ಡಂಬಳ: ಭೂಮಿಯ ಮೇಲಿನ ನೈಸರ್ಗಿಕ ಜೀವಸಂಕುಲವನ್ನು ರಕ್ಷಿಸುವುದು ಮತ್ತು ಪರಿಸರದ ಸಮತೋಲವನ್ನು ಕಾಪಾಡುವುದು, ಜೀವವೈವಿಧ್ಯದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಗ್ರಾಪಂ ಆಡಳಿತಾಧಿಕಾರಿ ಗುರುರಾಜ ಚವ್ಹಾಣ ತಿಳಿಸಿದರು.
ಪ್ರಾಣಿ ಹಾಗೂ ಸಸ್ಯ ಸಂಕುಲಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಎಲ್ಲ ಜೀವವೈವಿಧ್ಯಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯಿಂದಾಗಿ ಲಕ್ಷಾಂತರ ಜೀವ ಪ್ರಭೇದಗಳು ಅಳಿವಿನ ಭೀತಿಯಲ್ಲಿವೆ. ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮದಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂದರು.
ತಾಲೂಕು ಯೋಜನಾಧಿಕಾರಿ ವಿಜಯಕುಮಾರ ಬೆಣ್ಣಿ ಮಾತನಾಡಿ, ನೀರು, ಗಾಳಿ, ಪರಿಸರ, ಮಣ್ಣಿನ ಆರೋಗ್ಯದಂಥ ಪ್ರಾಕೃತಿಕ ಅಂಶಗಳ ನಿರ್ವಹಣೆ, ರೋಗಗಳ ಅಪಾಯ ತಗ್ಗಿಸುವುದು, ನೈಸರ್ಗಿಕ ಪರಿಹಾರದ ಮೂಲಕ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದರಿಂದ ಮನುಷ್ಯ ಹಾಗೂ ಪ್ರಕೃತಿಗೆ ನೆರವಾಗಬೇಕು ಎಂದರು.ಅಹಿಂದ ಜನತಾ ಸಂಘದ ಅಧ್ಯಕ್ಷ ಪ್ರಕಾಶ ಮೇಗೂರ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ಗದಗಿನ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಬೇಕು. ಕಾಡು ಮತ್ತು ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ಅನ್ನು ತಡೆಗಟ್ಟಬೇಕು. ಶಾಲಾ ಕಾಲೇಜುಗಳಲ್ಲಿ ವನ್ಯಜೀವಿಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಶಿಕ್ಷಣ ನೀಡಬೇಕು ಎಂದರು.