- ಕಂದಾಯ ಇಲಾಖೆ ದಿನಾಚರಣೆಯಲ್ಲಿ ಉಪ ವಿಭಾಗಾಧಿಕಾರಿ ವಿ.ಅಭಿಷೇಕ್ ಅಭಿಮತ
ಕನ್ನಡಪ್ರಭ ವಾರ್ತೆ ಹೊನ್ನಾಳಿಸ್ವಾತಂತ್ರ್ಯಪೂರ್ವ ಹಾಗೂ ನಂತರದಲ್ಲಿ ಕಂದಾಯ ಇಲಾಖೆ ವಸೂಲಿ ಮಾಡುತ್ತಿದ್ದ ತೆರಿಗೆಯಿಂದ ದೇಶದ ಅಭಿವೃದ್ಧಿಯಾಗುತ್ತಿತ್ತು. ಅದು ಈಗಲೂ ಮುಂದುವರೆದಿದೆ ಎಂದು ಹೊನ್ನಾಳಿ ಉಪ ವಿಭಾಗಾಧಿಕಾರಿ ವಿ.ಅಭಿಷೇಕ್ ಹೇಳಿದರು.
ಸೋಮವಾರ ಕಂದಾಯ ಇಲಾಖೆ ದಿನಾಚರಣೆ ಅಂಗವಾಗಿ ತಾಲೂಕು ಕಚೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶ್ರೀಮಂತರಿಂದ ಹಿಡಿದು ಕಡು ಬಡವನವರೆಗೆ ಒಂದಲ್ಲ ಒಂದು ಕೆಲಸಕ್ಕೆ ನಮ್ಮ ಬಳಿ ಬರುತ್ತಾರೆ. ಅಂತಹವರಿಗೆ ನಮ್ಮ ಕೈಲಾದ ಕೆಲಸಗಳನ್ನು ನಾವು ಮಾಡಿಕೊಡಬೇಕು ಹಾಗೂ ಬಂದಂತವರು ಯಾರೇ ಆಗಿರಲಿ. ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸದೇ ಕೆಲಸ ಮಾಡಿಕೊಡುವುದು ನಮ್ಮ ಕರ್ತವ್ಯ ಎಂದರು. ಕರೋನಾ, ಬೆಳೆ ಸಮೀಕ್ಷೆ, ನೆರೆಹಾವಳಿ, ಅನಾವೃಷ್ಟಿ, ಚುನಾವಣೆ ಹೀಗೆ ಎಲ್ಲಾ ಕಾರ್ಯಗಳಿಗೂ ಸರ್ಕಾರಕ್ಕೆ ಕಂದಾಯ ಇಲಾಖೆ ಬೇಕೇ ಬೇಕು. ಆದ್ದರಿಂದ ಇಲಾಖೆಯಲ್ಲಿ ಕೆಲಸ ಮಾಡುವ ನಾವು ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು. ಸರ್ಕಾರಿ ಗೋಮಾಳ ಜಮೀನು, ಅಥವಾ ರೈತರ ಸ್ವಂತ ಭೂಮಿಯ ಬಗ್ಗೆ ವರದಿಯನ್ನು ಕೊಡಬೇಕಾದರೆ ಬಹಳ ಎಚ್ಚರಿಕೆಯಿಂದ ವರದಿ ಮಾಡಿ. ಇಲ್ಲದಿದ್ದರೆ ರೈತರ ಭೂಮಿ ಅಥವಾ ಸರ್ಕಾರಿ ಗೋಮಾಳ ಬೇರೆಯವರಿಗೆ ಹೋಗಬಹುದು. ಆದ್ದರಿಂದ ವರದಿಯಲ್ಲಿ ಯಾರಿಗೂ ಮೋಸ ಆಗಬಾರದು ಎಂದರು.
ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ಹುಟ್ಟುವ ಮಗುವಿನಿಂದ ಹಿಡಿದು ಸಾಯುವ ಪ್ರತೀ ವ್ಯಕ್ತಿಯ ಹಲವು ದಾಖಲೆಗಳನ್ನು ಕಂದಾಯ ಇಲಾಖೆಯೇ ಕೊಡಬೇಕಾಗಿರುತ್ತದೆ. ರೈತರು, ವಿದ್ಯಾರ್ಥಿಗಳು ಮತ್ತು ಸರ್ಕಾರಿ ಕೆಲಸ ಹುಡುಕುತ್ತಿರುವ ಯುವಕರು ಕಂದಾಯ ಇಲಾಖೆಗೆ ಬಂದೇ ಬರುತ್ತಾರೆ. ಅವರ ಕೆಲಸ ಆಗುವುದಿದ್ದರೆ ತಕ್ಷಣ ಮಾಡಿಕೊಡಿ ಎಂದು ಕಂದಾಯ ನೌಕರರಿಗೆ ಕಿವಿಮಾತು ಹೇಳಿದರು.ನಾಲ್ವರಿಗೆ ಸನ್ಮಾನಃ ಕಂದಾಯ ಇಲಾಖೆ ದಿನಾಚರಣೆ ಅಂಗವಾಗಿ ಗ್ರಾಮ ಸಹಾಯಕರಾದ ಜಯಪ್ಪ, ಸತೀಶ್, ಬಸವರಾಜು ಹಾಗೂ ಪರಮೇಶ್ ಅವರಿಗೆ ಎ.ಸಿ. ಮತ್ತು ತಹಸೀಲ್ದಾರ್ ಸನ್ಮಾನಿಸಿದರು.ಗ್ರೇಡ್- 2 ತಹಸೀಲ್ದಾರ್ ಸುರೇಶ್, ಗ್ರಾಮಾ ಆಡಳಿತಾಧಿಕಾರಿ ಸಂಘದ ತಾಲೂಕು ಅಧ್ಯಕ್ಷ ದೊಡ್ಡೇಶ್, ಉಪ ತಹಸೀಲ್ದಾರ್ ಚಂದ್ರಪ್ಪ, ಚುನಾವಣಾ ಶಿರಸ್ತೇದಾರ್ ರಫಿ, ರವಿಕುಮಾರ್, ದೀಪಕ್, ನಾಗರಾಜ್ ರಮೇಶ್, ನಾಗರಾಜ್ ಹಾಗೂ ಅನಿತಾ ಮಾತನಾಡಿದರು.ಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಗಳಾದ ಮಂಜುನಾಥ್ ಇಂಗಳಗೊಂದಿ, ದೀಪಕ್, ರಮೇಶ್, ಎಚ್.ಆರ್.ಬಸವರಾಜ್, ಮಂಜುನಾಥ್, ರವಿಕುಮಾರ್, ಸುಜಾತ, ಶಿಲ್ಪ, ಅನಿತಾ ಹಾಗೂ ಇತರರು ಇದ್ದರು.
----1ಎಚ್.ಎಲ್.ಐ1
ಕಂದಾಯ ಇಲಾಖೆ ದಿನಾಚರಣೆ ಅಂಗವಾಗಿ ನಾಲ್ವರು ಗ್ರಾಮ ಸಹಾಯಕರನ್ನು ಹೊನ್ನಾಳಿ ಉಪ ವಿಭಾಗಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ ಸನ್ಮಾನಿಸಿದರು. ಗ್ರೇಡ್ 2 ತಹಸೀಲ್ದಾರ್ ಸುರೇಶ್, ಉಪ ತಹಸೀಲ್ದಾರ್ ಚಂದ್ರಪ್ಪ, ಗ್ರಾಮಾ ಆಡಳಿತಾಧಿಕಾರಿ ದೊಡ್ಡೇಶ್ ಹಾಗೂ ಇತರರು ಉಪಸ್ಥಿತರಿದ್ದರು.