ಪಾಲಿಕೆ ವಾರ್ಡ್ ರಚನೆ ಅವೈಜ್ಞಾನಿಕ: ಪಾಲಿಕೆ ಸದಸ್ಯರ ಬೇಸರ

KannadaprabhaNewsNetwork |  
Published : Feb 18, 2026, 01:45 AM IST
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಪೋರೇಟ್ ರಾದ ಇರ್ಪಾನ್, ಮಧನ್, ಅಮಿರ್ ಜಾನ್, ಇಮ್ರಾನ್, ರಫೀಕ್, ಅಕ್ಮಲ್ ಇತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಮುಂದೆ ನಡೆಯುವ ಚುನಾವಣೆಯ ಹಿನ್ನೆಲೆ ಮಹಾನಗರ ಪಾಲಿಕೆಯ ಕರಡು ಪ್ರಕಟವಾಗಿದ್ದು, ಹಾಸನ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ವಾರ್ಡ್ ವಿಂಗಡಣೆ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು ಕೂಡಲೇ ಸರಿಪಡಿಸದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಮಹಾನಗರ ಪಾಲಿಕೆ ಸದಸ್ಯರು ಆರೋಪ, ಬೇಸರ.

ಕನ್ನಡಪ್ರಭ ವಾರ್ತೆ ಹಾಸನ

ಮುಂದೆ ನಡೆಯುವ ಚುನಾವಣೆಯ ಹಿನ್ನೆಲೆ ಮಹಾನಗರ ಪಾಲಿಕೆಯ ಕರಡು ಪ್ರಕಟವಾಗಿದ್ದು, ಹಾಸನ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ವಾರ್ಡ್ ವಿಂಗಡಣೆ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು ಕೂಡಲೇ ಸರಿಪಡಿಸದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಮೀರ್ ಹಾಗೂ ಸದಸ್ಯರು ಆರೋಪಿಸಿ ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಗರ ವ್ಯಾಪ್ತಿ ಇತ್ತೀಚೆಗೆ ಹಳ್ಳಿಗಳು, ಬಡಾವಣೆಗಳು ಮತ್ತು ಹೊಸ ವಸತಿ ಪ್ರದೇಶಗಳನ್ನು ಸೇರಿಸಿಕೊಂಡು ವಿಸ್ತಾರಗೊಂಡಿದೆ. ಇದರಿಂದ ಜನಸಂಖ್ಯೆ ಹಾಗೂ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲೇ ವಾರ್ಡ್ಗಳ ಪುನರ್‌ವಿಂಗಡಣೆ ನಡೆಯುತ್ತಿರುವುದು ಮುಂದಿನ ಮಹಾನಗರ ಪಾಲಿಕೆ ಚುನಾವಣೆಗೆ ನಿರ್ದೇಶನವಾಗಲಿದೆ. ಆದ್ದರಿಂದ ಅಧಿಕಾರಿಗಳು ತುರ್ತಾಗಿ ನಿರ್ಧಾರ ಕೈಗೊಳ್ಳದೆ, ಪ್ರತಿ ವಾರ್ಡಿಗೂ ಭೇಟಿ ನೀಡಿ ಭೌಗೋಳಿಕ ಸ್ಥಿತಿ, ಜನಸಂಖ್ಯೆ, ಸಮುದಾಯಗಳ ವಾಸ್ತವ ಸ್ಥಿತಿ ಹಾಗೂ ಮೂಲಸೌಕರ್ಯಗಳ ಹಂಚಿಕೆ ಇತ್ಯಾದಿಗಳನ್ನು ಸಮಗ್ರವಾಗಿ ಪರಿಶೀಲಿಸಿ ವೈಜ್ಞಾನಿಕ ಆಧಾರದ ಮೇಲೆ ಗಡಿ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು.

ವಾರ್ಡ್ ವಿಂಗಡಣೆ ಎಂಬುದು ಕೇವಲ ಭೌಗೋಳಿಕ ಗಡಿಗಳ ಬದಲಾವಣೆ ಅಲ್ಲ, ಅದು ಪ್ರತಿನಿಧಿತ್ವದ ಪ್ರಶ್ನೆ. ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶ ಸಿಗುವಂತೆ, ಸಮತೋಲನ ಕಾಪಾಡುವ ರೀತಿಯಲ್ಲಿ ವಾರ್ಡ್ಗಳನ್ನು ರಚಿಸಬೇಕು. ಇಲ್ಲವಾದಲ್ಲಿ ಕೆಲವೊಂದು ಸಮುದಾಯಗಳು ರಾಜಕೀಯವಾಗಿ ಹಿಂದುಳಿಯುವ ಪರಿಸ್ಥಿತಿ ಉಂಟಾಗಬಹುದು ಎಂದು ಸದಸ್ಯರು ಹೇಳಿದರು.

ಈವರೆಗೆ ನಡೆದ ಚುನಾವಣೆಯಲ್ಲಿ ಮುಸ್ಲಿಂ, ಹಿಂದೂ ಹಾಗೂ ಇತರ ಜಾತಿ- ಜನಾಂಗಗಳ ಪ್ರತಿನಿಧಿಗಳು ಜನಮಂಡಲದಿಂದ ಆಯ್ಕೆಯಾಗಿದ್ದಾರೆ. ಇದು ಹಾಸನ ನಗರದ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂಕೇತವಾಗಿದೆ. ಆದರೆ ಅವೈಜ್ಞಾನಿಕ ವಾರ್ಡ್ ವಿಂಗಡಣೆ ಒಂದೇ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಿದಂತಾಗಬಾರದು. ಜನಸಂಖ್ಯಾ ಪ್ರಮಾಣ, ಮತದಾರರ ಅನುಪಾತ ಹಾಗೂ ಸಾಮಾಜಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಗಡಿ ರಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈ ವಿಷಯವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ಶೀಘ್ರದಲ್ಲೇ ಮನವಿ ಸಲ್ಲಿಸುವುದಾಗಿ ತಿಳಿಸಿದ ಅವರು, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಪಾರದರ್ಶಕತೆ ಕಾಪಾಡಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದು ಸೂಚಿಸಿದರು.

ಅಗತ್ಯವಿದ್ದರೆ ಸಾರ್ವಜನಿಕ ವಿಚಾರಣೆ ನಡೆಸಿ ನಂತರ ಅಂತಿಮ ಪ್ರಸ್ತಾವನೆ ರೂಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು. ಹಾಸನ ನಗರದ ಸಮಗ್ರ ಅಭಿವೃದ್ಧಿ ಮತ್ತು ಸೌಹಾರ್ದತೆಯ ಹಿತದೃಷ್ಟಿಯಿಂದ ಸಮಾನತೆ ಹಾಗೂ ನ್ಯಾಯ- ತತ್ವ ಕಾಪಾಡುವುದು ಅತಿ ಮುಖ್ಯ. ಸರ್ಕಾರ ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಂಡು ಎಲ್ಲ ಸಮುದಾಯಗಳ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.

ಬೇಕಾದರೆ ಹೆಚ್ಚಿನ ವಾರ್ಡ್ ಮಾಡಲಿ, ಆದರೆ ಇರುವ ವಾರ್ಡನ್ನು ಇನ್ನೊಂದಕ್ಕೆ ಸೇರಿಸುವುದು ಬೇಡ. ಇದರಿಂದ ಅಲ್ಪಸಂಖ್ಯಾತರಿಗೆ ಸಮಸ್ಯೆ ಎದುರಾಗಬಹುದು ಎಂದು ಮನವಿ ಮಾಡಿದರು.

ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಪೋರೇಟ್ ರಾದ ಇರ್ಪಾನ್, ಮಧನ್, ಅಮಿರ್ ಜಾನ್, ಇಮ್ರಾನ್, ರಫೀಕ್, ಅಕ್ಮಲ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.24ರಿಂದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ: ಎಸ್.ಕೆ. ಮರಿಯಪ್ಪ ಮಾಹಿತಿ
ಶಾಲೆಗೆ ದಿನಸಿ ವಿತರಿಸಿ ನಟ ದರ್ಶನ್‌ ಹುಟ್ಟುಹಬ್ಬ ಆಚರಣೆ