, ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆಯನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸಲಾಗಿದೆ. ಈವರೆಗೆ ಏಳೆಂಟು ಕೋಟಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಲಾಗಿದೆ. ಇನ್ನು ₹15 ಕೋಟಿ ಬೇಕು. ಅಷ್ಟೊಂದು ಪಾಲಿಕೆಯಲ್ಲಿಲ್ಲ. ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ಬಿಟ್ಟು ಕೊಡುವುದು ಸೂಕ್ತ ಎಂಬ ಸಲಹೆ ಸಭೆಯಲ್ಲಿ ಬಂದಿತು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರು, ಪಾಲಿಕೆಗೆ ನಿರ್ವಹಣೆ ಮಾಡಲು ಆಗುವುದೇ ಇಲ್ಲ ಎಂದಾಗ ಹಸ್ತಾಂತರಿಸೋಣ. ಆದರೆ ಮೊದಲು ಅದನ್ನು ಪರಿಶೀಲಿಸೋಣ. ಸಭೆಗೆ ವಿಷಯ ಬಂದಿದೆ ಎಂದರೆ ಇವತ್ತೇ ಪಾಸು ಮಾಡಬೇಕು ಎಂಬುದೇನೂ ಇಲ್ಲ ಎಂದು ಸಭಾನಾಯಕ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಈರೇಶ ಅಂಚಟಗೇರಿ ಅಭಿಪ್ರಾಯಿಸಿದರು. ಕೊನೆಗೆ ಪರಿಶೀಲನೆ ನಡೆಸಿ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಮೇಯರ್ ಪೀಠದಲ್ಲಿ ಕುಳಿತ್ತಿದ್ದ ಉಪಮೇಯರ್ ದುರ್ಗಮ್ಮ ಬಿಜವಾಡ ರೂಲಿಂಗ್ ನೀಡಿದರು.ಕೈ ಸದಸ್ಯರ ಪ್ರತಿಭಟನೆ: ಈ ನಡುವೆ ಈ ಎರಡು ವಿಷಯಗಳಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಕಾಂಗ್ರೆಸ್ ಸದಸ್ಯರು ಮೇಯರ್ ಟೇಬಲ್ ಬಳಿಯೇ ತೆರಳಿ ಪ್ರತಿಭಟನೆ ನಡೆಸಿದರು ಅಲ್ಲದೇ, ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಕೊಡಲೇಬೇಕು. ಶಾಸಕರು ವಿಶೇಷ ಅನುದಾನ ತಂದು ಅಭಿವೃದ್ಧಿಪಡಿಸುತ್ತಾರೆ ಎಂದು ಪಟ್ಟು ಹಿಡಿದರು. ಅದಕ್ಕೆ ಬಿಜೆಪಿ, ಹಸ್ತಾಂತರಿಸಲು ನಮ್ಮದೇನು ವಿರೋಧವಿಲ್ಲ. ಆದರೆ ಇನ್ನೊಂದು ಸಲ ಪರಿಶೀಲಿಸಿ ಹಸ್ತಾಂತರಿಸೋಣ ಎಂದಷ್ಟೇ ಹೇಳ್ತಾ ಇರುವುದು ಎಂದು ಸ್ಪಷ್ಟಪಡಿಸಿತು. ಆದರೆ 2 ವಿಷಯಗಳ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದಂತೂ ಸತ್ಯ. ಕೊನೆಗೆ 2 ಪ್ರಸ್ತಾವ ತಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು ಅಷ್ಟೇ ಸತ್ಯ.!