ಕನ್ನಡಪ್ರಭ ವಾರ್ತೆ ಮಂಡ್ಯ
ಬಕ್ರೀದ್ ಹಬ್ಬದ ಆಚರಣೆ ವೇಳೆ ದೊಡ್ಡ ಪ್ರಾಣಿಗಳಾದ ಗೋವು ಹಾಗೂ ಒಂಟೆಗಳನ್ನು ವಧೆ ಮಾಡುವುದು ಕಾನೂನು ಬಾಹಿರ ಚಟುವಟಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಎಚ್ಚರಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಾಣಿ ದಯಾ ಸಂಘ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಮನಗರ- ಮದ್ದೂರು ಗಡಿ ಭಾಗದಲ್ಲಿ ಹಾಗೂ ನಾಗಮಂಗಲ- ಕೆ.ಆರ್.ಪೇಟೆ ಗಡಿಭಾಗದಲ್ಲಿ ಅಕ್ರಮ ಪ್ರಾಣಿ ಸಾಗಾಣಿಕೆ ನಡೆಯಬಹುದು. ಇದರ ಕುರಿತು ನಿಗಾ ವಹಿಸಿ ಪೊಲೀಸ್ ಚೆಕ್ ಪೋಸ್ಟ್ ಗಳಲ್ಲಿ ಅಗತ್ಯ ಸಿಬಂದಿ ನಿಯೋಜಿಸಿ ತಪಾಸಣೆ ನಡೆಸುವಂತೆ ಜಿಲ್ಲಾ ಎಸ್ಪಿಗೆ ಸೂಚಿಸಿದರು.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ದೊಡ್ಡ ಪ್ರಾಣಿಗಳಾದ ಒಂಟೆ, ಹಸು ಇತ್ಯಾದಿ ಪ್ರಾಣಿಗಳ ಬಲಿ ಕೊಡದಿರುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬಕ್ರಿದ್ ಹಬ್ಬದಂದು ಪಶುಪಾಲನ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ ನಗರಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಪ್ರಾಣಿ ಬಲಿ ತಡೆಗಟ್ಟುವ ಸಂಬಂಧ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು.
ಇದೇ ವೇಳೆ ಜಿಲ್ಲೆಯ ವಿವಿಧ ಗೋಶಾಲೆ ಟ್ರಸ್ಟ್ ಗಳಿಗೆ ಸರ್ಕಾರದಿಂದ ಸಹಾಯಧನ ಒದಗಿಸುವ ಬಗ್ಗೆ ಚರ್ಚಿಸಲಾಯಿತು.ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಶುವೈದ್ಯಾಧಿಕಾರಿ ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
ಬಾಲಕಿ ಸಾವಿನ ಪ್ರಕರಣ: ತಜ್ಞರ ತಂಡದಿಂದ ತನಿಖೆ ಶುರುಕನ್ನಡಪ್ರಭ ವಾರ್ತೆ ಮಂಡ್ಯ
ಮಿಮ್ಸ್ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆಂಬ ಪ್ರಕರಣ ಕುರಿತಂತೆ ತಜ್ಞರ ತಂಡ ಶುಕ್ರವಾರದಿಂದ ತನಿಖೆ ಆರಂಭಿಸಿದೆ.ಮೈಸೂರು ಮೆಡಿಕಲ್ ಕಾಲೇಜಿನ ಡಾ.ಪ್ರದೀಪ್ ನೇತೃತ್ವದ ತಂಡ ಏಳು ವರ್ಷದ ಸಾನ್ವಿ ಸಾವಿನ ಬಗ್ಗೆ ಮಿಮ್ಸ್ ವೈದ್ಯರ ವಿಚಾರಣೆ ನಡೆಸಿತು. ಆಪರೇಷನ್ ಗೂ ಮುನ್ನ ಹಾಗೂ ಆಪರೇಷನ್ ಬಳಿಕ ನೀಡಿರುವ ಔಷಧಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು. ಸ್ವಾನ್ವಿಗೆ ನೀಡಿರುವ ಔಷಧದಲ್ಲಿ ವ್ಯತ್ಯಾಸ ಆಗಿದಿಯಾ?, ಓವರ್ ಡೋಸ್ನಿಂದ ಮಗು ಸಾವನ್ನಪ್ಪಿದೆಯೇ ಎಂಬ ಬಗ್ಗೆ ವಿಷಯ ಕಲೆಹಾಕಿತು.
ಯಾವ ವಿಭಾಗದಲ್ಲಿ ತಪ್ಪಾಗಿದೆ ಎಂಬುದನ್ನು ತಂಡ ತನಿಖೆ ನಡೆಸಲಿದ್ದು, ವಿಚಾರಣೆಗೆ ಹಾಜರಾಗುವಂತೆ ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಮಗು ಪೋಷಕರಿಗೆ ನೋಟೀಸ್ ಜಾರಿಗೊಳಿಸಿದೆ. ಅವರ ವಿಚಾರಣೆ ನಡೆಸಿದ ಬಳಿಕ ವರದಿ ಸಿದ್ಧಪಡಿಸಲಿದೆ ಎಂದು ಹೇಳಲಾಗಿದೆ.